ಕನ್ನಡಪ್ರಭ ವಾರ್ತೆ ಬೆಂಗಳೂರು

ವೈಯಕ್ತಿಕ ಕಾರಣಗಳ ಹಿನ್ನಲೆಯಲ್ಲಿ ಜಿಗುಪ್ಸೆಗೊಂಡು ಸ್ಯಾಂಕಿ ಕೆರೆಗೆ ಜಿಗಿದು ಖಾಸಗಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕಬಾಣವಾರದ ನಿವಾಸಿ ತೇಜಸ್ವಿನಿ ರಾಜ್ (20) ಮೃತ ದುರ್ದೈವಿ. ಸದಾಶಿವನಗರದ ಸ್ಯಾಂಕಿ ಕೆರೆಗೆ ಜಿಗಿದು ಸೋಮವಾರ ತೇಜಸ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆರೆಯಲ್ಲಿ ಮಂಗಳವಾರ ಮೃತದೇಹ ಪತ್ತೆಯಾಗಿದೆ.

ಸ್ನೇಹಿತನಿಗೆ ಕೊನೆ ಸಂದೇಶ

ಬಿಎಂಆರ್‌ಸಿಎಲ್‌ನಲ್ಲಿ ಮೃತ ತೇಜಸ್ವಿನಿ ತಾಯಿ ನೌಕರಿಯಲ್ಲಿದ್ದು, ಚಿಕ್ಕಬಾಣವಾರದ ಹತ್ತಿರ ತಾಯಿ-ಮಗಳು ನೆಲೆಸಿದ್ದರು. ಹಲವು ವರ್ಷಗಳ ಹಿಂದೆಯೇ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಆಕೆಯ ತಂದೆ ಪ್ರತ್ಯೇಕವಾಗಿದ್ದರು. ಇತ್ತೀಚಿಗೆ ವೈಯಕ್ತಿಕ ವಿಚಾರವಾಗಿ ತೇಜಸ್ವಿನಿಗೆ ಬೇಸರವಾಗಿತ್ತು. ಈ ಹಿನ್ನಲೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿರಬಹುದು.


ತನ್ನ ಸ್ನೇಹಿತನಿಗೆ ಸ್ಯಾಂಕಿ ಕೆರೆಗೆ ಹೋಗುವುದಾಗಿ ಹೇಳಿ ತೇಜಸ್ವಿನಿ ಸಂದೇಶ ಕಳುಹಿಸಿದ್ದಳು. ಇದರಿಂದ ಆಂತಕಗೊಂಡ ಆತ, ತಕ್ಷಣವೇ ಆಕೆಯ ತಾಯಿಗೆ ತಿಳಿಸಿ ಕೆರೆ ಬಳಿ ದೌಡಾಯಿಸಿ ಬಂದಿದ್ದಾರೆ. ಆಗ ಕೆರೆ ಸುತ್ತ ಹುಡುಕಾಡಿದರೂ ತೇಜಸ್ವಿನಿ ಸುಳಿವು ಸಿಕ್ಕಿಲ್ಲ. ಕೂಡಲೇ ಸದಾಶಿವನಗರ ಪೊಲೀಸ್ ಠಾಣೆಗೆ ಮೃತಳ ತಾಯಿ ದೂರು ನೀಡಿದ್ದಾರೆ. ತಕ್ಷಣವೇ ವಿದ್ಯಾರ್ಥಿನಿ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ. ಆಗ ಸ್ಯಾಂಕಿ ಕೆರೆಯ ಸಿಸಿಟೀವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆರೆಯೊಳಗೆ ವಿದ್ಯಾರ್ಥಿನಿ ಪ್ರವೇಶಿಸುವ ದೃಶ್ಯ ಪತ್ತೆಯಾಗಿದೆ. ಈ ಸುಳಿವು ಆಧರಿಸಿ ಕೆರೆ ಸುತ್ತ ಹುಡುಕಾಟ ಮುಂದುವರೆಸಿದಾಗ ಆಕೆಯ ಬ್ಯಾಗ್ ಸಿಕ್ಕಿದೆ. ಆದರೆ ವಿದ್ಯಾರ್ಥಿನಿ ಮಾತ್ರ ಎಲ್ಲೂ ಕಾಣದೆ ಮತ್ತಷ್ಟು ಆತಂಕವಾಗಿತ್ತು. ಆದರೆ ಕತ್ತಲಾದ ಕಾರಣಕ್ಕೆ ಶೋಧ ಕಾರ್ಯವನ್ನು ಪೊಲೀಸರು ಸ್ಥಗಿತಗೊಳಿಸಿದರು. ಕೆರೆ ಬಳಿ ಮತ್ತೆ ಮಂಗಳವಾರ ಬೆಳಗ್ಗೆ ಶೋಧ ನಡೆಸಿದಾಗ ಆಕೆಯ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೀತಿಗೆ ಪೋಷಕ ಸಮ್ಮತಿ

ಯುವಕನೊಟ್ಟಿಗೆ ತೇಜಸ್ವಿನಿ ಪ್ರೀತಿಯಲ್ಲಿದ್ದಳು. ಈ ಪ್ರೇಮಕ್ಕೆ ಎರಡು ಕುಟುಂಬಗಳ ಪೋಷಕರು ಸಮ್ಮತಿಸಿದ್ದರು. ಆದರೆ ಓದು ಮುಗಿದ ನಂತರ ಮದುವೆ ಮಾಡಿಕೊಡುವುದಾಗಿ ಪೋಷಕರು ಹೇಳಿದ್ದರು ಎಂದು ತಿಳಿದು ಬಂದಿದೆ.