ಕನ್ನಡಪ್ರಭ ವಾರ್ತೆ ಉಡುಪಿ
ಮುಂಬರುವ ಮಾ. 23ರಂದು ಕಲಾವಿದ ಹಿಲಿಯಾಣ ರಜತಸಂಭ್ರಮದ ಕಾರ್ಯಕ್ರಮಗಳು ಮಂದಾರ್ತಿ ದುರ್ಗಾ ಸನ್ನಿಧಿಯಲ್ಲಿ (ಶೇಡಿಕೂಡ್ಲು) ನಡೆಯಲಿದೆ. ತನ್ನಿಮಿತ್ತ ರಚಿಸಲಾದ ಆಮಂತ್ರಣ ಕರಪತ್ರ ಇತ್ತೀಚೆಗೆ ಹನುಮಗಿರಿ ಮೇಳದ ರಂಗಸ್ಥಳದಲ್ಲಿ ಮತ್ತು ಮಂದಾರ್ತಿ ಶ್ರೀದುರ್ಗಾಪರಮೇಶ್ಶರಿ ದೇವಳದಲ್ಲಿ ಬಿಡುಗಡೆಗೊಂಡಿತು.
ಕಾರ್ಯಕ್ರಮದ ಪ್ರಚಾರಕ್ಕಾಗಿ ಎರಡು ವಿನ್ಯಾಸಗಳ ವಿಭಿನ್ನ ಎರಡು ವರ್ಣರಂಜಿತ ಕರಪತ್ರ ರಚಿಸಲಾಗಿದೆ. ಮೊದಲ ಕರಪತ್ರ ನ.23ರಂದು ಭಗವಾನ್ ಶ್ರೀಸತ್ಯಸಾಯಿ ಬಾಬ ಅವರ 99ನೇ ಜನ್ಮದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲೆಯ ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಯಕ್ಷಮಿತ್ರರು ಬೆಂಗಳೂರು ಇದರ ಸಾರಥಿ ಶ್ಯಾಮಸೂರ್ಯ ಮುಳಿಗದ್ದೆ ಆಯೋಜಿಸಿದ ಹನುಮಗಿರಿ ಮೇಳದ ಬಯಲಾಟದ ರಂಗಸ್ಥಳದಲ್ಲಿ ಬಿಡುಗಡೆಗೊಂಡಿತು.ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಕರಪತ್ರ ಬಿಡುಗಡೆ ಮಾಡಿ, ಹಿಲಿಯಾಣ ಅವರಿಗೆ ಮಂತ್ರಾಕ್ಷತೆ ನೀಡಿ ಹರಸಿದರು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ.ಟಿ ಶಾಮಭಟ್, ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದ ಸಂಚಾಲಕ ಹಿರಣ್ಯ ಮಹಾಲಿಂಗ ಭಟ್, ಹನುಮಗಿರಿ ಮೇಳದ ಪ್ರಬಂಧಕ ಹರೀಶ್ ಬಳಂತಿಮೊಗರು, ರಾಜೇಶ್ ಭಟ್ ನಿಡುವಜೆ, ಶ್ಯಾಮಸೂರ್ಯ ಮುಳಿಗದ್ದೆ ಮತ್ತು ಭಾಗವತ ರವಿಚಂದ್ರ ಕನ್ನಡಿಕಟ್ಟೆ ಮತ್ತಿತರರು ಇದ್ದರು.
ಕಲಾಯಾನದ ಬೆಳ್ಳಿಹಬ್ಬವನ್ನಾಚರಿಸುವ ಕಲಾವಿದ ಹಿಲಿಯಾಣ ಅವರಿಗೆ ಮಂದಾರ್ತಿ ಅಮ್ಮನ ಹಾಗೂ ಊರವರೆಲ್ಲರ ಆಶೀರ್ವಾದಗಳಿರಲೆಂದು ದೇವಳದ ಪರ ಪ್ರಾರ್ಥಿಸಲಾಯಿತು.
ಮಂದಾರ್ತಿ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿ, ಕಲಾಪೋಷಕ ವಿಠಲ ಶೆಟ್ಟಿ ಮಂದಾರ್ತಿ, ಮಂದಾರ್ತಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕಾಂತ ಅಡಿಗ, ಗಂಗಾಧರ ಶೆಟ್ಟಿ ಮಂದಾರ್ತಿ, ಅಶೋಕ್ ಕುಂದರ್ ಮಂದಾರ್ತಿ , ಪ್ರದೀಪ ಶೆಟ್ಟಿ ಮಂದಾರ್ತಿ, ರವಿರಾಜ್ ಶೆಟ್ಟಿ, ಕಲಾವಿದ ಪ್ರಕಾಶ್ ಕಿರಾಡಿ, ಪ್ರಸಾದ ಕಾವಡಿ ಮತ್ತಿತರರು ಹಾಜರಿದ್ದರು.