ದಾವಣಗೆರೆ ಎಪಿಎಂಸಿಯಲ್ಲಿ ಇ-ಟೆಂಡರ್ ಪದ್ಧತಿ ಜಾರಿಗೊಂಡ ನಂತರ ರೈತರ ಉತ್ಪನ್ನಗಳ ಧಾರಣೆ ಏರಿಕೆಯಾಗಿದ್ದು, ಅನ್ನದಾತರ ಪಾಲಿಗೆ ವರವಾಗಿರುವ ಇ-ಟೆಂಡರ್ ಪದ್ಧತಿಯನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸುವಂತೆ ಜಿಲ್ಲಾ ರೈತರ ಒಕ್ಕೂಟದ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಬೆಳವನೂರು ಬಿ.ನಾಗೇಶ್ವರ ರಾವ್ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಎಪಿಎಂಸಿಯಲ್ಲಿ ಇ-ಟೆಂಡರ್ ಪದ್ಧತಿ ಜಾರಿಗೊಂಡ ನಂತರ ರೈತರ ಉತ್ಪನ್ನಗಳ ಧಾರಣೆ ಏರಿಕೆಯಾಗಿದ್ದು, ಅನ್ನದಾತರ ಪಾಲಿಗೆ ವರವಾಗಿರುವ ಇ-ಟೆಂಡರ್ ಪದ್ಧತಿಯನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸುವಂತೆ ಜಿಲ್ಲಾ ರೈತರ ಒಕ್ಕೂಟದ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಬೆಳವನೂರು ಬಿ.ನಾಗೇಶ್ವರ ರಾವ್ ಒತ್ತಾಯಿಸಿದ್ದಾರೆ.
ತಾಲೂಕಿನ ಬೆಳವನೂರು ಗ್ರಾಮದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ತೂಗಿಸುವ ಖರೀದಿ ವಹಿವಾಟಿಗೂ ಇ-ಪದ್ಧತಿ ಜಾರಿಗೊಳಿಸಿದರೆ ರೈತರಿಂದ ಖರೀದಿಸಿ, ಹಣ ಪಾವತಿಸದಿರುವುದು ಅಥವಾ ವಿಳಂಬವಾಗಿ ಹಣ ಪಾವತಿಸುವುದು, ಹಣ ಪಾವತಿ ವೇಳೆ ಇಂತಿಷ್ಟು ಪರ್ಸೆಂಟ್ ಡಿಸ್ಕೌಂಟ್ ಮಾಡುವುದು, ಪ್ರತಿ ಚೀಲಕ್ಕೆ 2 ಕೆಜಿ ಶೂಟ್ ಕಡಿತ, ಹಮಾಲರು ಸ್ಯಾಂಪಲ್-ತಳಗಾಳು ಪಡೆಯುವುದು ಸೇರಿದಂತೆ ನಾನಾ ರೀತಿ ರೈತರ ಶೋಷಣೆಯನ್ನು ತಪ್ಪಿಸಿದಂತಾಗುತ್ತದೆ ಎಂದರು. ನಿತ್ಯ ಬೆಳಿಗ್ಗೆ 9ರ ಒಳಗಾಗಿ ರೈತರು ಎಪಿಎಂಸಿಗೆ ಸ್ಯಾಂಪಲ್ ತರಬೇಕು. ಸ್ಯಾಂಪಲ್ನಲ್ಲಿ ರೈತರ ಹೆಸರು, ಊರು, ಎಷ್ಟು ಚೀಲ ಅಂತಾ ಚೀಟಿಯಲ್ಲಿ ಬರೆದು ಹಾಕಿ, ಲಾಟ್ ನಂಬರ್ ನೀಡ ಬೇಕು. ಖರೀದಿದಾರರು ಸ್ಯಾಂಪಲ್ ತೇವಾಂಶ, ಗುಣಮಟ್ಟ ಪರಿಶೀಲಿಸಿ, ರಾಶಿಯನ್ನು ಹೋಗಿ ನೋಡಿಕೊಂಡು ಬಂದು, ಮಧ್ಯಾಹ್ನ 12ರ ಒಳಗಾಗಿ ಟೆಂಡರ್ ಹಾಕಬೇಕು. ಮಧ್ಯಾಹ್ನ 1ರ ಹೊತ್ತಿಗೆ ಟೆಂಡರ್ ತೆರೆಯಬೇಕು ಎಂದು ಅವರು ಆಗ್ರಹಿಸಿದರು.
ಯಶಸ್ವಿ ಟೆಂಡರ್ ದಾರರು ಸಂಜೆ 6ರ ಒಳಗಾಗಿ ಚೀಲ ತುಂಬಿಸಿ, ಲೋಡ್ ಮಾಡಿಕೊಂಡು ವೇಮೆಂಟ್ ಮಾಡಿಸಬೇಕು. ವೇಮೆಂಟ್ ಸ್ಲಿಪ್ನಲ್ಲಿ ಖರೀದಿದಾರರ ಹೆಸರು, ರೈತನ ಹೆಸರು, ಖರೀದಿಸಿದ ದರ ದಾಖಲಿಸಬೇಕು. ಇದರಿಂದ ರೈತರನ್ನು ವಂಚಿಸಲು ಸಾಧ್ಯವಾಗುವುದಿಲ್ಲ. ವೇಮಂಟ್-ಪೇಮೆಂಟ್ ಕಂಡೀಷನ್ನಂತೆ ರೈತನಬ್ಯಾಂಕ್ ಖಾತೆಗೆ ಆನ್ಲೈನ್ನಲ್ಲಿ ಹಣ ಪಾವತಿಸಬೇಕು ಎಂದು ಅವರು ತಿಳಿಸಿದರು.
ದಲಾಲರು, ಮಧ್ಯವರ್ತಿಗಳ ಮಧ್ಯಸ್ಥಿಕೆ ಇಲ್ಲದೇ, ರೈತರಿಂದ ಖರೀದಿದಾರರಿಗೆ ನೇರವಾಗಿ ವ್ಯಾಪಾರ, ವಹಿವಾಟು ಆಗುತ್ತದೆ. ರೈತರ ಶೋಷಣೆ, ವಂಚನೆಗೆ ಆಸ್ಪದ ಇರುವುದಿಲ್ಲ. ವೇಮೆಂಟ್ ತೂಕವಾಗುವುದರಿಂದ ತೂಕದಲ್ಲಿ, ಪೇಮೆಂಟ್ನಲ್ಲಿ ವಂಚಿಸುವುದಕ್ಕೆ ಸಾಧ್ಯವೇ ಇಲ್ಲ. ಮಾರುಕಟ್ಟೆಗೆ ತರುವ ಸಾಗಾಣಿಕೆ ವೆಚ್ಚ, ಮಾರುಕಟ್ಟೆಯಲ್ಲಿ ಸುರಿದು ಚೀಲಕ್ಕೆ ತುಂಬಿ, ತೂಕ ಮಾಡಿ, ಲೋಡ್ ಮಾಡುವ ಮಾನವ ಶ್ರಮ ತಪ್ಪುತ್ತದೆ. ವೇಮೆಂಟ್-ಪೇಮೆಂಟ್ ಕಂಡೀಷನ್ ಜಾರಿಗೊಳಿಸಲು ಸುಲಭವಾಗುತ್ತದೆ ಎಂದು ಅವರು ಹೇಳಿದರು.
ಶೂಟ್ ಪಡೆಯುವ ಮತ್ತು ಡಿಸ್ಕೌಂಟ್ ಮಾಡುವ ಪದ್ಧತಿ ಸಂಪೂರ್ಣ ರದ್ಧಾಗುತ್ತದೆ. ಕೃಷಿ ಉತ್ಪನ್ನ ವಹಿವಾಟು ಸಂಪೂರ್ಣ ಕ್ರಮಬದ್ಧವಾಗಿರುತ್ತದೆ. ಇದರಿಂದ ಮಾರುಕಟ್ಟೆ ಶುಲ್ಕ ಕ್ರಮಬದ್ಧವಾಗಿ ಸಂಗ್ರಹವಾಗುತ್ತದೆ. ಹಳ್ಳಿಗಳಲ್ಲಿ ತೂಗಿಸುವ ಖರೀದಿ ವಹಿವಾಟಿಗೂ ಇ-ಟೆಂಡರ್ ರೈತರ ಪಾಲಿಗೆ ವರವಾಗಲಿದೆ. ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 11 ಕೋಟಿ ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆಗಳ ಬಳಿ ವೇಬ್ರಿಡ್ಜ್ ಆರಂಭಿಸಿ, ಅದನ್ನು ಸರ್ಕಾರವೇ ನಿರ್ವಹಿಸುವ ಮಹತ್ವದ ತೀರ್ಮಾನ ಕೈಗೊಂಡಿರುವುದನ್ನು ಒಕ್ಕೂಟ ಸ್ವಾಗತಿಸುತ್ತದೆ ಎಂದು ಅವರು ತಿಳಿಸಿದರು.
ರಾಜ್ಯದ ಎಲ್ಲಾ ಎಪಿೆಂಸಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ವೇಬ್ರಿಡ್ಜ್ಗಳನ್ನು ಸ್ಥಾಪಿಸಿ, ತೂಕದಲ್ಲಿ ರೈತರಿಗೆ ಆಗುವಂತಹ ವಂಚನೆಯನ್ನು ಸರ್ಕಾರ ನಿರ್ಮೂಲನೆ ಮಾಡಬೇಕು. ದಾವಣಗೆರೆ ಎಪಿಎಂಸಿ ಕಾರ್ಯದರ್ಶಿ ಎಚ್.ಸಿ.ಎಂ.ರಾಣಿ ಅವರು ನೀಡಿದ್ದ ಆಶ್ವಾಸನೆಯಂತೆ ಹಳ್ಳಿಗಳಲ್ಲಿ ತೂಗಿಸುವ ಖರೀದಿ ವಹಿವಾಟಿಗೂ ಇ-ಟೆಂಡರ್ ಪದ್ಧತಿ ಜಾರಿಗೊಳಿಸುವಂತೆ ಎಪಿಎಂಸಿ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರೈತರು ಮತ್ತು ವರ್ತಕರ ಸಭೆಯನ್ನು ಶೀಘ್ರವೇ ಕರೆಯಬೇಕು ಎಂದು ಬಿ.ಎಂ.ಸತೀಶ, ಬೆಳವನೂರು ನಾಗೇಶ್ವರ ರಾವ್ ಒತ್ತಾಯಿಸಿದರು. ಒಕ್ಕೂಟದ ಕುಂದುವಾಡ ಮಹೇಶಪ್ಪ, ಜಿಮ್ಮಿ ಹನುಮಂತಪ್ಪ, ಎ.ಪ್ರಕಾಶ, ಆರನೇ ಕಲ್ಲು ವಿಜಯಕುಮಾರ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.