ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕೆರೆಯಂಗಳದ ಇಂದಿರಾಗಾಂಧಿ ನರ್ಸಿಂಗ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯಿಂದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ೧೦೦ನೇ ಜನ್ಮದಿನದ ಅಂಗವಾಗಿ ನಡೆದ ಭಾವ ಲಹರಿ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಲಿತ ಬಂಡಾಯ ಸಾಹಿತ್ಯ ಪ್ರಕಾರಗಳು ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿದಾಗ ತಮ್ಮತನ ಉಳಿಸಿಕೊಂಡು ಸಾಹಿತ್ಯ ಕೃಷಿ ಕೈಗೊಂಡರು. ಬೆಂಗಳೂರಿನಲ್ಲಿ ಕನ್ನಡ ಅಧ್ಯಯನ ಕೇಂದ್ರವನ್ನು ಕಟ್ಟಿ ಬೆಳೆಸಿದ್ದರು. ಆ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ಕೈಗೊಂಡು ಅಪಾರ ಶಿಷ್ಯ ಬಳಗವನ್ನು ಹೊಂದಿದ್ದರು ಎಂದು ವಿವರಿಸಿದರು.ಕುವೆಂಪು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡು ಪಿಎಚ್.ಡಿ ಪದವಿಗಾಗಿ ಅವರು ಮಂಡಿಸಿದ ಸೌಂದರ್ಯ ಸಮೀಕ್ಷೆ ಎಂಟು ಬಾರಿ ಮುದ್ರಣಗೊಂಡಿದ್ದು ವಿಶೇಷವಾಗಿತ್ತು. ಇದರಿಂದ ಅವರ ಬರವಣಿಗೆಯ ಶಕ್ತಿ ಎಲ್ಲರ ಅರಿವಿಗೂ ಬರುತ್ತದೆ. ಕನ್ನಡ ಅಧ್ಯಯನ ಕೇಂದ್ರದ ಮೂಲಕ ಹಲವಾರು ಸಂಪುಟಗಳನ್ನು ತಂದಿದ್ದರು. ಜನಸಾಮಾನ್ಯರಿಗಾಗಿ ಸಾಹಿತ್ಯ ಮಾಲಿಕೆಗಳನ್ನು ಬರೆದರು ಎಂದರು.
ಕನ್ನಡ ಸಾಹಿತ್ಯ ಲೋಕದಲ್ಲಿ ಕುವೆಂಪು ನಂತರ ಜಿ.ಎಸ್.ಶಿವರುದ್ರಪ್ಪ ಅವರು ಪ್ರಮುಖವಾಗಿ ಕಾಣುತ್ತಾರೆ. ಶಿವರುದ್ರಪ್ಪನವರ ನಂತರ ಮತ್ತೊರ್ವ ರಾಷ್ಟ್ರಕವಿ ಹುಟ್ಟಿಬರದಿರುವುದು ದುರಂತ. ಕನ್ನಡ ಸಾಹಿತ್ಯದ ದಿಗ್ಗಜ ಶಿವರುದ್ರಪ್ಪ ಅವರು ಓದುಗರಿಗೆಂದೇ ಸರಳವಾಗಿ ಬರೆಯುತ್ತಿದ್ದ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಎಂಟು ಜ್ಞಾನ ಪೀಠ ಪ್ರಶಸ್ತಿ ಪಡೆದ ಕವಿಗಳನ್ನು ಕನ್ನಡದಲ್ಲಿ ಪಡೆದ ನಾವೇ ಧನ್ಯರು ಎಂದು ಸ್ಮರಿಸಿದರು.ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್ಕುಮಾರ್ ಮಾತನಾಡಿ, ಭಾವಗೀತೆಗಳು ಮಾನವೀಯ ಮೌಲ್ಯಗಳನ್ನ ಕಲಿಸುತ್ತವೆ. ಸಾಹಿತ್ಯದ ಓದುವ ಜೊತೆಗೆ ಭಾವಗೀತೆ ಕೇಳುವ ಅಭ್ಯಾಸ ಇಟ್ಟುಕೊಂಡರೆ ಮನಸ್ಸು ಮತ್ತಷ್ಟು ಉಲ್ಲಾಸಗೊಳ್ಳುತ್ತದೆ. ಸಾಹಿತ್ಯಕ್ಕೆ ಯಾವುದೇ ವಯಸ್ಸಿನ ಅಂತರವಿಲ್ಲ. ಸಾಹಿತ್ಯಕ್ಕೆ ತನ್ನದೇ ಆದ ಮೌಲ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಶಿವರುದ್ರಪ್ಪನವರ ವೈಚಾರಿಕ ನಿಲುವುಗಳ ಕುರಿತು ಕವಯತ್ರಿ ಆಶಾ ಉಪನ್ಯಾಸ ನೀಡಿದರು. ಗಾಯಕರಾದ ಶಂಕರ್ ರಾಚಪ್ಪ, ವಂದನಾ, ಹಂಸಾ, ಐಶ್ವರ್ಯ, ವಿಶ್ವಾಸ್ ಅವರು ಜಿ.ಎಸ್.ಶಿವರುದ್ರಪ್ಪ ಅವರ ಭಾವಗೀತೆ ಹಾಡಿ ರಂಜಿಸಿದರು.ಕಾರ್ಯಕ್ರಮದಲ್ಲಿ ಆಯೋಜಕ ಪ್ರತಿಭಾಂಜಲಿ ಡೇವಿಡ್, ನಿಲಯ ಪಾಲಕಿ ವಸಂತಲಕ್ಷ್ಮೀ, ಚಿತ್ರಕೂಟ ಸಾಂಸ್ಕೃತಿಕ ಸಂಸ್ಥೆ ಮುಖ್ಯಸ್ಥ ಧನುಷ್ಗೌಡ, ಟ್ರಸ್ಟ್ನ ಪ್ರಭು, ಮುಖಂಡರಾದ ಕಾರಸವಾಡಿ ಮಹದೇವ, ಧನಂಜಯ ದರಸಗುಪ್ಪೆ ಭಾಗವಹಿಸಿದ್ದರು.