ಸಾಗರ: ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪನೆಗೊಂಡಿರುವ ಶ್ರೀ ಅಖಿಲ ಹವ್ಯಕ ಮಹಾಸಭಾ ನಿರಂತರ ಸಂಘಟನೆಯ ತತ್ವವನ್ನು ಅನುಸರಿಸಿ, ಸಮಾಜಕ್ಕೆ ಸಂಸ್ಕಾರ ಕಲಿಸುವ ಜೊತೆಗೆ ಸಾಮಾಜಿಕ ಪರಿವರ್ತನೆಯ ಜಾಗೃತಿ ಮೂಡಿಸುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಶ್ರೀಧರ ಭಟ್ ಕೆಕ್ಕಾರು ಹೇಳಿದರು.
ಪಟ್ಟಣದ ಶ್ರೀ ರಾಘವೇಶ್ವರ ಸಭಾಭವನದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಸಾಧಕ ಸನ್ಮಾನ, ವಿದ್ಯಾ ಪ್ರೋತ್ಸಾಹಧನ ವಿತರಣೆ ಹಾಗೂ ಸಾಗರ ಪ್ರಾಂತ್ಯದ ಹವ್ಯಕ ಪ್ರತಿಭೆಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆ ಪ್ರತಿಬಿಂಬ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಸಮಾಜ ತನ್ನ ಒಳ್ಳೆಯ ಕೆಲಸ ಮತ್ತು ನಡೆಯಿಂದ ಸಮಷ್ಠಿ ಸಮಾಜಕ್ಕೆ ಮಾದರಿ ಆಗಿರಬೇಕು ಎಂದು ಹೇಳಿದರು.ವಿವಿಧ ಕ್ಷೇತ್ರದ ಸಾಧಕರಾದ ಮಂಜಣ್ಣ ಕೈತೋಟ, ಡಾ. ಜಿ.ವಿ. ಹೆಗಡೆ, ಮಹಾಬಲಗಿರಿ ರಾವ್ ಅಮಚಿ, ಎಸ್.ಇ. ಗಣಪತಿ, ಸಿ.ಎ.ಸವಿತಾ ಸುಳಗೋಡು, ಎನ್.ವಿ. ಶಿಶಿರ ಅವರನ್ನು ಸನ್ಮಾನಿಸಲಾಯಿತು.
ಸಮಾಜದ ೭೫ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹಧನ ವಿತರಿಸಲಾಯಿತು. ಬೇರೆಬೇರೆ ವಯೋಮಿತಿಗೆ ಅನುಗುಣವಾಗಿ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮವನ್ನು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಹರನಾಥರಾವ್ ಉದ್ಘಾಟಿಸಿದರು. ಖ್ಯಾತ ವೈದ್ಯ ಎಂ.ಕೆ.ಭಟ್, ರಾಜ್ಯ ಹೊಟೇಲ್ ಮಾಲೀಕರ ಸಂಘದ ಉಪಾಧ್ಯಕ್ಷ ಎಚ್.ಎನ್. ಉಮೇಶ್, ಸಾಗರ ಹವ್ಯಕ ಮಂಡಲದ ಅಧ್ಯಕ್ಷ ಮುರಳಿ ಗೀಜಗಾರು, ಹವ್ಯಕ ಸಾಗರದ ಅಧ್ಯಕ್ಷ ರಾಮಚಂದ್ರ ರಾವ್ ಹಕ್ರೆ, ಮಹಾಸಭಾ ಪ್ರಮುಖರಾದ ಕೆ.ಎನ್. ಶ್ರೀಧರ, ನಾರಾಯಣ ಭಟ್ ಹುಳೇಗಾರು, ರಮೇಶ್ ಹಾರೆಗೊಪ್ಪ, ಹು.ಬಾ. ಅಶೋಕ, ರಾಜಲಕ್ಷ್ಮೀ, ಗುರು ಭೀಮನಕೋಣೆ, ಗಣಪತಿ ಜಟ್ಟಿಮನೆ, ಶ್ರೀಧರ ಭಟ್ ಮತ್ತಿತರರು ಇದ್ದರು.
- - --೨೭ಕೆ.ಎಸ್.ಎ.ಜಿ.೩:
ಪ್ರತಿಬಿಂಬ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.