ಶೇಷಮೂರ್ತಿ ಅವಧಾನಿ
ಕಲಬುರಗಿಯಲ್ಲಿದ್ದುಕೊಂಡೇ ಪಾಕ್ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದಾನೆಂಬ ಆರೋಪದಡಿ ಬಂಧಿತನಾದ ಮೊಹ್ಮದ್ ಸಮೀರ್ ಅಲಿಯಾಸ್ ಮುನ್ನಾನ ಮೊಬೈಲನ್ನು ತಪಾಸಣೆಗೆ ಒಳಪಡಿಸಿರುವ ತನಿಖಾಧಿಕಾರಿಗಳು, ಅದರಲ್ಲಿನ ಭಾರತ ವಿರೋಧಿ ವಿಡಿಯೋ, ಮ್ಯಾಪ್ಗಳು, ಉಗ್ರ ನಂಟಿನ ಸಂಪರ್ಕಗಳನ್ನು ಪತ್ತೆ ಹಚ್ಚಿದ್ದಾರೆ.
ಕಲಬುರಗಿ ಹೊರವಲಯದ ಮಾಲಗತ್ತಿ, ಉಪಳಾಂವ್ ಕ್ರಾಸ್ ಬಳಿಯ ಮಾಂಸ ರಫ್ತು ಫ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದು, ಪಾಕ್ ಉಗ್ರ ಸಂಘಟನೆಗಳೊಂದಿಗೆ ನಂಟು ಬೆಸೆದುಕೊಂಡಿದ್ದಾನೆಂಬ ಆರೋಪಗಳ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಸಮೀರ್ನ ಮೊಬೈಲ್ ಜಾಲಾಡಿದಾಗ, ಪಾಕ್ ಜೊತೆ ಆತ ನಿರಂತರ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೆ, ಈತ ಭಯೋತ್ಪಾದಕ ಸಂಘಟನೆಗಳಿಗೆ ಯುವಕರನ್ನು ಆಮಿಷ ಒಡ್ಡಿ ಸೆಳೆಯುತ್ತಿದ್ದನೆಂಬ ಮಾಹಿತಿಯೂ ಗೊತ್ತಾಗಿದೆ.ಭಯೋತ್ಪಾದಕ ಸಂಘಟನೆಗಳು ಈತನನ್ನು ಭಾರತದಲ್ಲಿ ಯುವಕರ ನೇಮಕಕ್ಕೆ ಹ್ಯಾಂಡ್ಲರ್ ರೂಪದಲ್ಲಿ ಬಳಕೆ ಮಾಡುತ್ತಿರೋದು ತನಿಖೆಯಲ್ಲಿ ಬಹಿರಂಗವಾಗಿದೆ. ಸದ್ಯ ಈತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮೀರ್, ವಿದೇಶಿ ಮೂಲದ ಮೊಬೈಲ್ ಸಂಖ್ಯೆಗಳನ್ನು ಬಳಕೆ ಮಾಡುತ್ತಿದ್ದ. ವಿದೇಶಿ ನಂಬರ್ ಬಳಸಿಕೊಂಡು ವಾಟ್ಸಪ್ ಮತ್ತು ಇನ್ಸ್ಟಾಗ್ರಾಂ ಮೂಲಕ ಹಲವರ ಸಂಪರ್ಕ ಹೊಂದಿದ್ದ. ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯ ಅಬೀದ್ ಜಟ್, ಶಹಜಾದ್ ಭಟ್ಟಿ ಜೊತೆ ಸಂಪರ್ಕ ಹೊಂದಿದ್ದಾನೆಂಬ ಸಂಗತಿಯನ್ನೂ ತನಿಖಾ ತಂಡ ಪತ್ತೆ ಹಚ್ಚಿದೆ.ಭಾರತ ವಿರೋಧಿಸುವ ವಿಡಿಯೋ, ಫೋಟೋ:
ಸಮೀರನ ಮೊಬೈಲಲ್ಲಿ ಸಿಕ್ಕ ವಿಡಿಯೋದಲ್ಲಿ ಭಾರತದ ಹಲವು ನಕ್ಷೆ ಸಹ ಚಿತ್ರಿಕರಣವಾಗಿದೆ. ಜಮ್ಮು-ಕಾಶ್ಮಿರವನ್ನು ಭಾರತದಿಂದ ಹೊರಗಿಟ್ಟ ವಿಡಿಯೋ, ಜಮ್ಮು-ಕಾಶ್ಮೀರವನ್ನು ಭಾರತದಿಂದ ಹೊರಗಿಟ್ಟು ಪಾಕಿಸ್ತಾನದ ಜೊತೆ ಜೋಡಿಸಿದ ವಿಡಿಯೋಗಳು ದೊರಕಿವೆ. ಸಮೀರ್ ಕಲಬುರಗಿಯಲ್ಲಿದ್ದುಕೊಂಡೇ ಪಾಕ್ ಮೂಲದ ಉಗ್ರ ಗುಂಪುಗಳಾದ ವೆಮನ್ ಮತ್ತು ಜಟ್ 333 ವಾಟ್ಸಪ್ ಗ್ರೂಪ್ ಸದಸ್ಯನಾಗಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ರಾಣಾ ಭಾಯ್ 333 ಗ್ರೂಪ್ ಸೇರಿ ಹಲವು ಗ್ರೂಪ್ ಸದಸ್ಯನಾಗಿರೋದಲ್ಲದೆ ದೇಶ ವಿರೋಧಿ ಚಟುವಟಿಕೆ ಮತ್ತು ಕೋಮು ಸಂಘರ್ಷ ಉಂಟು ಮಾಡುವ ವಿಚಾರಗಳು ಈತನ ಮೊಬೈಲ್ ನಲ್ಲಿ ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಎಟಿಎಸ್ ತಂಡ ಕ್ಷಿಪ್ರ ದಾಳಿ ನಡೆಸಿದ ಸಂದರ್ಭದಲ್ಲಿ ಆರೋಪಿ ಸಮೀರ್ ಉಳಿದುಕೊಂಡಿದ್ದ ಕೊಠಡಿಯಲ್ಲಿಯೂ ಕೆಲವು ನಕ್ಷೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧವಾಗಿಯೂ ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.