ಹಾಸನ ಕಾಮಗಾರಿಗೆ ರೈಲುಗಳ ರದ್ದು: ಮುಂಗಡ ಟಿಕೆಟ್‌ ಕಾಯ್ದಿರಿಸಿದವರಿಗೆ ಸಂಕಷ್ಟ

KannadaprabhaNewsNetwork | Published : Dec 16, 2023 2:00 AM

ಸಾರಾಂಶ

ಹಾಸನದಲ್ಲಿ ರೈಲು ಹಳಿ ಕಾಮಗಾರಿ ಹಿನ್ನೆಲೆಯಲ್ಲಿ ಡಿ.೨೨ರ ವರೆಗೆ ಮಂಗಳೂರು- ಬೆಂಗಳೂರು ರೈಲು ಸಂಚಾರ ರದ್ದು ಮಾಡಲಾಗಿದೆ. ಮುಂಗಡ ಟಿಕೆಟ್‌ ಬುಕ್‌ ಮಾಡಿದವರಿಗೆ ಸಂಕಷ್ಟ ಎದುರಾಗಿದೆ. ಕೇವಲ ಒಂದು ವಾರ ಮೊದಲಷ್ಟೇ ರೈಲು ರದ್ದು ಬಗ್ಗೆ ಪ್ರಕಟಣೆ ಹೊರಡಿಸಿದ ಇಲಾಖೆ

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರುಹಾಸನದಲ್ಲಿ ರೈಲು ಯಾರ್ಡ್‌ ಉನ್ನತೀಕರಿಸುವ ಕಾಮಗಾರಿ ಹಿನ್ನೆಲೆಯಲ್ಲಿ ರಾಜಧಾನಿ ಸಂಪರ್ಕಿಸುವ ಕೆಲವು ರೈಲುಗಳ ಓಡಾಟ ದಿಢೀರ್‌ ರದ್ದುಪಡಿಸಲಾಗಿದೆ. ಪ್ರತಿದಿನ ಪ್ರಯಾಣಿಕರ ದಟ್ಟಣೆ ಹೊಂದಿರುವ ಮಂಗಳೂರು-ಬೆಂಗಳೂರು ನಡುವೆ ಈಗ ಮೂರು ರೈಲುಗಳ ಬದಲು ಒಂದೇ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದು ಕೂಡ ಬೆಂಗಳೂರು ಹೊರವಲಯ ಮೂಲಕ ಸಂಚರಿಸುವುದರಿಂದಾಗಿ ಯಾರಿಗೂ ಪ್ರಯೋಜನವಿಲ್ಲದಂತಾಗಿದೆ. ಈ ಮಧ್ಯೆ ಮುಂಗಡ ಟಿಕೆಟ್‌ ಕಾಯ್ದಿರಿಸಿದ ಮಂದಿ ಪರ್ಯಾಯ ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಂಗಳೂರು-ಬೆಂಗಳೂರು ನಡುವೆ ಪ್ರತಿದಿನ ಮೂರು ರೈಲುಗಳು ಸಂಚರಿಸುತ್ತಿವೆ. ಪಂಚಗಂಗಾ ಎಕ್ಸ್‌ಪ್ರೆಸ್‌, ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್‌ ಹಾಗೂ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ ರೈಲು ಓಡಾಟ ನಡೆಸುತ್ತಿದೆ. ಹಾಸನದಲ್ಲಿ ರೈಲ್ವೆ ಕಾಮಗಾರಿಗಾಗಿ ಡಿ.14ರಿಂದ 22ರ ವರೆಗೆ ಮೆಗಾ ಬ್ಲಾಕ್‌ ನಡೆಸಲಾಗಿದೆ. ಇದರಿಂದಾಗಿ ಕರಾವಳಿ ಹಾಗೂ ರಾಜಧಾನಿ ಬೆಂಗಳೂರು ಸಂಪರ್ಕಿಸುವ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಅದರಲ್ಲೂ ದಿನವೂ ತುಂಬಿತುಳುಕುತ್ತಿದ್ದ ಮಂಗಳೂರು-ಬೆಂಗಳೂರು, ಕಣ್ಣೂರು ಹಾಗೂ ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲುಗಳು ಒಂಭತ್ತು ದಿನಗಳ ಕಾಲ ಓಡಾಟ ಸ್ಥಗಿಗೊಳಿಸಬೇಕಾಗಿದೆ. ಇದು ಮುಂಗಡ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರಿಗೆ ಪ್ರತಿಕೂಲ ಪರಿಣಾಮ ಬೀರುವಂತಾಗಿದೆ. ವರ್ಷಾಂತ್ಯವಾದ್ದರಿಂದ ಖಾಸಗಿ ಬಸ್ಸುಗಳ ದರ ದುಬಾರಿಯಾಗಿದ್ದು, ಪ್ರಯಾಣಿಕರ ಕಿಸೆಗೆ ಕತ್ತರಿ ಬೀಳಲಿದೆ.

