ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಗೋಕಳ್ಳತನ ತಡೆಗಟ್ಟುವಂತೆ ಮನವಿ

KannadaprabhaNewsNetwork | Published : May 28, 2025 12:23 AM
ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಗೋಕಳ್ಳತನ ತಡೆಗಟ್ಟಬೇಕು. ರಸ್ತೆಯಲ್ಲಿ ಮಲಗಿರುವ ಗೋವುಗಳನ್ನು ಐಷಾರಾಮಿ ವಾಹನದಲ್ಲಿ ತುಂಬಿಕೊಂಡು ಹೋಗುತ್ತಿರುವ ದುಷ್ಕರ್ಮಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಗೋಕಳ್ಳತನ ತಡೆಗಟ್ಟಬೇಕು. ರಸ್ತೆಯಲ್ಲಿ ಮಲಗಿರುವ ಗೋವುಗಳನ್ನು ಐಷಾರಾಮಿ ವಾಹನದಲ್ಲಿ ತುಂಬಿಕೊಂಡು ಹೋಗುತ್ತಿರುವ ದುಷ್ಕರ್ಮಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಭಜರಂಗದಳದ ಜಿಲ್ಲಾ ಸಂಚಾಲಕ ಸಂತೋಷ್ ಶಿವಾಜಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚುತ್ತಿದೆ. ರಸ್ತೆಯಲ್ಲಿ ಮಲಗಿರುವ ಜಾನುವಾರುಗಳನ್ನು ರಾತ್ರಿವೇಳೆ ಗೋ ಕಳ್ಳರು ಬ್ರೆಡ್ಗೆ ಮತ್ತು ಬರುವ ಔಷಧಿಯನ್ನು ಹಾಕಿ ಕಳ್ಳತನ ಮಾಡುತ್ತಿದ್ದಾರೆ. ಐಷಾರಾಮಿ ಕಾರಿನಲ್ಲಿ ಜಾನುವಾರುಗಳನ್ನು ತುಂಬಿ ಚಿತ್ರಹಿಂಸೆ ನೀಡಿ ಸಾಗಿಸಲಾಗುತ್ತಿದೆ. ಸದ್ಯದಲ್ಲಿಯೆ ಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗೋಸಾಗಾಣಿಕೆ, ಹತ್ಯೆ ಇನ್ನಷ್ಟು ಹೆಚ್ಚುವ ಅಪಾಯ ಇದೆ. ತಕ್ಷಣ ಬೀಡಾಡಿ ದನಗಳನ್ನು ರಕ್ಷಣೆ ಮಾಡಲು ನಗರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು. ಗೋವುಗಳಿಗೆ ಚಿತ್ರಹಿಂಸೆ ನೀಡಿ ಹಿಂದೂ ಸಮಾಜದ ಭಾವನೆಗಳಿಗೆ ಘಾಸಿಗೊಳಿಸುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ಗೋವುಗಳನ್ನು ಅಪಹರಿಸಿ ಅದನ್ನು ಬೇರೆಬೇರೆ ಕಡೆ ಸಾಗಿಸುವ ದೊಡ್ಡ ಜಾಲವೊಂದು ಸಾಗರದಲ್ಲಿ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆ ಇಂಥವರ ಬಗ್ಗೆ ಕಠಿಣ ಕ್ರಮ ಜರುಗಿಸಬೇಕು. ಬೀಡಾಡಿ ದನಗಳ ರಕ್ಷಣೆಗೆ ನಗರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕು. ಗೋಸಾಗಾಣಿಕೆ, ಗೋಹತ್ಯೆಯನ್ನು ತಡೆಯದೆ ಹೋದಲ್ಲಿ ಪರಿವಾರದ ವತಿಯಿಂದ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಪ್ರಮುಖರಾದ ಕೆ.ಎಚ್.ಸುದರ್ಶನ್, ಕಿರಣ್, ಸುನೀಲ್ ರುದ್ರಪ್ಪ, ಪವನ್, ಶ್ರೀಧರ್, ರಾಘವೇಂದ್ರ, ಶ್ರೀಕರ್ ಭಟ್, ಸುದರ್ಶನ ಭಟ್, ಪವನ್ ಇನ್ನಿತರರು ಹಾಜರಿದ್ದರು.