ರೈತ ವಿರೋಧಿ ಕಾಯ್ದೆಗಳು ಕೃಷಿಕರನ್ನು ಅಡಿಯಾಳು ಮಾಡುತ್ತವೆ: ಶಿವಾನಂದ ಕುಗ್ಗೆ

KannadaprabhaNewsNetwork |  
Published : Sep 06, 2025, 01:00 AM IST
ಚಿಕ್ಕಮಗಳೂರು ತಾಲ್ಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸ್ಥಾಪಿತಗೊಂಡ ಲಕ್ಯಾ ಹೋಬಳಿ ಮಟ್ಟದ ರೈತ ಸಂಘವನ್ನು ಶುಕ್ರವಾರ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ಗೆ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪುಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿ ಯಾಳಾಗುತ್ತೇವೆ. ವಿದೇಶಿ ವಸ್ತುಗಳ ಆಮದಿನಿಂದ ಸ್ಥಳೀಯ ಹೈನುಗಾರಿಕೆ ವೃತ್ತಿ ನಶಿಸಿ, ಕಾರ್ಪೋರೇಟ್ ಕಂಪನಿಗಳ ಬಲಿಪಶುಗಳಾಗುತ್ತೇವೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಎಚ್ಚರಿಸಿದರು.

- ಉದ್ದೇಬೋರನಹಳ್ಳಿಯಲ್ಲಿ ಲಕ್ಯಾ ಹೋಬಳಿ ಮಟ್ಟದ ರೈತ ಸಂಘ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪುಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿ ಯಾಳಾಗುತ್ತೇವೆ. ವಿದೇಶಿ ವಸ್ತುಗಳ ಆಮದಿನಿಂದ ಸ್ಥಳೀಯ ಹೈನುಗಾರಿಕೆ ವೃತ್ತಿ ನಶಿಸಿ, ಕಾರ್ಪೋರೇಟ್ ಕಂಪನಿಗಳ ಬಲಿಪಶುಗಳಾಗುತ್ತೇವೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ಗೆ ಎಚ್ಚರಿಸಿದರು.

ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸ್ಥಾಪಿತಗೊಂಡ ಲಕ್ಯಾ ಹೋಬಳಿ ಮಟ್ಟದ ರೈತ ಸಂಘವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಸುಧಾರಣೆ ಕಾಯ್ದೆಯನ್ನು ಸರ್ಕಾರ ತೆಗೆದುಹಾಕಿರುವ ಪರಿಣಾಮ ನೂರಾರು ಎಕರೆ ಪ್ರದೇಶವನ್ನು ಬಲಾಡ್ಯರು, ವಿದೇಶಿ ಕಂಪನಿಗಳು ರೈತರಿಗೆ ಹಣದಾಸೆ ಹಾಗೂ ಉದ್ಯೋಗದ ಆಸೆ ತೋರಿಸಿ ಖರೀದಿ ಸುತ್ತಿವೆ. ಇದರಿಂದ ಭವಿಷ್ಯದಲ್ಲಿ ರೈತರ ಮಕ್ಕಳಿಗೆ ಕಂಪನಿಗಳು ನಾಮಕಾವಸ್ಥೆಗೆ ಗುಮಾಸ್ತನ ಕೆಲಸ ನೀಡಿ ಕಣ್ಣೋರೆಸುವ ತಂತ್ರ ಮಾಡುತ್ತವೆ ಎಂದು ದೂರಿದರು.

ವಿದೇಶಿಗರು ಉತ್ಪಾದಿಸಿದಂತಹ ಡೈರಿ ಪದಾರ್ಥಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಒತ್ತಡ ಹೇರುತ್ತಿವೆ. ಮುಂದೊಂದು ದಿನ ತರಕಾರಿ ಬೆಳೆ ಸೇರಿದಂತೆ ಪ್ರತಿಯೊಂದು ವಸ್ತುಗಳು ಆಮದಾದರೆ ಸ್ಥಳೀಯ ಬೆಳೆಗಳಿಗೆ ಆಪತ್ತು ಕಟ್ಟಿಟ್ಟ ಬುತ್ತಿಯಂತೆ. ಹೀಗಾಗಿ ಒಗ್ಗಟ್ಟಿನಿಂದ ಚಳುವಳಿ ರೂಪಿಸಿ ರೈತ ವಿರೋಧಿ ಕಾಯ್ದೆ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.

