ಗದಗ: 12ನೇ ಶತಮಾನದಲ್ಲಿ ವಚನಗಳ ಮುಖಾಂತರ ಶರಣರು ತಮ್ಮ ಅನುಭವಗಳನ್ನು ಸಮಾಜಕ್ಕೆ ಕೊಟ್ಟಿದ್ದು, ಜಾತಿ, ಮತ ಭೇದವನ್ನು ಬಿಟ್ಟು ಕಟ್ಟಿದ ಅನುಭವ ಮಂಟಪವಾಗಿದೆ ಎಂದು ಫಕೀರೇಶ್ವರ ಶಿವಾಚಾರ್ಯರು ಹೇಳಿದರು.
ಶ್ರಾವಣ ಮಾಸ ಅಂದರೆ ಒಳ್ಳೆಯದನ್ನು ಕೇಳುವುದು ಶರಣರ ಅನುಭವಗಳನ್ನು ಕೇಳಿ ನಮ್ಮ ಜೀವನ ಪಾವನಗೊಳಿಸಬೇಕು. ಗದಗ ಜ್ಞಾನದ ಗದ್ದುಗೆಯಾಗಿದೆ. ಪ್ರವಚನವನ್ನು ಮನಸ್ಸಿನಿಂದ ಕೇಳಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಾತೆ ನೀಲಮ್ಮತಾಯಿ ಮಾತನಾಡಿ, 12ನೇ ಶತಮಾನದ ಶರಣರು ತಮ್ಮ ಅನುಭವಗಳನ್ನು ವಚನದ ಮುಖಾಂತರ ಜನರಿಗೆ ತಿಳಿಸಿದರು. ಶರಣರು ಜನರ ಮನಸ್ಸಿನ ಮೈಲಿಗೆ ತೊಳೆಯಲು ಶರಣರ ಅನುಭವಗಳನ್ನು ಒಂದು ತಿಂಗಳ ಪರ್ಯಂತ ಕೇಳುವುದರ ಮುಖಾಂತರ ಮನಸ್ಸಿನ ಮೈಲಿಗೆಯನ್ನು ತೊಳೆದುಕೊಳ್ಳಬೇಕು. ಮನಸ್ಸಿಗೆ ಸುಖ, ಶಾಂತಿ ಸಿಗಬೇಕಾದರೆ ಒಳ್ಳೆಯದನ್ನು ಕೇಳಬೇಕು. ಕ್ಷಣಿಕ ಸುಖಕ್ಕಾಗಿ ನಮ್ಮ ತನವನ್ನು ಕಳೆದುಕೊಳ್ಳಬಾರದು. ನಮಗೆ ಈಗ ಮಾನಸಿಕ ಶಾಂತಿ ಬೇಕಾಗಿದೆ. ಆ ಶಾಂತಿ ಸಿಗಬೇಕಾದರೆ ಶರಣರ ವಚನಗಳನ್ನು ಆಲಿಸುವ ಮುಖಾಂತರ ನೆಮ್ಮದಿಯನ್ನು ಪಡೆದುಕೊಳ್ಳಬೇಕು ಎಂದರು.ಈ ವೇಳೆ ಅಧ್ಯಕ್ಷತೆಯನ್ನು ಟ್ರಸ್ಟ್ ಕಮಿಟಿಯ ಹಿರಿಯ ಸದಸ್ಯ ಕೊಟ್ರಪ್ಪ ಕಮತರ ವಹಿಸಿದ್ದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಎಂ.ಎಂ. ಹಿರೇಮಠ, ಮುರಿಗೆಪ್ಪ ನಾಲ್ವಾಡ, ಚಂದ್ರಶೇಖರಪ್ಪ ಪಟ್ಟಣಶೆಟ್ಟಿ, ಶಿವಣ್ಣ ಕತ್ತಿ, ಸುನಂದಾ ಜೊಬಾಳೆ, ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ಪಂಚಾಕ್ಷರಿ ಅಂಗಡಿ, ಪ್ರವೀಣ ನಂದಿಕೋಲಮಠ, ಬಸವರಾಜ ಮಡಿವಾಳರ, ಶ್ರೀಶೈಲಪ್ಪ ಪಟ್ಟಣಶೆಟ್ಟಿ, ಬಸವರಾಜ ಜಂತ್ಲಿ, ಬಸವರಾಜ ಮೊರಬದ, ವಿರುಪಾಕ್ಷಪ್ಪ ಅಂಗಡಿ, ಗಂಗಾಧರ ನಂದಿಕೊಲಮಠ, ಪ್ರಕಾಶ ಜಂತ್ಲಿ, ಶಂಕರ ನಿರಲಕೇರಿ, ಸುರೇಶ ಮಾಳವಾಡ ಹಾಗೂ ಇತರರು ಇದ್ದರು. ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು.