ಕನ್ನಡಪ್ರಭ ವಾರ್ತೆ ಟಿ. ನರಸೀಪುರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ನೀಡಿದ್ದಲ್ಲಿ, ವಿಶ್ವದಲ್ಲಿ ಲಿಂಗಾಯತ ಧರ್ಮದ ಗುರುತಿಸುವಿಕೆ ಸಿಕ್ಕಿಬಿಟ್ಟರೆ ಜಗತ್ತಿನಲ್ಲಿ ಯಾವುದೇ ಧರ್ಮ ಉಳಿಯುವುದಿಲ್ಲ ಎಂಬ ವಿಶ್ವಾಸವನ್ನು ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಜಿ.ಬಿ. ಪಾಟೀಲ್ ವ್ಯಕ್ತಪಡಿಸಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ಹಮ್ಮಿಕೊಂಡಿದ್ದ ಲಿಂಗಾಯತ ಧರ್ಮ ಜಾಗೃತ ಸಮಾವೇಶ ಹಾಗೂ 2025ನೇ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ ದುಡಿದು ತಿನ್ನು, ಇತರರಿಗೂ ಹಂಚು ಎನ್ನುವಂತಹ ಕಾಯಕ ಮತ್ತು ದಾಸೋಹವನ್ನು ಪ್ರತಿಪಾದಿಸುತ್ತದೆ. ವಚನ ಸಾಹಿತ್ಯವೇ ನಮ್ಮ ಪವಿತ್ರ ಗ್ರಂಥವಾಗಿದೆ ಎಂದರು.ಕಲ್ಲಾಗಲಿ, ಮಣ್ಣಾಗಲಿ ದೇವರಲ್ಲ. ನಮ್ಮಲ್ಲಿರುವ ಆತ್ಮ ಸಾಕ್ಷಿ ನಿಜವಾದ ದೇವರು. ಸ್ವಾರ್ಥ ಸಾಧನೆಗಾಗಿ, ಬೇಡಿಕೆಯೊಂದರ ಈಡೇರಿಕೆಗಾಗಿ ಭಯದಿಂದ ದೇವರನ್ನ ಪೂಜಿಸುತ್ತೇವೆಯೇ ಹೊರತು ಭಕ್ತಿಯಿಂದಲ್ಲ. ಲಿಂಗಾಯತರಲ್ಲಿ ದೇವರ ಬದಲು ಬಸವಣ್ಣನವರ ಸ್ಮರಣೆಯಾಗಬೇಕು ಎಂದರು.ಜಿಲ್ಲಾಧ್ಯಕ್ಷ ಶರಣ ಮಹದೇವಪ್ಪ ಮಾತನಾಡಿ, 900 ವರ್ಷಗಳ ಹಿಂದೆ ಕನ್ನಡ ನಾಡಿನಲ್ಲಿ ಜನ್ಮ ತಾಳಿದ ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಸ್ವತಂತ್ರ್ಯ ಧರ್ಮದ ಮಾನ್ಯತೆ ಸಿಗಬೇಕು ಎಂದು ತಿಳಿಸಿದರು.ಎಂ.ಎಲ್. ಹುಂಡಿ ವಿರಕ್ತ ಮಠದ ಗೌರಿಶಂಕರ ಸ್ವಾಮೀಜಿ ಮಾತನಾಡಿದರು.ಸಾನಿಧ್ಯ ವಹಿಸಿದ್ದ ಮೈಸೂರು ಹೊಸಮಠದ ಚಿದಾನಂದ ಸ್ವಾಮೀಜಿ ಅವರು ಷಟ್ಪಲದ ಧ್ವಜಾರೋಹಣ ನೆರವೇರಿಸಿದರು. ಬಸವತತ್ವ ಪ್ರಚಾರದ ಮಾರ್ಗದರ್ಶಕರಾದ ಬಸವಯೋಗಿ ಪ್ರಭುಗಳು ಲಿಂಗಾಯತ ಧರ್ಮದ ತತ್ವಗಳನ್ನು ಬೋಧಿಸಿದರು. ಸೇತುವೆ ಮಠದ ಸಹಜಾನಂದ ಸ್ವಾಮೀಜಿ, ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಂ. ಶಿವಮಲ್ಲಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಎಂ. ರವಿ ತೊಟ್ಟವಾಡಿ, ಪ್ರಧಾನ ಕಾರ್ಯದರ್ಶಿ ಟಿ.ಎನ್. ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಶಿವಮಲ್ಲಪ್ಪ, ಪೋಷಕ ಕೆ.ಜಿ. ಶಿವಪ್ರಸಾದ್, ಉಪಾಧ್ಯಕ್ಷ ಎಂ. ಮಹೇಶ್ ಕುಮಾರ್, ಗೌರವ ಪ್ರಧಾನ ಸಂಚಾಲಕ ಡಿ.ಎಲ್. ಮಹದೇವಪ್ಪ, ಸಹ ಕಾರ್ಯದರ್ಶಿ ನಂಜುಂಡಸ್ವಾಮಿ, ಹೋಬಳಿ ಅಧ್ಯಕ್ಷ ಗುರುಸ್ವಾಮಿ ಇದ್ದರು.