ಕನ್ನಡಪ್ರಭ ವಾರ್ತೆ ಉಡುಪಿ

ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಸಹಕಾರ ಇಲಾಖೆಗಳ ಸಂಯುಕ್ತ ಅಶ್ರಯದಲ್ಲಿ ಜಿಲ್ಲೆಯ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಜಿಲ್ಲಾ ಮಟ್ಟದ ವಿಶೇಷ ಸಹಕಾರ ತರಬೇತಿಯನ್ನು ಆಯೋಜಿಸಲಾಗಿತ್ತು. ಈ ಶಿಬಿರವನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರಶೆಟ್ಟಿ ಇಂದ್ರಾಳಿ ಅವರು ಉದ್ಘಾಟಿಸಿ, ಇಂದು ಸಹಕಾರ ಕ್ಷೇತ್ರದಲ್ಲಿ ನಿರಂತರ ಬದಲಾವಣೆಗಳು ನಡೆಯುತ್ತಿವೆ. ಈ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ಮತ್ತು ವ್ಯವಹಾರದಲ್ಲಿ ನಿತ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಇಂತಹ ತರಬೇತಿಗಳ ಅಗತ್ಯವಿದೆ. ಇದರಿಂದ ಆರ್ಥಿಕ ವ್ಯವಹಾರದ ಜೊತೆಗೆ ಜನರಿಗೆ ಉಪಯುಕ್ತ ಸೇವೆಗಳನ್ನು ನೀಡಬಹುದು. ಇದರ ಆದಾಯದಿಂದಲೇ ಸಹಕಾರಿ ಸಂಸ್ಥೆ ಮುನ್ನಡೆಯುತ್ತದೆ ಎಂದು ಹೇಳಿದರು. ಸಂಪನ್ಮೂಲ ಉಪನ್ಯಾಸಕಿ ಬಿಂದು ನಾಯರ್‌ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು . ಸಹಕಾರ ಯೂನಿಯನ್‌ ನಿರ್ದೇಶಕರುಗಳಾದ ಗಂಗಾಧರ ಶೆಟ್ಟಿ, ಹರೀಶ್‌ ಕಿಣಿ, ಸುಧೀರ್‌ ವೈ. ಉಪಸ್ಥಿತರಿದ್ದರು. ಸಿಇಒ ಅನುಷಾ ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.