- ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಮಹರ್ಷಿ ಭಗೀರಥ ಜಯಂತಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಯಾವುದೇ ಸಾಧನೆ ಮೆರೆಯುವಾಗ ಭಗೀರಥ ಮಹರ್ಷಿಯಂತೆ ಸತತ ಪ್ರಯತ್ನ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ಮಹರ್ಷಿ ಭಗೀರಥ ಜಯಂತಿಯಲ್ಲಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಅಂಜಿನಪ್ಪ ಮತನಾಡಿ, ಭಗೀರಥನು ಇಕ್ಷ್ವಾಕು ವಂಶದ ರಾಜನಾಗಿದ್ದು, ತನ್ನ ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗಲೆಂದು ಅವನು ತನ್ನ ನಿಷ್ಠೆ ಹಾಗೂ ಪ್ರಾಮಾಣಿಕ ಕಠಿಣ ತಪಸ್ಸು ಮಾಡಿ ಬ್ರಹ್ಮನನ್ನು ಮೆಚ್ಚಿಸಿ, ಪಂಚಭೂತಗಳಲ್ಲಿ ಒಂದಾದ ಗಂಗೆಯನ್ನು ಧರೆಗಿಳಿಸಿದ ಮಹಾನ್ ಮಾನವತವಾದಿ ಎಂದರು.
ಪವಿತ್ರವಾದ ಗಂಗೆಯನ್ನು ಇಡೀ ಮನುಕುಲಕ್ಕೆ ನೀಡಿದ ಪುರಾಣ ಪುರುಷ. ಸತತ ಪ್ರಯತ್ನದಿಂದ ಅಸಾಧ್ಯವಾದುದು ಸಾಧ್ಯವಾಗುವುದು ಎಂಬುದನ್ನು ತೋರಿದ ಆದರ್ಶ ಪುರುಷ, ಮನುಷ್ಯ ಪ್ರಯತ್ನಕ್ಕೆ ಮಾದರಿ ಈ ಭಗೀರಥ ಮಹಾಶಯ. ಇಂತಹ ವ್ಯಕ್ತಿಯನ್ನು ಕೇವಲ ಒಂದು ಜಾತಿ, ಸಮುದಾಯಕ್ಕೆ ಹಾಗೂ ಜಯಂತಿಗಳಂದು ಪುಷ್ಪಾರ್ಚನೆಗೆ ಸೀಮಿತಗೊಳಿಸದೇ, ಅನುಸರಣೆಯ ಹಂತವನ್ನು ಪಡೆಯಬೇಕು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಎಂ.ಸಂತೋಷ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಉಪ್ಪಾರ ಸಮಾಜದ ಗೌರವಾಧ್ಯಕ್ಷ ತಿಪ್ಪಣ್ಣ, ಜಿಲ್ಲಾಧ್ಯಕ್ಷ ಎಂ.ರಮೇಶ್, ತಾಲೂಕು ಅಧ್ಯಕ್ಷ ಗಿರೀಶ್ ಹೊಸ ನಾಯಕನಹಳ್ಳಿ, ಕಾರ್ಯದರ್ಶಿ ಎಚ್.ಎಸ್. ಹಾಲೇಶ್, ಮಾಜಿ ಉಪ ಮೇಯರ್ ಮಂಜುಳಮ್ಮ, ಸಮಾಜದ ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು.
- - - -4ಕೆಡಿವಿಜಿ31:ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.