ಎಸ್ಸಿ,ಎಸ್ಟಿ ಮತ್ತು ಟಿಎಸ್ಪಿ ಹಣ ದುರ್ಬಳಕೆ, ಟಿಪ್ಪುಸುಲ್ತಾನ್ ಆಳ್ವಿಕೆಯ ಬಜೆಟ್: ರವಿಕುಮಾರ್ ಟೀಕೆ,
ಎಸ್ಸಿ,ಎಸ್ಟಿ ಮತ್ತು ಟಿಎಸ್ಪಿ ಹಣ ದುರ್ಬಳಕೆ ಮಾಡಿಕೊಂಡು ದಲಿತ ದ್ರೋಹಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಶನಿವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಬೃಹತ್ ಜನಾಂದೋಲನದ ಪಾದಯಾತ್ರೆ ಕೈಗೊಂಡು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟಿಸಿ ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್, ರಾಜ್ಯದ ಕಾಂಗ್ರೆಸ್ ಸರ್ಕಾರದ ಬಜೆಟ್ ರಂಜಾನ್ ಹಾಗೂ ಹಲಾಲ್ನ ಬಜೆಟ್ ಆಗಿದೆ. ಬಹುಸಂಖ್ಯಾತರ ಹಿಂದೂಗಳನ್ನು ಕಡೆಗಣಿಸಿ, ಅಲ್ಪಸಂಖ್ಯಾತರ ಪರವಾಗಿ ಮಂಡಿಸಿರುವ ಬಜೆಟ್, ಟಿಪ್ಪುಸುಲ್ತಾನ್ ಆಳ್ವಿಕೆ ಬಜೆಟ್ ಆಗಿದೆ ಎಂದು ಆರೋಪಿಸಿದರು.ಅಲ್ಪಸಂಖ್ಯಾತರಂತೆ, ಹಿಂದೂಗಳು ಕಾಂಗ್ರೆಸ್ ಪಕ್ಷಕ್ಕೆ ಮತಗಳನ್ನು ನೀಡಿವೆ. ಹಾಗಾಗಿ ಅಲ್ಪಸಂಖ್ಯಾತರಿಗೆ ಕೊಟ್ಟಿರುವ ಸೌಲಭ್ಯಗಳು, ಹಿಂದೂಗಳಿಗೂ ನೀಡುವುದು ಮುಖ್ಯಮಂತ್ರಿಗಳ ಕರ್ತವ್ಯ. ಆದರೆ, ಸಿದ್ದರಾಮಯ್ಯ 16ನೇ ನಿರೀಕ್ಷೆ ಬಜೆಟ್ನಲ್ಲಿ ಸಮಸ್ತ ನಾಡಿನ ಹಿಂದೂಗಳಿಗೆ ದ್ರೋಹವೆಸಗಿ ಓಲೈಕೆ ರಾಜಕಾರಣ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಗುತ್ತಿಗೆ ಕಾಮಗಾರಿಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4 ರಷ್ಟು ಮೀಸಲಾತಿ ನೀಡಿದ್ದೀರಿ, ಈ ಸೌಲಭ್ಯ ಬಹುಸಂಖ್ಯಾತರಿಗೂ ನೀಡಬೇಕು. ರಾಜ್ಯದಲ್ಲಿ ಸರ್ಕಾರ ಅಧಿಕಾರ ಹಿಡಿದು ಎರಡು ದಶಕ ಪೂರೈಸಿದರೂ ಇಂದಿಗೂ ಕಾಮಗಾರಿಗಳಿಗೆ ಟೆಂಡರ್ ಕರೆಯುತ್ತಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಸರ್ಕಾರ ಆರ್ಥಿಕ ದಿವಾಳಿಯಾದ ಕಾರಣ ಈ ಬಜೆಟ್ನಲ್ಲಿ ಕೋಟಿಗಟ್ಟಲೇ ಸಾಲ ಪಡೆದು ಬಜೆಟ್ ಮಂಡಿಸಲಾಗಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರಿಗೆ ಮಹತ್ವ ನೀಡಿ, ಬಹುಸಂಖ್ಯಾತರ ನಿರ್ಲಕ್ಷತೆ ಧೋರಣೆ ಕಾರಣರಾದ ರಾಜ್ಯ ಸರ್ಕಾರದ ವಿರುದ್ಧ ಸೋಮವಾರದಿಂದ ಉಭಯ ಸದನಗಳಲ್ಲಿ ದೊಡ್ಡಮಟ್ಟದ ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರಾದ ದೀಪಕ್ ದೊಡ್ಡಯ್ಯ, ಎಚ್.ಕೆ.ಕೇಶವಮೂರ್ತಿ, ರೇವನಾಥ್, ಕಡೂರು ಮಂಡಲ ಅಧ್ಯಕ್ಷ ದೇವಾನಂದ್, ಮೂಡಿಗೆರೆ ಅಧ್ಯಕ್ಷ ಗಜೇಂದ್ರ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. 8 ಕೆಸಿಕೆಎಂ 1ಎಸ್ಸಿ.ಎಸ್ಟಿ. ಅನುದಾನ ದುರ್ಬಳಕೆ ಮಾಡಿರುವುದನ್ನು ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ವಿಧಾನಪರಿಷತ್ನ ಮುಖ್ಯ ಸಚೇತಕ ರವಿಕುಮಾರ್ ನೇತೃತ್ವದಲ್ಲಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.