ಹಾವೇರಿ: ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಹಿರಿಯ ಚಿತ್ರಕಲಾವಿದ ಕರಿಯಪ್ಪ ಹಂಚಿನಮನಿ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಮತ್ತು ಶಿಲ್ಪ ಕಲಾವಿದ ಹರೀಶ ಮಾಳಪ್ಪನವರ ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ನೇಮಕವಾಗಿರುವ ಹಿನ್ನೆಲೆಯಲ್ಲಿ ಸಾಹಿತಿ ಕಲಾವಿದರ ಬಳಗದ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.
ಚಿತ್ರಕಲಾವಿದ ಕರಿಯಪ್ಪ ಹಂಚಿನಮನಿ ಮಾತನಾಡಿ, ಹರೀಶ ಮಾಳಪ್ಪನವರ ಮತ್ತು ನಾನು ಒಟ್ಟಿಗೆ ಕಲಾ ಲೋಕದಲ್ಲಿ ಬೆಳೆದವರು. ಪರಸ್ಪರ ಚಿಂತನೆ ಮತ್ತು ಚರ್ಚೆ ಮೂಲಕ ನಮ್ಮನ್ನು ಒರೆಗೆ ಹಚ್ಚಿಕೊಂಡವರು. ಒಂದೇ ಜಿಲ್ಲೆಯಿಂದ ಇಬ್ಬರೂ ಅಕಾಡೆಮಿಗಳಿಗೆ ನೇಮಕವಾಗಿರುವುದು ಅಭಿಮಾನ ಮೂಡಿಸಿದೆ. ನಮಗಿಬ್ಬರಿಗೂ ಇದು ಸವಾಲು ಕೂಡ ಹೌದು ಎಂದು ಅರಿತಿದ್ದೇವೆ. ನಮಗೆ ನೀಡಿರುವ ಜವಾಬ್ದಾರಿಯನ್ನು ಉಳಿಸಿಕೊಳ್ಳುವ ಅಚಲ ವಿಶ್ವಾಸವಿದೆ ಎಂದರು.
ಶಿಲ್ಪ ಕಲಾವಿದ ಹರೀಶ ಮಾಳಪ್ಪನವರ ಮಾತನಾಡಿ, ಅಕಾಡೆಮಿಗಳಿಗೆ ನೇಮಕವಾಗುವ ನಿರೀಕ್ಷೆ ಇರಲಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡುತ್ತ ಮಗ್ನವಾಗುವುದು ನನ್ನ ಸ್ವಭಾವ. ನನ್ನನ್ನು ಮತ್ತು ಕರಿಯಪ್ಪ ಹಂಚಿನಮನಿ ಅವರನ್ನು ಅಕಾಡೆಮಿಗೆ ನೇಮಕ ಮಾಡಿರುವುದು ಖುಷಿ ತಂದಿದೆ ಎಂದರು.ಸಿ.ಎಸ್. ಮರಳಿಹಳ್ಳಿ, ಎಸ್.ಆರ್. ಹಿರೇಮಠ, ಚಂದ್ರಶೇಖರ ಮಾಳಗಿ, ಪೃಥ್ವಿರಾಜ್ ಬೆಟಗೇರಿ, ನೀಲಪ್ಪ ಮಣ್ಣಮ್ಮನವರ, ಶಂಕರ ಬಡಿಗೇರ, ಆರ್.ಸಿ. ನಂದಿಹಳ್ಳಿ, ಶಿವಾನಂದ ಕುಂಕದ, ಮಲ್ಲೇಶ ಲಮಾಣಿ, ಕರಬಸಪ್ಪ ಗುಜರಿ, ನಾಗರಾಜ ಹುಡೇದ, ಪರಿಮಳಾ ಜೈನ್, ನೇತ್ರಾವತಿ ಅಂಗಡಿ, ಸವಿತಾ ಮಣ್ಣಮ್ಮನವರ ಇದ್ದರು.