ಉಡುಪಿ: ಯಾವುದೇ ಸಂಘಟನೆಯು ಅದರ ಸದಸ್ಯರ ಒಗ್ಗಟ್ಟಿನ ಆಧಾರದಲ್ಲಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ. ತನು ಮನ ಧನದ ಬೆಂಬಲ ಮಾತ್ರವಲ್ಲ ಪ್ರೇಕ್ಷಕರ ಪ್ರೋತ್ಸಾಹವೂ ಸಿಗಬೇಕು, ಆಗ ಮಾತ್ರ ಸಂಘ ಸಂಸ್ಥೆಗಳು ಯಶಸ್ವಿಯಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕವಾಗಿ ಸಂಘಟನೆಗೆ ಮತ್ತೊಂದು ಹೆಸರು ಕೊಡವೂರಿನ ಸುಮನಸಾ ಎಂದರೆ ತಪ್ಪಾಗದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ನಗರದ ಅಜ್ಜರಕಾಡಿನ ಭುಜಂಗ ಪಾರ್ಕಿನ ಬಯಲು ರಂಗ ಮಂದಿರದಲ್ಲಿ ಸುಮನಸಾ ವತಿಯಿಂದ ಹಮ್ಮಿಕೊಂಡ ‘ರಂಗಹಬ್ಬ-14’ ನಾಟಕೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ತಮ ನಾಟಕಗಳಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಯಾವುದು ಸರಿ, ಯಾವುದು ತಪ್ಪು ಎಂದು ನಾಟಕಗಳು ವಿವೇಚನೆಗೆ ಹಚ್ಚುತ್ತವೆ. ಹಾಗಾಗಿ ಯಕ್ಷಗಾನ, ನಾಟಕಗಳು ಬರೀ ಮನೋರಂಜನೆಗೆ ಮಾತ್ರವಲ್ಲ, ನಮ್ಮ ಮನೋವಿಕಾರವನ್ನು ತಿದ್ದುವ, ಸಮಾಜವನ್ನು ಉತ್ತಮ ದಿಕ್ಕಿಗೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿವೆ ಎಂದಯ ಅವರು ಅಭಿಪ್ರಾಯಪಟ್ಟರು.ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಮಾತನಾಡಿ, ನಾಟಕ ಅಂದರೆ ಮನರಂಜನೆ ಮಾತ್ರವಲ್ಲ, ನಮ್ಮ ಬದುಕಿನ ಆಗುಹೋಗುಗಳನ್ನು ದುಃಖ ದುಮ್ಮಾನಗಳನ್ನು, ಸುಖ ಕಷ್ಟಗಳನ್ನು, ಪ್ರೀತಿ ವಿರಹಗಳನ್ನು ಬಿಂಬಿಸುವ ವೇದಿಕೆ ಎಂದರು.ನಗರಸಭೆಯ ಮಾಜಿ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ದಂತ ವೈದ್ಯ ಡಾ. ವಿಜಯೇಂದ್ರ ವಸಂತ್ ಶುಭ ಹಾರೈಸಿದರು.
ಸಹಕಾರಿ ಧುರೀಣ ಬಿ.ಜಿ. ಸುಬ್ಬರಾವ್, ಮಲ್ಪೆಯ ಉದ್ಯಮಿ ಅಭಿನಂದನ್ ಕೆ. ಕೋಟ್ಯಾನ್, ಸುಮನಸಾ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಮೊದಲಾದವರು ಉಪಸ್ಥಿತರಿದ್ದರು. ವಿದ್ದು ಉಚ್ಚಿಲ್ ಸ್ವಾಗತಿಸಿ, ರಾಗಿಣಿ ಹರೀಶ್ ವಂದಿಸಿದರು, ಕಾರ್ತಿಕ್ ಪ್ರಭು, ಸೌಭಾಗ್ಯ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.