ಗಜೇಂದ್ರಗಡ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೂಲಿಕಾರ್ಮಿಕ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ೧೫ ದಿನದೊಳಗೆ ತಲುಪಿಸದಿದ್ದರೆ ಸಂತ್ರಸ್ತ ಕುಟುಂಬಗಳೊಂದಿಗೆ ಶಾಸಕರ ಮನೆಗೆ ಪಾದಾಯಾತ್ರೆ ನಡೆಸುತ್ತೇವೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಕಾರರ ಸಂಘದ ಪದಾಧಿಕಾರಿಗಳು ಪಟ್ಟಣದ ತಹಸೀಲ್ದಾರ್ ಮೂಲಕ ಸಿಎಂ ಹಾಗೂ ಶಾಸಕರಿಗೆ ಮಂಗಳವಾರ ಮನವಿ ನೀಡಿದರು.
ಸಚಿವ ಸ್ಥಾನಕ್ಕೆ ಜಿಲ್ಲಾದ್ಯಂತ ಹೋರಾಟ, ಆಗ್ರಹ ನಡೆಯುತ್ತಿವೆ. ಶಾಸಕ ಸ್ಥಾನ ಸರಿಯಾಗಿ ನಿರ್ವಹಣೆ ಮಾಡಲು ಆಗದ ನೀವು, ನಿಮಗೆ ಸಚಿವ ಸ್ಥಾನ ಬೇಕಾ ಎಂದು ಪ್ರಶ್ನಿಸಿದರು. ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವರು ಹುಲಕೋಟಿಗೆ ಮಾತ್ರ ಸಿಮೀತವಾಗಿದ್ದರು. ನಮ್ಮ ಜಿಲ್ಲೆಯ ೩ ಕೂಲಿಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಸಿಎಂಗೆ ಗಂಭೀರವಾಗಿ ತಗೆದುಕೊಳ್ಳಲು ಹೇಳಿ ತಕ್ಷಣ ಪರಿಹಾರ ಕೊಡಿಸುವ ಕೆಲಸವಾಗಿಲ್ಲ. ಹೀಗಾಗಿ, ಶಾಸಕರು ಘಟನೆಯನ್ನು ಸಂವೇಧನಾಶೀಲರಾಗಿ ಪರಿಗಣಿಸಬೇಕು. ಅಪಘಾತ ದಿನ ದೊಡ್ಡ, ದೊಡ್ಡ ಮಾತುಗಳನ್ನಾಡಿದ್ದ ಕಾಂಗ್ರೆಸ್ ಕಾರ್ಯಕರ್ತರು, ಬಡವರು ಸತ್ತಿದ್ದಾರೆ ಅವರಿಗೆ ಪರಿಹಾರ ಕೊಡಿಸಲೇಬೇಕು ಎಂದು ಶಾಸಕರನ್ನು ಏಕೆ ಕೇಳುತ್ತಿಲ್ಲ ಎಂದರು.
"ಕೂಲಿಕಾರ್ಮಿಕರು ಮೃತಪಟ್ಟು ೫ ತಿಂಗಳೂ ಸಮೀಪಿಸುತ್ತಿದ್ದರೂ ಸಂತ್ರಸ್ತ ಕುಟುಂಬಗಳು ತಹಸೀಲ್ದಾರ್ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದು ಬೇಸತ್ತಿದ್ದಾರೆ. ಹೀಗಾಗಿ, ೧೫ ದಿನದೊಳಗೆ ತಾಲೂಕಾಡಳಿತ ಅಪಘಾತದಲ್ಲಿ ಮೃತಪಟ್ಟ ಕುಟುಂಗಳಿಗೆ ಸಿಎಂ ಪರಿಹಾರ ನಿಧಿ ದೊರಕಿಸಿಕೊಡವಲ್ಲಿ ವಿಫಲವಾದರೆ ಪಟ್ಟಣದಿಂದ ಮೃತರ ಭಾವಚಿತ್ರ ಹಿಡಿದು ಪಾದಯಾತ್ರೆ ಮೂಲಕ ಶಾಸಕರ ನಿವಾಸಕ್ಕೆ ತೆರಳುತ್ತೇವೆ " ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಮನವಿ ಸ್ವೀಕರಿಸಿದರು. ಈ ವೇಳೆ ದಾವಲಸಾಬ ತಾಳಿಕೋಟಿ, ಐ.ಬಿ. ಹಾಳಕೇರಿ, ಆರ್.ವೈ. ಕೇಶಣ್ಣವರ, ರಾಜಪ್ಪ ಹೊಸಮನಿ, ಮೈಬು ಹುನಗುಂದ, ಎಚ್.ಎಚ್. ತಹಸೀಲ್ದಾರ್, ಶಶಿಧರ ಗೌಡರ, ಆನಂದ ಮರಾಠಿ, ಚಂದ್ರು ಚಂಗಳಿ, ಮಂಜುನಾಥ ಚವ್ಹಾಣ ಸೇರಿ ಅಪಾಘತದಲ್ಲಿ ಮೃತಪಟ್ಟ, ಅಪಘಾತದಲ್ಲಿ ಗಾಯಾಳುಗಳಾದ ಕುಟುಂಬಸ್ಥರು ಇದ್ದರು.