ಮಧುಗಿರಿ: ದಿನಪತ್ರಿಕೆಗಳನ್ನು ಮನೆ ಮನೆಗೆ ಹಂಚುತ್ತಿದ್ದ ಎ.ಪಿ.ಜೆ. ಅಬ್ದಲ್ ಕಲಾಂ ಸ್ವಯಂ ಹಣ ಸಂಪಾದಿಸಿ ತನ್ನ ವಿದ್ಯಾಭ್ಯಾಸ ಮುಂದುವರೆಸಿ ರಾಷ್ಟ್ರಪತಿ, ವಿಜ್ಞಾನಿ, ಕ್ಷಿಪಣಿಯ ಜನಕರಾಗಿದ್ದು, ವಿಶ್ವವೇ ಕೊಂಡಾಡುವಂತಹ ಕೆಲಸ ಮಾಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲೂಕಿನ ಮಕ್ಕಳು ಶಿಕ್ಷಣ ಕಲಿಕೆಗೆ ಒತ್ತು ನೀಡಬೇಕು. ಪತ್ರಕರ್ತರು ಜನಮುಖಿ ಕೆಲಸ ಮಾಡುವ ನಿಟ್ಟಿನಲ್ಲಿ ವಸ್ತುಸ್ಥಿತಿ ಬರೆದು ಜನರ ಸಮಸ್ಯೆಗೆ ಸುದ್ದಿ ಪ್ರಸಾರಗಳು ನೆರವಾಗಬೇಕು. ದೃಶ್ಯ ಮಾಧ್ಯಮಗಳ ಆಕರ್ಷಣೆಯಿಂದ ಅಕ್ಷರ ಮಾಧ್ಯಮದ ಪತ್ರಿಕೆಗಳ ಪ್ರಸಾರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ ಪತ್ರಿಕೆಗಳು ಹರಿತವಾದ ಬರವಣಿಗೆಯ ಮೂಲಕ ಜನರ ಅಶೋತ್ತರಗಳಿಗೆ ಸ್ಪಂದಿಸುತ್ತಿವೆ. ಅಲ್ಲದೆ ತನ್ನ ಸ್ವಂತಿಕೆ ಉಳಿಸಿಕೊಂಡು ಬರುತ್ತಿರುವುದು ಸಂತಸ ವಿಚಾರ ಎಂದರು.
ಪತ್ರಿಕೆ ಹಂಚುವ ಮತ್ತು ವರದಿಗಾರರ ಮಕ್ಕಳಿಗೆ ಸನ್ಮಾನಿಸಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಪ್ರತಿಭೆ ಸಾಧಕನ ಸ್ವತ್ತುಃ ಸೋಮಾರಿಗಳ ಸ್ವತ್ತಲ್ಲ. ಪತ್ರಕರ್ತರ ಜವಾಬ್ದಾರಿ ಎಚ್ಚರದ ಕಣ್ಣು, ಯಾರೇ ತಪ್ಪು ಮಾಡಿದರು ಅದನ್ನು ಸರಿಪಡಿಸುವ ಹೊಣೆಗಾರಿಕೆ ಪತ್ರಕರ್ತರದು ಎಂದರು.ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಪತ್ರಿಕೆಗಳು ಸುದ್ದಿಗೆ ಸಮೀತವಾಗದೇ ಮನುಷ್ಯನ ಲೋಕ ಜ್ಞಾನ ವಿಕಾಸಕ್ಕೆ ಪೂರಕವಾಗಿದ್ದು, ಸರಿ ತಪ್ಪುಗಳನ್ನು ತಿದ್ದಿ ಸಮದರ್ಶಿತ್ವದಿಂದ ನೋಡಲು ಪ್ರೇರೆಪಿಸುತ್ತವೆ ಎಂದರು.ಪತ್ರಕರ್ತರ ಪ್ರತಿಭಾವಂತ ಮಕ್ಕಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ವಿ.ಎಚ್.ಚಂದ್ರಕಾಂತ್, ಚಂದ್ರಶೇಖರ್ ಗೌಡ, ನಾಗೇಶ್, ಮಾರುತಿ ಗಂಗಹನುಮಯ್ಯ, ರಾಜ್ಕುಮಾರ್, ಪ್ರೊ.ಮ.ಲ.ನ.ಮೂರ್ತಿ, ತಹಸೀಲ್ದಾರ್ ನಂದಿನಿ, ಡಿವೈಎಸ್ಪಿ ರಾಮಚಂದ್ರಪ್ಪ ಇದ್ದರು.ಪತ್ರಿಕಾ ಭವನ ಮಂಜೂರಿಗೆ ಭರವಸೆ ಪತ್ರಕರ್ತರ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 5 ಲಕ್ಷ ರು. ಬ್ಯಾಂಕಿನಲ್ಲಿ ಠೇವಣಿ ಇಡುತ್ತೇನೆ. ಇದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿ ವರ್ಷ ತಮ್ಮ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಅಥವಾ ಪ್ರೋತ್ಸಾಹ ಧನದ ರೂಪದಲ್ಲಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಂಘ ಶ್ರಮಿಸಲಿ. ಪತ್ರಕರ್ತರಿಗೆ ನಿವೇಶನಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲು ಬದ್ಧನಿದ್ದು, ಸುದ್ದಿ ಸಮಾಚಾರಗಳಿಗೆ ಅನುಕೂಲವಾಗಲು ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತು ಪತ್ರಿಕಾ ಭವನ ಮಂಜೂರು ಮಾಡಿಸಿ ಕೊಡುವುದಾಗಿ ಕೆ.ಎನ್ ರಾಜಣ್ಣ ಭರವಸೆ ನೀಡಿದರು.