ಮುಂಗಡ ಬುಕ್ಕಿಂಗ್‌ನವರಿಗೆ ಸಮಸ್ಯೆ:

ಹಾಸನ ಕಾಮಗಾರಿ ಸಲುವಾಗಿ ರೈಲು ಸಂಚಾರ ಮೊಟಕುಗೊಳಿಸಿರುವುದಕ್ಕೆ ಪ್ರಯಾಣಿಕರ ಆಕ್ಷೇಪವಿಲ್ಲ. ಬದಲು ಕನಿಷ್ಠ ಒಂದು ತಿಂಗಳ ಸಮಯಾವಕಾಶ ನೀಡದೆ ಒಂದು ವಾರದ ಸೀಮಿತ ಅವಧಿಯಲ್ಲಿ ರೈಲು ಸಂಚಾರ ರದ್ದುಗೊಳಿಸಿರುವ ಪ್ರಕಟಣೆ ಹೊರಡಿಸಿರುವುದು ಸರಿಯಲ್ಲ ಎನ್ನುತ್ತಿದ್ದಾರೆ. ಈ ರೈಲುಗಳಲ್ಲಿ ಮಂಗಳೂರು-ಬೆಂಗಳೂರು ನಡುವೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಿರುತ್ತಾರೆ. ಸುಮಾರು ಮೂರು ತಿಂಗಳಿಗೂ ಮೊದಲೇ ಮುಂಗಡ ಟಿಕೆಟ್‌ ಕಾಯ್ದಿರಿಸುತ್ತಾರೆ. ಈಗ ದಿಢೀರನೆ ರದ್ದುಗೊಳಿಸಿರುವುದರಿಂದ ವಿವಿಧ ಕಡೆಗಳಿಗೆ ತೆರಳುವವರು ಅನಿವಾರ್ಯವಾಗಿ ಪರ್ಯಾಯ ಸಂಚಾರ ವ್ಯವಸ್ಥೆಯ ಮೊರೆ ಹೋಗಬೇಕಾಗಿದೆ.

