ಪಿಯು ಮಂಡಳಿಯ ಮಾರ್ಗಸೂಚಿಯಲ್ಲಿ ಮಾರ್ಪಾಡಿಗೆ ಕುಪ್ಮಾ ಸರ್ಕಾರಕ್ಕೆ ಮನವಿ

KannadaprabhaNewsNetwork |  
Published : May 17, 2025, 02:10 AM IST
ಡಾ.ಮೋಹನ ಆಳ್ವ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಕೊಡಿಯಾಲ್ ಬೈಲ್‌ನ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸಮಾವೇಶ ನಡೆಯಿತು. ಕುಪ್ಮ ರಾಜ್ಯ ಸಮಿತಿಯ ಅಧ್ಯಕ್ಷ ಡಾ. ಮೋಹನ್ ಆಳ್ವರು ಸಮಾವೇಶ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರುನಗರದ ಕೊಡಿಯಾಲ್ ಬೈಲ್‌ನ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸಮಾವೇಶ ನಡೆಯಿತು.

ಕುಪ್ಮ ರಾಜ್ಯ ಸಮಿತಿಯ ಅಧ್ಯಕ್ಷ ಡಾ. ಮೋಹನ್ ಆಳ್ವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯನ್ನು ನಾವು ದ.ಕ. ಜಿಲ್ಲೆಯಲ್ಲಿ ಗಟ್ಟಿಯಾಗಿ ಸಂಘಟಿಸಬೇಕಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಒಟ್ಟು ೧೦೮ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಿದ್ದು ಇವುಗಳು ವಿದ್ಯಾರ್ಥಿಗಳಿಗೆ ಉತ್ತಮವಾಗಿರುವಂತಹ ಶಿಕ್ಷಣವನ್ನು ನೀಡುತ್ತಿದೆ. ಅನೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಮಾರ್ಗದರ್ಶನವನ್ನು ನೀಡುತ್ತಾ ಬರುತ್ತಿದೆ. ರಾಜ್ಯದ ಪದವಿ ಪೂರ್ವ ಪರೀಕ್ಷೆಯಲ್ಲಿ ಮಾದರಿ ಫಲಿತಾಂಶವನ್ನು ನಿರಂತರವಾಗಿ ಕೊಡುತ್ತಾ ಬರುತ್ತಿದೆ ಎಂದರು. ರಾಜ್ಯದ ಪದವಿ ಪೂರ್ವ ಶಿಕ್ಷಣ ಮಂಡಳಿಯು ಹೊರಡಿಸುವ ಮಾರ್ಗಸೂಚಿಯಲ್ಲಿ ಇರುವ ಅಂಶಗಳಲ್ಲಿ ಅನೇಕ ವಿಷಯಗಳನ್ನು ಮಾರ್ಪಾಡು ಮಾಡಲು ಸರ್ಕಾರವನ್ನು ಇತ್ತೀಚೆಗೆ ನಾವು ಆಗ್ರಹಿಸಿದ್ದೇವೆ. ಮುಂದಿನ ದಿನಗಳಲ್ಲಿಯೂ ನಾವು ಒಟ್ಟಾಗಿ ಒಗ್ಗಟ್ಟಾಗಿ ನಮ್ಮ ಬೇಡಿಕೆಗಳನ್ನು ಸರಕಾರ ಈಡೇರಿಸುವಂತೆ ಆಗ್ರಹಿಸಬೇಕಾಗಿದೆ. ನಮ್ಮ ಸಂಘಟನೆ ಮತ್ತು ಸರಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಪೂರಕವಾಗಿರುವ ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಸಂಸ್ಥೆಯ ಸದಸ್ಯತ್ವವನ್ನು ಪಡೆಯುವುದರ ಮೂಲಕ ಕಾರ್ಯ ಪ್ರವೃತ್ತರಾಗಬೇಕು ಎಂದರು. ಕುಪ್ಮದ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್ ಮಾತನಾಡಿ, ನಾವೆಲ್ಲರೂ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದರಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸಿದ್ದೇವೆ. ಕುಪ್ಮದ ಸಂಘಟನೆಯನ್ನು ಬೆಳೆಸುವುದರಲ್ಲಿಯೂ ಪ್ರತಿಯೊಬ್ಬರು ಕಾರ್ಯ ಪ್ರವೃತ್ತರಾಗಬೇಕು. ನಾವೆಲ್ಲರೂ ಕುಪ್ಮದ ಸದಸ್ಯರಾಗುವುದರ ಮೂಲಕ ಸಂಸ್ಥೆಯ ಕಾರ್ಯವನ್ನು ವಿಸ್ತರಿಸಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲೆಯ ಸುಮಾರು ೫೦ಕ್ಕಿಂತ ಹೆಚ್ಚಿನ ಆಡಳಿತ ಮಂಡಳಿಯ ಆಮಂತ್ರಿತ ಸದಸ್ಯರ ಜೊತೆ ಸಂವಾದವನ್ನು ನಡೆಸಲಾಯಿತು. ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳ ಕುರಿತಂತೆ ಅನೇಕ ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯರು ವಿಷಯಗಳನ್ನು ಪ್ರಸ್ತಾಪ ಮಾಡಿದರು. ಸಮಾವೇಶದಲ್ಲಿ ಎಲ್ಲರ ಅಭಿಪ್ರಾಯವನ್ನು ಕ್ರೋಡಿಕರಿಸಿ ಸಮಿತಿಯ ರಾಜ್ಯಾಧ್ಯಕ್ಷರು ವಿಸ್ತೃತವಾಗಿರುವ ಮನವಿ ಪತ್ರವನ್ನು ರಾಜ್ಯದ ಶಿಕ್ಷಣ ಸಚಿವರಿಗೆ ಸಲ್ಲಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.ದ.ಕ. ಜಿಲ್ಲಾ ಸಮಿತಿಗೆ ೩ ಮಂದಿ ಆಯ್ಕೆ: ಜಿಲ್ಲಾ ಅಧ್ಯಕ್ಷರಾಗಿ ಎಕ್ಸೆಲೆಂಟ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿಯಾಗಿ ಸೂರಜ್ ಇಂಟರ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಡಾ. ಮಂಜುನಾಥ್ ರೇವಣ್‌ಕರ್ ಹಾಗೂ ಕೋಶಾಧಿಕಾರಿಯಾಗಿ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಘೋಷಣೆ ಮಾಡಿದರು.ವೇದಿಕೆಯಲ್ಲಿ ಕುಪ್ಮದ ಗೌರವಾಧ್ಯಕ್ಷರಾದ ಡಾ. ಕೆ.ಸಿ. ನಾಯ್ಕ್‌, ಡಾ. ಎಂ.ಬಿ. ಪುರಾಣಿಕ್, ಜಿಲ್ಲಾ ಅಧ್ಯಕ್ಷ ಯುವರಾಜ್ ಜೈನ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ರೇವಣ್‌ಕರ್, ಕೋಶಾಧಿಕಾರಿ ರಮೇಶ್ ಕೆ. ಇದ್ದರು.

ಸಂಯೋಜಕ ಕರುಣಾಕರ್ ಬಳ್ಕೂರ್‌ ನಿರೂಪಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?