ಭಟ್ಕಳ: ಪಟ್ಟಣದಲ್ಲಿ ಒಂದೇ ಸಿಎನ್ಜಿ ಬಂಕ್ ಇದ್ದು, ಇದರಿಂದ ಎಲ್ಲ ವಾಹನಗಳಿಗೂ ಸಿಎನ್ಜಿ ತುಂಬಿಸಲು ಒತ್ತಡ ಆಗುತ್ತಿದೆ. ಆಟೋ ರಿಕ್ಷಾದವರಿಗೆ ಸಿಎನ್ಜಿ ತುಂಬಿಸಲು ಅನುಕೂಲವಾಗುವಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ರಿಕ್ಷಾ ಚಾಲಕರ ಸಂಘದಿಂದ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ತಾಲೂಕಿನಲ್ಲಿ ಸಿಎನ್ಜಿ ಬಂಕ್ ಒಂದೇ ಇರುವುದರಿಂದ ಆಟೋ ರಿಕ್ಷಾಗಳಿಗೆ ಸಮಸ್ಯೆ ಆಗಿದೆ. ತಾಲೂಕಿನಲ್ಲಿ ಸಿಎನ್ಜಿ ಬಳಸುವ ೫೦೦ಕ್ಕೂ ಅಧಿಕ ಆಟೋಗಳಿದ್ದು, ಆಟೋಗಳು ಸಿಎನ್ಜಿ ತುಂಬಿಸಿಕೊಳ್ಳಲು ದಿನಂಪ್ರತಿ ಪರದಾಡುವಂತಾಗಿದೆ. ಭಟ್ಕಳ ಪಟ್ಟಣದಲ್ಲಿ ಸಿಎನ್ಜಿ ಬಂಕ್ ಒಂದೇ ಇರುವುದರಿಂದ ಇಲ್ಲಿ ಎಷ್ಟೊತ್ತಿಗೆ ಸಿಎನ್ಜಿ ಬರುತ್ತದೆ; ಅದು ಖಾಲಿ ಆಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ.
ಒಮ್ಮೊಮ್ಮೆ ಆಟೋದವರು ಸಿಎನ್ಜಿ ತುಂಬಿಸಿಕೊಳ್ಳಲು ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಆಟೋ ಚಾಲಕರು ಆಟೋ ಓಡಿಸುವ ವೃತ್ತಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಪ್ರತಿನಿತ್ಯ ಸಿಎನ್ಜಿಗಾಗಿ ಇವರು ಪರದಾಡುವಂತಾದರೆ ಜೀವನ ನಡೆಸುವುದು ಬಹಳ ಕಷ್ಟಕರವಾಗಲಿದೆ. ಹೀಗಾಗಿ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಆಟೋದವರಿಗೆ ಸಿಎನ್ಜಿ ತುಂಬಿಸಿಕೊಳ್ಳಲು ಈಗಿರುವ ಬಂಕ್ ನಲ್ಲಿ ವಿಶೇಷ ವ್ಯವಸ್ಥೆ ಮಾಡಿಸಬೇಕು. ಇಲ್ಲದಿದ್ದಲ್ಲಿ ಮತ್ತೊಂದು ಪಂಪ್ ಅಳವಡಿಸಲು ಕ್ರಮ ಕೈಗೊಳ್ಳವುದು ತೀರಾ ಅವಶ್ಯವಿದೆ.
ಆಟೋ ಚಾಲಕರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಆದಷ್ಟು ಬೇಗ ಸಿಎನ್ಜಿ ಸಮಸ್ಯೆಯನ್ನು ಬಗೆಹರಿಸಿ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಲಾಗಿದೆ. ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಮನವಿ ಸ್ವೀಕರಿಸಿ, ಮಾಲಕರ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು. ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಮಾದೇವ ನಾಯ್ಕ, ಪ್ರಮುಖರಾದ ರಾಮಚಂದ್ರ ನಾಯ್ಕ, ಸಲೀಂ, ಅಬ್ದುಲ್ಲಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಭಟ್ಕಳದಲ್ಲಿ ಆಟೋ ರಿಕ್ಷಾದವರಿಗೆ ಸಮರ್ಪಕ ಸಿಎನ್ಜಿ ವ್ಯವಸ್ಥೆ ಕಲ್ಪಿಸುವಂತೆ ತಹಸೀಲ್ದಾರರಿಗೆ ರಿಕ್ಷಾ ಚಾಲಕರ ಸಂಘದಿಂದ ಮನವಿ ಸಲ್ಲಿಸಲಾಯಿತು.