ಬಸ್‌ಗಳಲ್ಲಿ ಮತ್ತೆ ಮುಂಗಡ ಟಿಕೆಟ್‌ಗೆ ಪರದಾಟ ನಡೆಸಬೇಕು. ಅಲ್ಲದೆ ರೈಲು ಪ್ರಯಾಣಕ್ಕೆ ಹೋಲಿಸಿದರೆ ಬಸ್‌ ಪ್ರಯಾಣ ದುಬಾರಿ ಇರುವುದರಿಂದ ಹೆಚ್ಚಿನ ಮೊತ್ತ ತೆರಬೇಕು. ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ ಬಸ್‌ಗಳಲ್ಲಿ ದರ ತುಸು ಹೆಚ್ಚು ಇರುತ್ತದೆ. ಮೂರು ರೈಲುಗಳಲ್ಲಿ ತೆರಳುವವರು ಈಗ ಬಸ್‌ನಲ್ಲಿ ಹೆಚ್ಚು ದರ ತೆತ್ತು ತೆರಳಬೇಕು. ವೃದ್ಧರಿಗೆ, ಅನಾರೋಗ್ಯಪೀಡಿತರಿಗೆ, ಸಣ್ಣಪುಟ್ಟ ಮಕ್ಕಳಿಗೆ ರೈಲಿಗಿಂತ ಬಸ್‌ ಪ್ರಯಾಣ ಸಹಕಾರಿಯಾಗದು. ಕರಾವಳಿಯಲ್ಲಿ ಉತ್ಸವಗಳ ಸೀಸನ್‌ ಶುರುವಾಗಿದ್ದು, ಈಗಾಗಲೇ ಬಸ್‌ಗಳಲ್ಲಿ ಕೂಡ ಸೀಟ್‌ ಬುಕ್ಕಿಂಗ್‌ ಆಗಿರುತ್ತದೆ. ಇನ್ನು ರದ್ದುಗೊಂಡ ರೈಲು ಪ್ರಯಾಣಿಕರು ಬಸ್‌ಗಳಲ್ಲಿ ಸಾಕಷ್ಟು ಮುಂಗಡ ಸೀಟಿಗೆ ಏನು ಮಾಡಬೇಕು ಎಂಬ ಪ್ರಶ್ನೆ ತಲೆದೋರಿದೆ.