ಈ ಹಿಂದೆ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಯಿಂದ ದೇಶಾದ್ಯಂತ ರೈತರು ದೆಹಲಿಗೆ ತೆರಳಿ ಅನೇಕ ತಿಂಗಳ ಕಾಲ ಪ್ರತಿಭಟಿಸಿದ ಬಳಿಕವೇ ಕಾಯ್ದೆ ಹಿಂಪಡೆಯಿತು. ಆ ಧ್ಯೇಯದಡಿ ರಾಜ್ಯದಲ್ಲೂ ಕೂಡಾ ರೈತಾಪಿ ವರ್ಗವು ಕೃಷಿ ಜಮೀನನ್ನು ಶಾಶ್ವತವಾಗಿ ರೈತರಲ್ಲಿ ಉಳಿಸಲು ಸಂಘಟನೆಯೊಂದಿಗೆ ಕೈಜೋಡಿಸುವ ಮೂಲಕ ಕಾರ್ಪೋರೇಟ್ ವಿರುದ್ಧ ಸಿಡಿದೇಳಬೇಕಿದೆ ಎಂದು ಹೇಳಿದರು.

ರೈತ ಸಂಘದ ಮುಖ್ಯಸ್ಥ ನಂಜುಂಡಸ್ವಾಮಿ ನೇತೃತ್ವದಲ್ಲಿ ರೈತ ಪರವಾದ ಹೋರಾಟ ಇಡೀ ವಿಶ್ವದ ರೈತರನ್ನು ಪ್ರತಿನಿಧಿ ಸಿತ್ತು. ಬಹುರಾಷ್ಟ್ರೀಯ ಕಂಪನಿಗಳ ತುಳಿತಕ್ಕೊಳಗಾದ ರೈತರಿಗೆ ನ್ಯಾಯ ಕೊಡಿಸುವಲ್ಲಿ 3 ದಶಕದಿಂದ ಚಳುವಳಿ ರೂಪಿಸಿ ರೈತರಿಗೆ ನ್ಯಾಯದ ತೀರ್ಮಾನ ಕೈಗೊಳ್ಳುವಲ್ಲಿ ಹೋರಾಡಿದವರು ಎಂದು ತಿಳಿಸಿದರು.

ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಪಂಚ ನದಿಗಳ ಉಗಮ ಸ್ಥಾನವಾದ ಚಿಕ್ಕಮಗಳೂರು ಜಿಲ್ಲೆಯ ನೀರು ಬಹುತೇಕ ಹೊರ ಜಿಲ್ಲೆಗಳ ಉಪಯೋಗಕ್ಕೆ ಬಳಸಲಾಗುತ್ತಿದೆ. ಲಕ್ಯಾ ಹೋಬಳಿ ಸೇರಿದಂತೆ ಸುತ್ತ ಮುತ್ತಲಿನ ಹೋಬಳಿ, ಗ್ರಾಮಗಳಿಗೆ ನೀರಿಲ್ಲದೇ ಕೃಷಿ ಚಟುವಟಿಕೆಗಳು ಹಿನ್ನೆಡೆಯಾಗಿ ಬೆಳೆಗಳು ಕೈಗೆ ಸಿಗದಂತಾಗಿದೆ ಎಂದು ಹೇಳಿದರು.

ಭದ್ರ ಉಪ ಕಣಿವೆ ಯೋಜನೆಯಡಿ ನೀರು ಸಿಕ್ಕರೆ ಕೆರೆಕಟ್ಟೆಗಳು ತುಂಬಿ ಜಾನುವಾರು ಹಾಗೂ ಜನಸಾಮಾ ನ್ಯರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಸಾವಿರ ಟಿಎಂಸಿ ನೀರು ಸಂಗ್ರಹವಾದರೆ, 200 ಟಿಎಂಸಿ ನೀರು ಜಿಲ್ಲೆಯಿಂದ ಹರಿ ಯುತ್ತಿದೆ. ಜೊತೆಗೆ ರೈತರು ನೀರಿಲ್ಲದ ಕಾರಣ ಬೆಳೆಗಳು ನಾಶವಾಗುತ್ತಿದ್ದು, ಇನ್ನೊಂದೆಡೆ ಬ್ಯಾಂಕ್‌ನವರು ಸಾಲ ವಸೂಲಾತಿ ಹೆಸರಿನಲ್ಲಿ ರೈತರನ್ನು ಕುಗ್ಗಿಸುವಂತೆ ಮಾಡುತ್ತಿದೆ ಎಂದರು.

ಇಂದಿಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ವೈಜ್ಞಾನಿಕ ಬೆಲೆಯಿಲ್ಲದಂತಾಗಿದೆ. ಪ್ರತಿ ತರಕಾ ರಿ ಬೆಳೆ ಹರಾಜಿನ ಮೂಲಕ ಖರೀದಿಸುವ ಕಾನೂನು ಜಾರಿಯಾಗಬೇಕು. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸಚಿವರು ದೇಶದ ಬೆನ್ನೆಲುಬಿಗೆ ಮೌಖಿಕವಾಗಿ ಭರವಸೆ ನೀಡದೇ ಇಚ್ಚಾಶಕ್ತಿಯಿಂದ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಪಾಂಡುರಂಗಪ್ಪ ಮಾತನಾಡಿ ಚಿಕ್ಕಮಗಳೂರು ಹಾಗೂ ಕಡೂರು ತಾಲೂಕಿನ ಮಧ್ಯಭಾಗದಲ್ಲಿ ಬೀಕನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ತೀವ್ರ ಸಂಕಷ್ಟದ ನರಳಾಡುತ್ತಿವೆ. ಪಕ್ಕದಲ್ಲೇ ಅಯ್ಯನಕೆರೆ ನದಿಯಿದ್ದರೂ ಸುತ್ತಮುತ್ತಲಿನ ರೈತರಿಗೆ ನೀರೋದಗಿಸುತ್ತಿಲ್ಲ. ಕನಿಷ್ಟ ಪಕ್ಷ ಕೋಡಿ ನೀರನ್ನು ಪೈಪ್‌ಲೈನ್ ಮೂಲಕ ಹರಿಸಿದರೆ ಬೇಸಿಗೆಯಲ್ಲಿ ರೈತರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಉಪಾಧ್ಯಕ್ಷರಾದ ಡಿ.ಕುಮಾರಸ್ವಾಮಿ, ಛಾಯಾಪತಿ, ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜ್, ಖಜಾಂಚಿ ಲೋಕೇಶ್, ಸಂಘಟನಾ ಕಾರ್ಯದರ್ಶಿಗಳಾದ ಜಯರಾಮ್, ದೇವರಾಜ್ ಕಾರ್ಯದರ್ಶಿ ಉಮೇಶ್, ಕಡೂರು ತಾಲೂಕು ಅಧ್ಯಕ್ಷ ಈಶ್ವರಪ್ಪ, ಯುವ ಘಟಕದ ಕಾರ್ಯದರ್ಶಿ ಯುವರಾಜ್, ಬಿಳೇಕಲ್ಲ ಹಳ್ಳಿ ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ಕೊಪ್ಪ ಕಾರ್ಯದರ್ಶಿ ಕೃಷ್ಣೇಗೌಡ, ಮುಖಂಡರಾದ ರವೀಶ್‌ ಬಸಪ್ಪ, ಸೋಮಶೇಖರ್, ರವಿಕುಮಾರ್, ಬಸವರಾಜ್, ಎಸ್.ಕೆ.ರಾಜು ಉಪಸ್ಥಿತರಿದ್ದರು. 5 ಕೆಸಿಕೆಎಂ 1ಚಿಕ್ಕಮಗಳೂರು ತಾಲ್ಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸ್ಥಾಪಿತಗೊಂಡ ಲಕ್ಯಾ ಹೋಬಳಿ ಮಟ್ಟದ ರೈತ ಸಂಘವನ್ನು ಶುಕ್ರವಾರ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ಗೆ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