ಕನ್ನಡಪ್ರಭ ವಾರ್ತೆ ಬೆಂಗಳೂರು

ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಪೋಷಕರಿಗೆ ಸಿಗುವ ಪರಿಹಾರ ಮೊತ್ತದಲ್ಲಿ ಮೃತನ ಕಿರಿಯ ಸಹೋದರ ಸಹ ಪ್ರತ್ಯೇಕ ಪಾಲು ಪಡೆದುಕೊಳ್ಳುವ ಹಕ್ಕು ಹೊಂದಿರುತ್ತಾನೆ ಎಂದು ಹೈಕೋರ್ಟ್ ಆದೇಶಿಸಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಮೂಲದ ಬಿ.ಟೆಕ್ ವಿದ್ಯಾರ್ಥಿ ಚಾಕಲಿ ಗಣೇಶ್ (22) ಎಂಬಾತ 2021ರ ಜುಲೈ 18ರಂದು ಬೆಂಗಳೂರಿನ ಯಲಹಂಕದ ಅಲ್ಲಾಳಸಂದ್ರ ಸೇತುವೆ ಬಳಿ ಬೈಕ್‌ನಲ್ಲಿ ತೆರಳುತಿದ್ದಾಗ ರಸ್ತೆ ಬದಿ ನಿಂತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದ‌ ಪರಿಣಾಮ ಮೃತಪಟ್ಟಿದ್ದ.

ಪ್ರಕರಣ‌ ಸಂಬಂಧ ಬೆಂಗಳೂರಿನ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ (ಎಂಎ‌ಸಿಟಿ) ಘೋಷಿಸಿದ್ದ ‌23.78 ಲಕ್ಷ ರು. ಪರಿಹಾರದ ಮೊತ್ತ ಹೆಚ್ಚಿಸುವಂತೆ ಕೋರಿ ಮೃತನ ಪೋಷಕರಾದ ಚಾಕಲಿ ರಾಮಾಂಜಿನಪ್ಪ, ಸಿ.ಶಿವಮ್ಮ ಹಾಗೂ ಸಹೋದರ ಲೋಕೇಶ್‌ ಹೈಕೋರ್ಟ್‌ಗೆ ಮೇಲ್ಮನವಿ‌‌ ಸಲ್ಲಿಸಿದ್ದರು.

ಈ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ನ್ಯಾಯಾಧಿಕರಣ ಘೋಷಿಸಿದ್ದ ಪರಿಹಾರದ ಮೊತ್ತವನ್ನು 23,78 ಲಕ್ಷ ರು. ಇಂದ 39.45 ಲಕ್ಷ ರು.ಗೆ ಹೆಚ್ಚಿಸಿದೆ. ನ್ಯಾಯಾಧಿಕರಣ ಈ ಹಿಂದೆ ಮೃತ ವಿದ್ಯಾರ್ಥಿಯ ಅಕಾಲಿಕ ಮರಣದಿಂದ ಉಂಟಾದ ಪ್ರೀತಿ-ವಾತ್ಸಲ್ಯದ ನಷ್ಟಕ್ಕಾಗಿ ತಂದೆ-ತಾಯಿಗೆ ಪರಿಹಾರ ಘೋಷಿಸಿದೆ. ಆದರೆ, ಮೃತನ ಅವಲಂಬಿತನಾಗಿದ್ದ ಕಿರಿಯ ಸಹೋದರಿಗೆ ಪರಿಹಾರ ನಿಗದಿಪಡಿಸಿಲ್ಲ. ತನ್ನ ಅಣ್ಣನ ಪ್ರೀತಿ ಹಾಗೂ ವಾತ್ಸಲ್ಯವನ್ನು ಕಳೆದುಕೊಂಡಿರುವುದರಿಂದ ಆತನೂ ಪರಿಹಾರಕ್ಕೆ ಅರ್ಹನಾಗಿರುತ್ತಾನೆ ಎಂದು ಹೈಕೋರ್ಟ್‌ ಆದೇಶದಲ್ಲಿ ಸ್ಪಷ್ಟಪಡಿಸಿದೆ.