ಕನ್ನಡಪ್ರಭ ವಾರ್ತೆ ತುರುವೇಕೆರೆ

ಪ್ರತಿ ಚುನಾವಣೆ ವೇಳೆ ದೇವೇಗೌಡರ ಫೋಟೋ ಹಾಕಿಕೊಂಡು ಮತಯಾಚನೆ ಮಾಡ್ತೀರಿ. ಜನರ ಅವರ ಮೇಲಿನ ಅಭಿಮಾನದಿಂದ ನಿಮಗೆ ಮತ ಹಾಕಿದ್ದಾರೆ ಹೊರತು ನಿಮ್ಮ ವರ್ಚಸ್ಸಿನಿಂದ ನೀವು ಗೆದ್ದಿಲ್ಲ ಎಂದು ಬೆಸ್ಕಾಂನ ಮಾಜಿ ನಿರ್ದೇಶಕ ಹಾಗೂ ತಾಲೂಕಿನ ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತ ಕುಮಾರ್ ಶಾಸಕ ಎಂ.ಟಿ.ಕೃಷ್ಣಪ್ಪನವರ ವಿರುದ್ಧ ಕಿಡಿಕಾರಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ಶಾಸಕರು ದೇವೇಗೌಡರ ಭಾವಚಿತ್ರವನ್ನು ಹೊರಗಿಟ್ಟು ಸ್ವತಂತ್ರ್ಯವಾಗಿ ಸ್ಪರ್ಧಿಸಿ ಗೆಲುವು ಸಾಧಿಸಲಿ ನೋಡೋಣ ಎಂದು ಸವಾಲೆಸದ ಅವರು, ತಾಲೂಕಿನಲ್ಲಿ ಕಳೆದ 4 ಬಾರಿ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರೇ ನಿಮ್ಮ ಸಾಧನೆ ಶೂನ್ಯ. ತಾಲೂಕಿನ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ನಾನು ಮಾಡಿರುವ ಸಾಧನೆಯಿಂದ ಕ್ಷೇತ್ರದ ಜನರು ನನ್ನನ್ನು ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತೀರಿ. ಅದು ಸುಳ್ಳು, ನಿಮ್ಮ ಗೆಲುವಿನ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪಾತ್ರವಿದೆ ಎಂದು ಕುಟುಕಿದರು.

ಶಾಸಕ ಎಂ.ಟಿ.ಕೃಷ್ಣಪ್ಪನವರು ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ರಿಯಲ್ ಎಸ್ಟೇಟ್ ವ್ಯಾಪಾರಿ, ಅನನುಭವಿ ಎಂದು ಹೀಗೆಳೆದಿದ್ದಾರೆ. ಆದರೆ ನೀವು ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿಲ್ಲವೇ?. ನಿಮ್ಮ ಕುಟುಂಬದ ಸದಸ್ಯರು ಅಬಕಾರಿ ವ್ಯವಹಾರ ಮಾಡುತ್ತಿಲ್ಲವೇ? ನಿಮ್ಮ ಅಧಿಕಾರದ ಕೊನೆಯ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕ ತಮ್ಮ ಕುಟುಂಬದವರು ಬಾರ್ ತೆರೆಯುವಂತೆ ಮಾಡಿದ್ದೇ ನಿಮ್ಮ ಸಾಧನೆ ಎಂದು ವಸಂತಕುಮಾರ್ ಕುಟುಕಿದರು. ಶಾಸಕರಾಗುವ ಮೊದಲು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಿಮಗೇ ತಾಲೂಕಿನ ಸರ್ಕಾರಿ ನೌಕರರು ಗೌರವ ನೀಡುತ್ತಿಲ್ಲ. ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಜನ ಸಾಮಾನ್ಯರಿಗೆ ಉಚಿತ ಸೇವೆ ಎಂಬುದು ಗಗನ ಕುಸುಮವಾಗಿದೆ. ಯಾವ ಅಧಿಕಾರಿಗಳೂ ಸಹ ಕೈಗೆ ಸಿಗುವುದಿಲ್ಲ. ಜನ ಸಂಪರ್ಕ ಸಭೆ ನಡಸೇ ಇಲ್ಲ. ಜನರ ನೋವು ಕೇಳುವವರೇ ಇಲ್ಲದಾಗಿದೆ.

ಜೆಡಿಎಸ್ ಕಾರ್ಯಕರ್ತರನ್ನು ಛೂ ಬಿಟ್ಟು ಕುಣಿಗಲ್ ಶಾಸಕರಿಗೆ ಹೆಡೆಮಟ್ಟೆ ಸೇವೆ ಮಾಡುವ ಬೆದರಿಕೆ ಹಾಕಿಸಿದ್ದೀರಿ. ಈ ಹಿಂದೆ ನೀವು ಮಾಡಿದ ಹೆಡೆಮಟ್ಟೆ ಸೇವೆ ನಿಮಗೆ ಹೇಗೆ ಮುಳುವಾಯಿತು ಎಂಬುದನ್ನು ನೆನಪಿಸಿಕೊಳ್ಳಿ. ಹೆಡೆಮಟ್ಟೆ ನಿಮ್ಮ ಪಕ್ಷವನ್ನೇ ಸುಡುತ್ತದೇ ವಿನಃ ಬೇರೆ ಯಾರನ್ನೂ ಅಲ್ಲ ಎಂದು ಕಿಡಿಕಾರಿದರು. ಕುಣಿಗಲ್ ಶಾಸಕ ರಂಗನಾಥ್ ರವರನ್ನು ತುರುವೇಕೆರೆಗೆ ಕರೆಸುತ್ತೇವೆ. ಅವರಿಗೆ ಹೆಡೆಮಟ್ಟೆ ಸೇವೆ ಮಾಡಿ ನೋಡಲಿ ಎಂದು ಬಿ.ಎಸ್.ವಸಂತಕುಮಾರ್ ಸವಾಲು ಹಾಕಿದರು.


ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್, ಕಾಂಗ್ರೆಸ್ ಮುಖಂಡರಾದ ಎನ್. ಆರ್. ಜಯರಾಮ್, ಲಕ್ಷ್ಮೀದೇವಮ್ಮ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.