ಬೇಸಿಗೆ ಹಾಗೂ ಹಿಂಗಾರು ಹಂಗಾಮಿಗೆ 35 ಟಿಎಂಸಿ ನೀರನ್ನು ಭದ್ರಾ ಡ್ಯಾಂನಲ್ಲಿ ಉಳಿಸಿಕೊಂಡೇ ಮುಂಗಾರು ಹಂಗಾಮಿನ ಬೆಳೆಗೆ ಒದಗಿಸಲು ಯಾವುದೇ ತಕರಾರಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

- ತರೀಕೆರೆ ತಾ. ಮುತ್ತಿನಕೊಪ್ಪ ಏತ ಯೋಜನೆಗೆ ₹30 ಕೋಟಿ ಕೊಡಿ: ರೇಣುಕಾಚಾರ್ಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೇಸಿಗೆ ಹಾಗೂ ಹಿಂಗಾರು ಹಂಗಾಮಿಗೆ 35 ಟಿಎಂಸಿ ನೀರನ್ನು ಭದ್ರಾ ಡ್ಯಾಂನಲ್ಲಿ ಉಳಿಸಿಕೊಂಡೇ ಮುಂಗಾರು ಹಂಗಾಮಿನ ಬೆಳೆಗೆ ಒದಗಿಸಲು ಯಾವುದೇ ತಕರಾರಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಾದಿಂದ ಭದ್ರಾ ಡ್ಯಾಂಗೆ 17.4 ಟಿಎಂಸಿ ನೀರನ್ನು ಲಿಫ್ಟ್ ಮಾಡಿದ ನಂತರವೇ ಭದ್ರಾ ಮೇಲ್ದಂಡೆಗೆ ನೀರು ಹರಿಸಬೇಕು. ಈಗ ಬೇಸಿಗೆಗೆ ಭದ್ರಾ ಡ್ಯಾಂನಲ್ಲಿ 35 ಟಿಎಂಸಿ ಉಳಿಸಿಕೊಂಡು ನಾಲೆಗೆ ನೀರು ಬಿಡಲಿ ಎಂದರು.

ತುಂಗಾ ನದಿಯಿಂದ ಮೇಲ್ದಂಡೆಗೆಂದು ಭದ್ರಾ ಡ್ಯಾಂಗೆ ನೀರು ಲಿಫ್ಟ್ ಕಾಮಗಾರಿ ಶೇ.90ರಷ್ಟು ಮುಗಿದಿದ್ದು, ಬಾಕಿ ₹30 ಕೋಟಿಯಷ್ಟು ಕಾಮಗಾರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಲಿ. ಎನ್‌.ಆರ್‌.ಪುರ ತಾಲೂಕಿನ ಮುತ್ತಿನಕೊಪ್ಪ ಸಮೀಪ ಕೈಗೆತ್ತಿಕೊಂಡ ಕಾಮಗಾರಿಗೆ ₹30 ಕೋಟಿ ಅಗತ್ಯವಿದೆ. ತುಂಗಾನದಿ ನೀರನ್ನು ಭದ್ರಾ ಜಲಾಶಯಕ್ಕೆ ಲಿಫ್ಟ್‌ ಮಾಡದೇ ಮೇಲ್ದಂಡೆ ನಾಲೆಗೆ ನೀರು ಹರಿಸುವಂತಿಲ್ಲ. ಒಂದುವೇಳೆ ಹೀಗೆ ಮಾಡಿದರೆ ಹೋರಾಟ ಕೈಗೆತ್ತಿಕೊಳ್ಳುವುದು. ₹30 ಕೋಟಿ ಅನುದಾನ ಬಿಡುಗಡೆ, ಅರಣ್ಯ ಇಲಾಖೆ ಅನುಮತಿಗಾಗಿ ಸಿಎಂ ಡಿ.ಕೆ.ಶಿವಕುಮಾರ, ಜಲ ಸಂಪನ್ಮೂಲ, ಅರಣ್ಯ ಇಲಾಖೆ ಸಚಿವರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ ಎಂದರು.

