ಕನ್ನಡಪ್ರಭ ವಾರ್ತೆ ಬೆಂಗಳೂರು

ಬಾರ್‌ನಲ್ಲಿ ಮದ್ಯ ಸೇವಿಸುವಾಗ ಗುರಾಯಿಸಿದ ಎಂಬ ಕಾರಣಕ್ಕೆ ಯುವಕನೊಬ್ಬನಿಗೆ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದ ಇಬ್ಬರನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜರಗನಹಳ್ಳಿ ನಿವಾಸಿ ಉದಯ್ ಕುಮಾರ್ (24) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಚೆಲುವ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಜರಗನಹಳ್ಳಿ ಸಮೀಪ ಬಾರ್‌ನಲ್ಲಿ ಸೋಮವಾರ ರಾತ್ರಿ ಉದಯ್ ಹಾಗೂ ಆರೋಪಿಗಳು ಮದ್ಯ ಸೇವಿಸುವಾಗ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಉದಯ್‌, ತನ್ನ ಕುಟುಂಬದ ಜತೆ ಜರಗನಹಳ್ಳಿಯಲ್ಲಿ ನೆಲೆಸಿದ್ದ. ಮಾರ್ಕೆಟ್‌ನಲ್ಲಿ ಚೆಲುವ ಹಾಗೂ ಆತನ ಸ್ನೇಹಿತ ಹಮಾಲಿಗಳಾಗಿದ್ದರು. ಕೆಲಸ ಮುಗಿಸಿ ಮನೆ ಸಮೀಪದ ಬಾರ್‌ಗೆ ಮದ್ಯ ಸೇವಿಸಲು ಉದಯ್ ತೆರಳಿದ್ದ. ಅದೇ ವೇಳೆ ಬಾರ್‌ನಲ್ಲಿ ಆರೋಪಿಗಳು ಮದ್ಯ ಸೇವಿಸುತ್ತಿದ್ದರು. ಆಗ ತನ್ನ ಎದುರಿನ ಟೇಬಲ್‌ ಮೇಲೆ ಕುಳಿತಿದ್ದ ಉದಯ್ ಗುರಾಯಿಸುತ್ತಿದ್ದಾನೆ ಎಂದು ಕುಡಿದ ಮತ್ತಿನಲ್ಲಿ ಚೆಲುವ ಗಲಾಟೆ ಮಾಡಿದ್ದ.

ಈ ವೇಳೆ ಬಾರ್ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಅವರನ್ನು ಶಾಂತಗೊಳಿಸಿ ಹೊರ ಕಳುಹಿಸಿದ್ದರು. ಇದಾದ ನಂತರ ಬಾರ್ ಸನಿಹದ ಪಾರ್ಕ್‌ ಮುಂದೆ ಮದ್ಯ ಸೇವಿಸುತ್ತ ಆರೋಪಿಗಳು ನಿಂತಿದ್ದರು. ಆಗ ಅಲ್ಲಿಗೆ ಬಂದ ಉದಯ್‌, ಆ ಇಬ್ಬರಿಗೆ ಏನ್ರೋ ಬಾರ್‌ನಲ್ಲಿ ಜೋರು ಮಾಡಿದ್ದು ಎಂದು ಪ್ರಶ್ನಿಸಿದ್ದಾನೆ. ಈ ಸಮಯದಲ್ಲಿ ಮತ್ತೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿಗಳು, ಬಿಯರ್ ಬಾಟಲ್‌ನಿಂದ ಉದಯ್‌ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ. ಈ ಕೃತ್ಯದ ಬಗ್ಗೆ ಮಾಹಿತಿ ಪಡೆದು ಪೊಲೀಸರು, ಕೂಡಲೇ ಆರೋಪಿಗಳನ್ನು ಬಂಧಿಸಿದ್ದಾರೆ.