ಕಡತೋಕೆ ಶಾಸನದ ಮರು ಅಧ್ಯಯನ
ಹೊನ್ನಾವರ ತಾಲೂಕಿನ ಕಡತೋಕೆ ಗ್ರಾಮದ ಸ್ವಯಂಭೂದೇವ ಅಥವಾ ಸ್ವಯಂಭೇಶ್ವರ ದೇವಸ್ಥಾನದಲ್ಲಿರುವ ಪ್ರಾಚೀನ ಶಾಸನದಲ್ಲಿ ಉಲ್ಲೇಖಿಸಲಾಗಿರುವ “ಕಡತೋಕೆಯ ದೇವರ್” ಈವರೆಗೆ ತಿಳಿದಿರುವಂತೆ ದೇವಾಲಯದಲ್ಲಿರುವ ಸ್ವಯಂಭೂದೇವರಾಗಿರದೇ ಕಡತೋಕೆಯಲ್ಲಿದ್ದ ಸ್ವರ್ಣವಲ್ಲಿ ಮಠದ ಗುರು ಪರಂಪರೆಯ ಇಪ್ಪತ್ತಾರನೆಯ ಯತಿಗಳಾಗಿದ್ದ ಶ್ರೀ ವಿಶ್ವವಂದ್ಯ ಸರಸ್ವತೀಗಳಾಗಿದ್ದಾರೆ ಎನ್ನುವ ಮಹತ್ವದ ಮಾಹಿತಿಯನ್ನು ಜಿಲ್ಲೆಯ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ತಿಳಿಸಿದ್ದಾರೆ.
ಯಾವುದೇ ಸ್ಪಷ್ಟ ಕಾಲದ ಉಲ್ಲೇಖಗಳಿರದ ಈ ಶಾಸನವನ್ನು ಇದುವರೆಗೆ 11ನೇ ಅಥವಾ 12ನೇ ಶತಮಾನದ ಶಾಸನವೆಂದು ಸಾಮಾನ್ಯವಾಗಿ ಪರಿಗಣಿಸಲಾಗಿತ್ತು. ಆದರೆ ಪ್ರಸ್ತುತ ಅಧ್ಯಯನದಲ್ಲಿ ಕಡತೋಕೆಯ ಶಾಸನವನ್ನು ಸಮೀಪದ ಕೆಕ್ಕಾರ ಶಾಸನದೊಂದಿಗೆ ಹೋಲಿಕೆ ನಡೆಸಿ, ಎರಡೂ ಶಾಸನಗಳನ್ನು ಚಂದ್ರನ ಕೇಶವ ಹೆಸರಿನ ಒಬ್ಬನೇ ಲಿಪಿಕಾರ ಬರೆದಿರುವುದನ್ನು ಗುರುತಿಸಲಾಗಿದೆ. ಕೆಕ್ಕಾರ ಶಾಸನವು ಶಕ 1000 (ಕ್ರಿ.ಶ. 1078)ರ ಕಾಲಕ್ಕೆ ಸೇರಿರುವುದರಿಂದ, ಚಂದ್ರನ ಕೇಶವನ ಸಕ್ರಿಯ ಅವಧಿಯನ್ನು ಆಧರಿಸಿ ಕಡತೋಕೆ ಶಾಸನವೂ ಕ್ರಿ.ಶ. 1075 ರಿಂದ 1090ರ ನಡುವಿನ ಅವಧಿಯಲ್ಲಿ ರಚಿತವಾಗಿರಬಹುದೆಂಬ ಹೊಸ ಕಾಲನಿರ್ಣಯವನ್ನು ಸೂಚಿಸಿದ್ದಾರೆ.ಶಾಸನದಲ್ಲಿ ಧಾರ್ಮಿಕ ಸಂಸ್ಥೆಯೊಂದರ ನಿರ್ವಹಣೆ, ಯಾತ್ರಿಕರ ಆತಿಥ್ಯ ಹಾಗೂ ದೈನಂದಿನ ವ್ಯವಸ್ಥೆಗೆ ಶಾಶ್ವತ ಆರ್ಥಿಕ ಆಧಾರ ಕಲ್ಪಿಸುವುದಕ್ಕಾಗಿ ಜಳಿವಳಿಯ ಭೋಗವೆರ್ಗ್ಗಡೆ ಹಾಗೂ ಇಡುಕವೆರ್ಗ್ಗಡೆ ಎಂಬ ಅಧಿಕಾರಿಗಳು ಭೂಮಿ, ಗದ್ಯಾಣ, ಭತ್ತ ಹಾಗೂ ಇತರ ಆಸ್ತಿಗಳನ್ನು ದಾನವಾಗಿ ನೀಡಿರುವುದನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ಜ್ಞಾನದೀಪಿಕಾ ಗ್ರಂಥದಲ್ಲಿರುವ ಗುರುಪರಂಪರೆ ಮಾಹಿತಿ ಆಧರಿಸಿ, ಶಾಸನ ರಚನಾ ಕಾಲದಲ್ಲಿ ಕಡತೋಕೆಯಲ್ಲಿ ಮಠ ಅಸ್ತಿತ್ವದಲ್ಲಿದ್ದು, ಅಲ್ಲಿ ಗುರುಪರಂಪರೆಯಲ್ಲಿ ಇಪ್ಪತ್ತಾರನೆಯವರಾದ ಶ್ರೀ ವಿಶ್ವವಂದ್ಯ ಸರಸ್ವತೀಗಳಾಗಿದ್ದರು. ಜಲವಳಿಯ ಭೋಗವೆರ್ಗ್ಗಡೆ ಇಡುಕವೆರ್ಗ್ಗಡೆ ಎಂಬ ಅಧಿಕಾರಿಗಳು ದಾನ ನೀಡಿದ ಕಡತೋಕೆಯ ದೇವರು ಶ್ರೀ ವಿಶ್ವವಂದ್ಯ ಸರಸ್ವತೀಗಳೇ ಆಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.