ಕನ್ನಡ ಸಾಹಿತ್ಯ ಬೆಳೆದು ಬಂದ ಬಗೆ ಕುರಿತು ಉಪನ್ಯಾಸ
ಗದಗ: ಇಂದಿನ ವೈಜ್ಞಾನಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ಕನ್ನಡ ನಾಡು ನುಡಿಯ ಮತ್ತು ಸಾಹಿತ್ಯದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ಬಿ.ಬಿ. ಪಾಟೀಲ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಕಲಾ ವಿಭಾಗದ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಬೆಳೆದು ಬಂದ ಬಗೆಯನ್ನು ಕುರಿತು ಉಪನ್ಯಾಸ ನೀಡಿದರು. ಅಲ್ಲದೆ ಅನೇಕ ಕವಿಗಳು ಲೇಖಕರು ಮೌಲ್ಯಯುತವಾದ ಕಾವ್ಯ ಕೃತಿಗಳ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸಿದ್ದಾರೆ ಎಂದರು. ಉಪ ಪ್ರಾಚಾರ್ಯ ಎಸ್.ಜಿ. ಉಳಿಗೇರ ಮಾತನಾಡಿ, ವಿದ್ಯಾರ್ಥಿಗಳು ಓದುಗಾರಿಕೆಯೊಂದಿಗೆ ಉತ್ತಮ ಹವ್ಯಾಸಗಳನ್ನು ಹೊಂದಿ ಸಾಧನೆಗೈಯಲು ತಿಳಿಸಿದರು. ಉಪನ್ಯಾಸಕ ಶಶಿಕಾಂತ ಕೊರ್ಲಹಳ್ಳಿ ಮಾತನಾಡಿ, ಮಹಾವಿದ್ಯಾಲಯದ ನೀತಿ ನಿಯಮಗಳನ್ನು ವಿದ್ಯಾರ್ಥಿಗಳು ಪಾಲಿಸಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಆದರ್ಶ ವಿದ್ಯಾರ್ಥಿಗಳಾಗಲು ತಿಳಿಸಿದರು ಡಾ.ಎಸ್ ಎಂ. ಮಡಿವಾಳರ ಮುಂತಾದವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಲ್.ಎಸ್. ಪಾಟೀಲ ವಿದ್ಯಾರ್ಥಿಗಳ ಜವಾಬ್ದಾರಿಗಳನ್ನು ತಿಳಿಸಿ ಸತತ ಅಧ್ಯಯನ ಶೀಲರಾಗಿ ಸಾಧನೆ ಗೈದು ಮಹಾವಿದ್ಯಾಲಯಕ್ಕೆ ಕೀರ್ತಿ ತರಬೇಕು ಎಂದರು. ಶ್ರೀದೇವಿ ಕುರಿ ಹಾಗೂ ಸಂಗಡಿಗರ ಪ್ರಾರ್ಥಿಸಿದರು. ಸಾಂಸ್ಕೃತಿಕ ವೇದಿಕೆಯ ಕಾರ್ಯಾಧ್ಯಕ್ಷ ಎಮ್.ಡಿ. ಮಾದರ ಸ್ವಾಗತಿಸಿದರು. ಬಸವರಾಜ ತಳವಾರ ಪುಷ್ಪಾರ್ಪಣೆ ಕಾರ್ಯಕ್ರಮ ನಿರ್ವಹಿಸಿದರು. ಭಾಗ್ಯ ಎ. ನಿರೂಪಿಸಿದರು. ಬಸವರಾಜ ತಳವಾರ ವಂದಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.