ಹೊಸಪೇಟೆ: ಹಂಪಿ ಪರಿಸರದಲ್ಲಿ ಸಂಶೋಧಕರಿಗೆ ಹೊಸ ಅಪ್ರಕಟಿತ ಶಾಸನಗಳು ದೊರೆಯುತ್ತಿವೆ. ಈಗ ವಿಜಯನಗರದ ಸಂಗಮ ವಂಶದ ದೊರೆ ಎರಡನೇ ಪ್ರೌಢದೇವರಾಯನ ಕಾಲಕ್ಕೆ ಸೇರಿದ್ದ ಶಾಸನವೊಂದು ಪತ್ತೆಯಾಗಿದೆ. ಈ ಶಾಸನ ಇತಿಹಾಸಪ್ರಿಯರಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.
ಹಂಪಿಯ ತೆನಾಲಿರಾಮ ಮಂಟಪದ ದಕ್ಷಿಣ ದಿಕ್ಕಿಗೆ ಹಾಗೂ ಮದನಕೊತ್ತಳದ ಸಮೀಪದ ಕಂದಕದ ಹುಟ್ಟು ಬಂಡೆಯ ಮೇಲೆ ಈ ಶಾಸನ ದೊರೆತಿದೆ. ರಾಜ್ಯ ಪುರಾತತ್ವ ಇಲಾಖೆಯ ಉಪನಿರ್ದೇಶಕ ಡಾ.ಆರ್. ಶೇಜೇಶ್ವರ ಮತ್ತು ಪುರಾತತ್ವ ಸಹಾಯಕ ಡಾ.ಮಂಜ ನಾಯ್ಕ ಕ್ಷೇತ್ರ ಕಾರ್ಯ ಕೈಗೊಂಡಾಗ ತೆನಾಲಿರಾಮ ಮಂಟಪದ ದಕ್ಷಿಣ ದಿಕ್ಕಿಗೆ ಹಾಗೂ ಮದನಕೊತ್ತಳದ ಸಮೀಪದ ಕಂದಕದ ಹುಟ್ಟು ಬಂಡೆಯ ಮೇಲೆ ಐದು ಸಾಲಿನ ಅಪ್ರಕಟಿತ ಶಾಸನ ಪತ್ತೆಯಾಗಿದೆ.ಈ ಶಾಸನವು ಮಹಾರಾಜಾಧಿರಾಜ ಪರಮೇಶ್ವರ ಗಜ ಬೇಟೆಕಾರ ಶ್ರೀ ವೀರ ಪ್ರತಾಪದೇವರಾಯ ಮಹಾರಾಯರ ಸಾಮಂತ/ಕಾವಲುಗಾರ ಬಾಗಿಲ ಕಾಮರಸಣ್ಣರು ಅಗುಳವನ್ನು ಮಾಡಿಸಿದ್ದು ಉಲ್ಲೇಖಿಸುತ್ತದೆ. ಈಗಾಗಲೇ ಇರುವಂತಹ ಕಂದಕವನ್ನು ಅಗಲೀಕರಿಸಿದ್ದು ಕಂಡು ಬರುತ್ತದೆ.
ವಿಜಯನಗರ ಸಾಮ್ರಾಜ್ಯ ಸುಸಜ್ಜಿತ ಕೋಟೆ ಹೊಂದಿತ್ತು. ಈ ಕೋಟೆ ಸುತ್ತ ಕಂದಕ ನಿರ್ಮಾಣ ಮಾಡಲಾಗಿತ್ತು. ಶತ್ರು ಸೈನ್ಯ ಕೋಟೆಗೆ ಲಗ್ಗೆ ಹಾಕಿದರೆ, ಈ ಕಂದಕದಲ್ಲಿ ವಿಷ ಜಂತುಗಳನ್ನು ಬಿಟ್ಟು ಶತ್ರು ಸೈನ್ಯ ಸಂಹರಿಸಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯದ ಅರಸರು ಕೋಟೆ ರಕ್ಷಣೆಗೆ ಮಹತ್ವ ನೀಡಿದ್ದರು. ಯುದ್ಧದ ರಣತಂತ್ರಗಳನ್ನು ಬಲ್ಲವರಾಗಿದ್ದರು. ಯುದ್ಧ ಪರಿಣತರು ಆಗಿದ್ದರು ಎಂಬುದನ್ನು ಈ ಶಾಸನ ಪುಷ್ಟೀಕರಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಕೇತ್ರ ಕಾರ್ಯದಲ್ಲಿ ಸಹಾಯ ನೀಡಿದ ಪುರಾತತ್ವ ಇಲಾಖೆಯ ಸಿಬ್ಬಂದಿ ವೆಂಕಟೇಶ ಹಾಗೂ ಶಾಸನದ ಬಗ್ಗೆ ಮಾಹಿತಿ ನೀಡಿದ ಡಾ.ಜಗದೀಶ ಅಗಸಿಬಾಗಿಲ ಅವರನ್ನು ಉಪ ನಿರ್ದೇಶಕ ಡಾ.ಆರ್.ಶೇಜೇಶ್ವರ ಶ್ಲಾಘಿಸಿದ್ದಾರೆ.