ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಮಂಚಹಳ್ಳಿ ಗ್ರಾಮಕ್ಕೆ 24x7 ನೀರು ಸರಬರಾಜು ಘೋಷಣೆ ಮಾಡಲಾಗಿದ್ದು, ಜಿಲ್ಲೆಗೆ ಮಂಚಹಳ್ಳಿ ಪ್ರಥಮ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಜೆಜೆಎಂ ಯೋಜನೆಯಲ್ಲಿ 163 ಹಳ್ಳಿಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಗೆ ಮೊದಲ ತಾಲೂಕಾಗಲಿದೆ. ನಾನು ಶಾಸಕನಾದ ನಂತರ ಜೆಜೆಎಂ ಯೋಜನೆ ಸಂಪೂರ್ಣ ಯಶಸ್ಸಾಗಿದೆ ಎಂದರು. ತಾಲೂಕಿನ ನಜೀರ್ ಸಾಬ್ ಕಾಲದಲ್ಲಿ ಬೋರ್ ಕೊರೆಸಿ ಜನತೆಗೆ ನೀರು ಕೊಟ್ಟರು. ನನ್ನ ತಂದೆ ದಿ.ಎಚ್.ಎಸ್.ಮಹದೇವಪ್ರಸಾದ್ ರ ಕಾಲದಲ್ಲಿ ಬಹುಗ್ರಾಮ ಯೋಜನೆ ಜಾರಿಗೆ ತಂದು ಕುಡಿಯುವ ನೀರು ಕೊಟ್ಟರು ಎಂದು ಮೆಲಕು ಹಾಕಿದರು.
ಪೇಟೆಗೂ ನೀರು:ಗುಂಡ್ಲುಪೇಟೆ ಪಟ್ಟಣಕ್ಕೂ ಎಕ್ಸ್ಪ್ರೆಸ್ ಲೈನ್ ಕಾಮಗಾರಿ ಪೂರ್ಣಗೊಂಡು ಟ್ರಯಲ್ ಮಾಡಲಾಗಿದೆ. 6500 ಜನರು ಸಂಪರ್ಕ ಪಡೆದಿದ್ದಾರೆ ಎಂದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಆನಂದಮೂರ್ತಿ ಎಸ್ ಮಾತನಾಡಿ, ಜೆಜೆಎಂ ಯೋಜನೆಯಲ್ಲಿ ಜಿಲ್ಲೆ 3 ನೇ ಸ್ಥಾನದಲ್ಲಿದೆ ಹಾಗೂ ತಾಲೂಕಿನಲ್ಲಿ 191 ಹಳ್ಳಿಗಳಲ್ಲಿ 163 ಹಳ್ಳಿಗಳಲ್ಲಿ ಕಾಮಗಾರಿ ಮುಗಿದಿದೆ ಎಂದರು. ಇನ್ನೂ 27 ಹಳ್ಳಿಗಳಲ್ಲಿ ಜೆಜೆಎಂ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಮುಗಿಸಿ ರಾಜ್ಯದಲ್ಲೆ ಪ್ರಥಮ ಎಂದು ಘೋಷಿಸಲು ಚಿಂತನೆ ನಡೆಸಲಾಗಿದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹ ಭಾಗಿತ್ವದಲ್ಲಿ ಜೆಜೆಎಂ ಯೋಜನೆಯಲ್ಲಿ ಶುದ್ದ ಕುಡಿಯುವ ನೀರು ಕೊಡಲು ಮುಂದಾಗಿದೆ. ಈ ಯೋಜನೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಷಣ್ಮುಗ ಸಭೆಯಲ್ಲಿ ಪ್ರತಿಜ್ಞಾ ವಿಧಿಯನ್ನು ಘೋಷಿಸಿದರು.
ವರ್ಷದಲ್ಲಿ ಜಿಲ್ಲಾದ್ಯಂತ 24x7ನೀರು
ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಇನ್ನೊಂದು ವರ್ಷದಲ್ಲಿ 24x7ನೀರು ಸರಬರಾಜು ಮಾಡಲು ಪ್ರಯತ್ನ ನಡೆಸಿದ್ದು, ಮಂಚಹಳ್ಳಿ ಗ್ರಾಮ ಜಿಲ್ಲೆಗೆ ಹೈಲೆಟ್ ಗ್ರಾಮವಾಗಿದೆ ಎಂದು ಜಿಪಂ ಸಿಇಒ ಮೋನಾ ರೋತ್ ಹೇಳಿದರು. ಮಂಚಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಗ ಮಂದಿರದಲ್ಲಿ ಜಿಪಂ, ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ಇಲಾಖೆ,ತಾಪಂ, ಆಲತ್ತೂರು ಗ್ರಾಪಂ, ಜಲ ಜೀವನ್ ಮಿಷನಗ ಯೋಜನೆ ಮತ್ತು ಕರ್ನಾಟಕ ಸುಸ್ಥಿರ ಕುಡಿಯುವ ನೀರು ಸರಬರಾಜು ಯೋಜನೆ(KSRWSP) ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣೆಯ ಸಾಂಸ್ಥಿಕರಣದ ಬಲವರ್ಧನೆಯ ಅಂಗವಾಗಿ ಮಂಚಹಳ್ಳಿ ಗ್ರಾಮದ 24x7 ನೀರು ಸರಬರಾಜು ಘೋಷಣೆ ಸಮಾರಂಭದಲ್ಲಿ ಮಾತನಾಡಿದರು.