ಒಂದು ರೈಲು ಇದ್ದರೂ ನಿಷ್ಪ್ರಯೋಜನ

ಹಾಸನ ರೈಲು ನಿಲ್ದಾಣಕ್ಕೆ ಶ್ರವಣಬೆಳಗೊಳ, ಅರಸೀಕೆರೆ, ಮಂಗಳೂರು ಹಾಗೂ ಮೈಸೂರು ಕಡೆಗಳಿಂದ ರೈಲು ಬಂದು ಸೇರುತ್ತದೆ. ಹೀಗಾಗಿ ಅಲ್ಲಿನ ಟ್ರಾಫಿಕ್‌ ನಿಭಾಯಿಸಲು ಕಾಮಗಾರಿ ನಡೆಸಲಾಗುತ್ತಿದೆ. ಈಗಾಗಲೇ ರೈಲು ಸಂಚಾರ ಸ್ಥಗಿತಗೊಳಿಸಿ ಕಾಮಗಾರಿ ಆರಂಭಿಸಿರುವುದರಿಂದ ಬೆಂಗಳೂರು-ಮಂಗಳೂರು ನಡುವೆ ಒಂದು ರೈಲು ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ನಂಬರು 16585/ 16586 ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲು(ವಯಾ ಅರಸೀಕೆರೆ) ಮಾತ್ರ ಒಂಭತ್ತು ದಿನಗಳ ಕಾಲ ಸಂಚರಿಸಲಿದೆ. ಹಾಸನದಲ್ಲಿ ಹಗಲು ರಾತ್ರಿ ಕಾಮಗಾರಿ ನಡೆಯುತ್ತಿರುವುದರಿಂದ ಇತರೆ ರೈಲುಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ಈ ರೈಲು ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಟು ಮರುದಿನ ಬೆಳಗ್ಗೆ 8.30 ಮಂಗಳೂರು, ಮಧ್ಯಾಹ್ನ 1 ಗಂಟೆ ಮುರುಡೇಶ್ವರ. ಸಂಜೆ ಮುರುಡೇಶ್ವರದಿಂದ ಹೊರಟು ರಾತ್ರಿ 8.30ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತದೆ. ಮರುದಿನ 8.30ಕ್ಕೆ ಬೆಂಗಳೂರು ತಲುಪುತ್ತದೆ ಎಂದು ವೇಳಾಪಟ್ಟಿ ನೀಡಲಾಗಿದೆ. ವಾಸ್ತವದಲ್ಲಿ ಈ ರೈಲು ಬೆಂಗಳೂರು ಕೆಎಸ್ಆರ್‌ ರೈಲು ನಿಲ್ದಾಣ(ಮೆಜೆಸ್ಟಿಕ್‌) ಅಥವಾ ಯಶವಂತಪುರದಿಂದ ಹೊರಡುತ್ತಿಲ್ಲ. ಅದರ ಬದಲು ಬೈಯಪ್ಪನಹಳ್ಳಿಯಿಂದ ವಯಾ ಚಿಕ್ಕಬಾಣಾವರ ಮೂಲಕ ಬೆಂಗಳೂರು ಹೊರವಲಯದಿಂದಾಗಿ ತುಮಕೂರು, ಅರಸೀಕೆರೆ ಮೂಲಕ ಸಂಚರಿಸುತ್ತದೆ. ಹೀಗಾದಲ್ಲಿ ಇದು ಬೆಂಗಳೂರು ಅಥವಾ ಮಂಗಳೂರಿನ ಪ್ರಯಾಣಿಕರಿಗೆ ಉಪಯೋಗವಾಗದು. ಇದೇ ಕಾರಣಕ್ಕೆ ನಮ್ಮ ಪರಿಚಯಸ್ಥರಿಗೆ ಬೆಂಗಳೂರಿನಿಂದ ಮಂಗಳೂರಿಗೆ ಬರಲು ಸಾಧ್ಯವಾಗಿಲ್ಲ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಜಿ.ಕೆ.ಭಟ್‌.ಹಾಸನದಲ್ಲಿ ರೈಲ್ವೆ ಕಾಮಗಾರಿಗೆ ವಿರೋಧವಿಲ್ಲ, ಆದರೆ ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ಕನಿಷ್ಠ ಒಂದು ತಿಂಗಳು ಮೊದಲೇ ಕಾಮಗಾರಿಗೆ ರೈಲು ಸಂಚಾರ ಸ್ಥಗಿತಗೊಳಿಸುವ ಬಗ್ಗೆ ಮಾಹಿತಿ ನೀಡಬೇಕಿತ್ತು. ಕೇವಲ ಒಂದು ರೈಲು ಸಂಚಾರಕ್ಕೆ ಅವಕಾಶ ನೀಡಿ ಉಳಿದ ಮೂರು ರೈಲುಗಳನ್ನು ರದ್ದುಗೊಳಿಸದೆ ತಾತ್ಕಾಲಿಕ ಸಂಚಾರಕ್ಕೆ ಅವಕಾಶ ನೀಡಬೇಕಾಗಿತ್ತು.

-ಹನುಮಂತ ಕಾಮತ್‌, ಅಧ್ಯಕ್ಷರು, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ, ಮಂಗಳೂರುದಿನದ 24 ಗಂಟೆಯೂ ಹಾಸನದಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಡಿ.22ರಂದು ಮುಕ್ತಾಯಗೊಂಡು ಅಂದೇ ರಾತ್ರಿಯಿಂದ ರಾಜಧಾನಿ-ಮಂಗಳೂರು ನಡುವೆ ರೈಲು ಸಂಚಾರ ಪುನಾರಂಭವಾಗಲಿದೆ. ಸದ್ಯದ ಮಟ್ಟಿಗೆ ಒಂದೇ ರೈಲು ಸಂಚಾರ ಉಳಿಸಿಕೊಳ್ಳಲಾಗಿದೆ. ಪ್ರಯಾಣಿಕರು ಅನಿವಾರ್ಯವಾಗಿ ಸಹಕರಿಸಬೇಕಾಗಿದೆ.

-ವಿಜಯಾ, ಎಡಿಆರ್‌ಎಂ, ಮೈಸೂರು ವಿಭಾಗ

Share this article