ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ತಾಲೂಕಿನಲ್ಲಿ ಸೋಮವಾರ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಮಹಿಳೆಯರು ಮತ್ತು ಮಕ್ಕಳು ಹೊಸ ಬಟ್ಟೆ ಧರಿಸಿ ನಾಗದೇವರಿಗೆ ಪೂಜೆ ಸಲ್ಲಿಸಿ, ಹಾಲು, ಹೂವು, ಹಣ್ಣು ಹಾಗೂ ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ಕಮಲನಗರ: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ತಾಲೂಕಿನಲ್ಲಿ ಸೋಮವಾರ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಮಹಿಳೆಯರು ಮತ್ತು ಮಕ್ಕಳು ಹೊಸ ಬಟ್ಟೆ ಧರಿಸಿ ನಾಗದೇವರಿಗೆ ಪೂಜೆ ಸಲ್ಲಿಸಿ, ಹಾಲು, ಹೂವು, ಹಣ್ಣು ಹಾಗೂ ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ಕಮಲನಗರ ಪಟ್ಟಣದ ನಾಗೋಬಾ ಮಂದಿರದಲ್ಲಿ ಮಹಿಳೆಯರು ನಾಗಮೂರ್ತಿಗೆ ಹಾಲೆರೆದು ವಿಶೇಷ ಪೂಜೆ ನೆರವೇರಿಸಿದರು. ತಾಲೂಕಿನ ಡಿಗ್ಗಿ, ಹೋಳಸಮುದ್ರ, ಸೋನಾಳ, ಕೊಟಗ್ಯಾಳ, ಡೋಣಗಾಂವ ಸೇರಿದಂತೆ ವಿವಿಧ ಗ್ರಾಮಗಳ ದೇವಾಲಯಗಳಲ್ಲಿನ ನಾಗಮೂರ್ತಿಗಳು ಹಾಗೂ ಹುತ್ತಗಳಿಗೆ ಬೆಳಗ್ಗೆಯಿಂದಲೇ ಭಕ್ತರು ತೆರಳಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಕೊಬ್ಬರಿ ಬಟ್ಟಲಿನಲ್ಲಿ ಹಾಲು ತುಂಬಿ ನಾಗಪ್ಪನಿಗೆ ಅರ್ಪಿಸಿ ಕುಟುಂಬದ ಒಳಿತಿಗಾಗಿ ಪ್ರಾರ್ಥಿಸಿದರು.ಭಕ್ತರು ಸರತಿ ಸಾಲಿನಲ್ಲಿ ನಿಂತು ಹುತ್ತ ಹಾಗೂ ಕಲ್ಲಿನ ನಾಗಮೂರ್ತಿಗಳಿಗೆ ಹಾಲೆರೆದು ನಮಿಸಿದರು. ಕುಟುಂಬದ ಸದಸ್ಯರ ಹೆಸರಿನಲ್ಲಿ ಪೂಜೆ ಸಲ್ಲಿಸಿ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿಯೂ ಹಬ್ಬದ ಸಡಗರ ಮನೆಮಾಡಿತ್ತು. ಮಹಿಳೆಯರು ಹಾಗೂ ಮಕ್ಕಳು ನಾಗಮೂರ್ತಿಗಳಿಗೆ ಪೂಜೆ ಸಲ್ಲಿಸಿದರೆ, ಯುವಕರು ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ಯುವತಿಯರು ಹಾಗೂ ಮಹಿಳೆಯರು ಜೋಕಾಲಿ ಆಡಿ ಸಂತಸಪಟ್ಟರು. ಮನೆಗಳಲ್ಲಿ ವಿಶೇಷ ನೈವೇದ್ಯ ತಯಾರಿಸಿ ನಾಗದೇವರಿಗೆ ಅರ್ಪಿಸಲಾಯಿತು. ಕುಟುಂಬಸ್ಥರು ಪರಸ್ಪರ ಶುಭಾಶಯ ಕೋರಿಕೊಂಡು ಹಬ್ಬವನ್ನು ಆಚರಿಸಿದರು.
---ಕಮಲನಗರ ಪಟ್ಟಣದ ನಾಗೋಬಾ ಮಂದಿರದಲ್ಲಿ ಸೋಮವಾರ ಮಹಿಳೆಯರು ನಾಗಮೂರ್ತಿಗೆ ಹಾಲೆರೆದು ಪೂಜೆ ಸಲ್ಲಿಸಿದರು.