ಎಸ್.ಎ.ರವೀಂದ್ರನಾಥ ಅವರನ್ನು ಒಳಗೊಂಡಂತೆ ಅನೇಕರು ಮಳೆಗಾಲದ ಬತ್ತದ ಬೆಳೆಗೆ ನೀರಿಗಾಗಿ ಒತ್ತಾಯಿಸುತ್ತಿರುವುದೂ ನಮ್ಮ ಗಮನದಲ್ಲಿದೆ. ರವೀಂದ್ರನಾಥ ನಮ್ಮ ನಾಯಕರು. ನೀರು ಬಿಡುವ ಒತ್ತಾಯಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಬೇಸಿಗೆಯಲ್ಲಿ ಕುಡಿಯುವ ನೀರು ನಿರ್ವಹಣೆ, ಇತರೆ ಅಗತ್ಯಕ್ಕೆ ಅನುಗುಣವಾಗಿ ನೀರು ಉಳಿಸಿಕೊಂಡು, ಈಗ ನೀರು ಹರಿಸಿದರೆ ಸಂತೋಷಪಡುತ್ತೇವೆ. ನಮ್ಮ ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ತೊಂದರೆ ಆಗದಂತೆ ಕೊನೆಯ ಭಾಗಕ್ಕೂ ನೀರು ತಲುಪುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದರು.

ಯುವ ಮುಖಂಡ ಮಾಡಾಳ ಮಲ್ಲಿಕಾರ್ಜುನ ಮಾತನಾಡಿ, ತುಂಗಾ ನದಿಯಿಂದ ಭದ್ರಾ ಡ್ಯಾಂಗೆ 17.4 ಟಿಎಂಸಿ ನೀರನ್ನು ಲಿಫ್ಟ್ ಮಾಡಿ, ಭದ್ರಾ ಮೇಲ್ದಂಡೆಯಡಿ ಒಯ್ಯಲಿ. ಅದನ್ನು ಬಿಟ್ಟು ಜಿಲ್ಲೆಯ ಅಚ್ಚುಕಟ್ಟು ರೈತರ ನೀರಿಗೆ ಕೈ ಹಾಕುವುದು ಬೇಡ. ಇನ್ನೂ ಎರಡು ವರ್ಷ ಮಳೆ ಕೊರತೆ, ಬರ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ದೇವರ ದಯೆಯಿಂದ ಉತ್ತಮ ಮಳೆ, ಬೆಳೆ ಆಗಲೆಂದು ಪ್ರಾರ್ಥಿಸುತ್ತೇವೆ. ಭದ್ರಾ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೂ ಭದ್ರಾ ಮೇಲ್ದಂಡೆಗೆ ಪ್ರಾಯೋಗಿಕವಾಗಿ 5.7 ಟಿಎಂಸಿ ನೀರು ಬಿಡುವಂತೆ ಕೇಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಪಕ್ಷದ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಜಿಲ್ಲಾಧ್ಯಕ್ಷ ಚಂದ್ರಶೇಖರ ಪೂಜಾರ, ಬಿ.ಎಂ.ಸತೀಶ ಕೊಳೇನಹಳ್ಳಿ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ದಾಮ್ಕೋಸ್ ಅಧ್ಯಕ್ಷ ಬಾತಿ ಶಿವಕುಮಾರ, ಶಂಕರ ಬಾತಿ, ರಾಜು ತೋಟಪ್ಪ ಇತರರು ಇದ್ದರು.

- - -

(ಬಾಕ್ಸ್‌)

* ಇಂದು ತಾಲೂಕು ಕಚೇರಿಗೆ ಮುತ್ತಿಗೆ

ಗುಟ್ಕಾ ಬ್ಯಾನ್ ಮಾಡುವ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿಕೆ ಖಂಡಿಸಿ ಆ.18ರಂದು ಬೆಳಿಗ್ಗೆ 10ಕ್ಕೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ತಹಸೀಲ್ದಾರ್ ಕಚೇರಿಗೆ ಬಿಜೆಪಿಯಿಂದ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ 3 ವರ್ಷ 4 ತಿಂಗಳಾಗಿದೆ. ಯಾವುದೇ ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಇನ್ನು 1 ವರ್ಷವಷ್ಟೇ ಈ ಸರ್ಕಾರ ಇರಲಿದ್ದು, ಅಲ್ಲಿಂದ ಉಳಿದ ಅ‍ವದಿ ಚುನಾವಣಾ ವರ್ಷವಾಗಿರುತ್ತದೆ. ಹಾಗಾಗಿ ಚುನಾವಣೆಗೆ ದುಡ್ಡು ಮಾಡಲೆಂದೇ ಗುಟ್ಕಾ ಬ್ಯಾನ್ ಗುಮ್ಮ ಬಿಡುತ್ತಿದ್ದಾರೆ.

- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.

- - -

-17ಕೆಡಿವಿಜಿ10: ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಮುಖಂಡರಾದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಡಾಳ ಮಲ್ಲಿಕಾರ್ಜುನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.