ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಮಹಿಳೆಯರ ಉದ್ಯೋಗ ಸೃಷ್ಟಿಗೆ ನೆರವಾಗಿವೆ. ಗ್ರಾಮೀಣ ಮಹಿಳೆಯರ ಬದುಕು ಮತ್ತು ಆರ್ಥಿಕ ಮಟ್ಟ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ತಾಲೂಕಿನ ಐದೂ ಇಲಾಖೆಯ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಸೊನ್ನದ ಗುರುಬಸವರಾಜ್ ಶ್ಲಾಘಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಉಚಿತ ವಿದ್ಯುತ್ ಪೂರೈಕೆ, ಸ್ಥಳೀಯ ಬಸ್ ಡಿಪೋಗೆ ಹೆಚ್ಚುವರಿ ಬಸ್ ಪೂರೈಕೆ, ಸಿಬ್ಬಂದಿ ನೇಮಕಾತಿ, ಮತ್ತಿತರ ಬೇಡಿಕೆಗಳ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿಯ ಸಭೆಯಲ್ಲಿ ಚರ್ಚಿಸಿ ಅಗತ್ಯ ಬಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಅಧಿಕಾರಿ ಬೋರೇಗೌಡರು ಮಾತನಾಡಿ, ತಾಲೂಕಿನ ೪೦೫೬೯ ಪಡಿತರ ಚೀಟಿಗಳನ್ನು ಹೊಂದಿರುವವರಲ್ಲಿ ೪೦೪೯೦ ಪಡಿತರ ಚೀಟಿ ಹೊಂದಿರುವವರು ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿದ್ದಾರೆ ಎಂದರು.ಸಾರಿಗೆ ಇಲಾಖೆಯ ಟ್ರಾಫಿಕ್ ನಿರೀಕ್ಷಕ ಸಂತೋಷ್ ನಾಯ್ಕ ಶಕ್ತಿ ಯೋಜನೆಯ ಕುರಿತು ಮಾತನಾಡಿ, ₹೧.೬೫ ಕೋಟಿ ಮಹಿಳೆಯರು ಯೋಜನೆಯ ಸೌಲಭ್ಯ ಪಡೆದಿದ್ದು, ₹೬೬.೩೮ ಕೋಟಿ ವಿನಿಯೋಗಿಸಲಾಗಿದೆ. ಬಸ್ ಹಿಂಬದಿಯಲ್ಲಿ ಅಳವಡಿಸಲಾಗಿದ್ದ ಮಾದಕ ವಸ್ತುಗಳ ಜಾಹಿರಾತು ಭಿತ್ತಿಗಳನ್ನು ತೆರವುಗೊಳಿಸಲಾಗಿದೆ. ಚಾಲಕ ಮತ್ತು ನಿರ್ವಾಹಕರು ಮಹಿಳಾ ಪ್ರಯಾಣಿಕರ ಜೊತೆಗೆ ಸೌಜನ್ಯದಿಂದ ವರ್ತಿಸುವ ಕುರಿತು ವಾರಕ್ಕೊಮ್ಮೆ ಸಭೆ ನಡೆಸಲಾಗುತ್ತಿದೆ. ನಿಲ್ದಾಣದ ಶೌಚಾಲಯ ದುಸ್ಥಿತಿ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಜಂದಿಸಾಬ್, ಸಮಿತಿಯ ಸದಸ್ಯರಾದ ಸಂತೋಷ್, ಸರ್ದಾರ್ ರಾಮಪ್ಪ, ಕೆ.ನಾಗಮ್ಮ, ಸುಧಾ, ವೆಂಕಟೇಶ್ ನಾಯ್ಕ, ಮೇಟಿ ಮಂಜುನಾಥ್, ರಾಘವೇಂದ್ರ ಪಾಲ್ಗೊಂಡಿದ್ದರು. ತಾಪಂ ಇಒ ಪಿ.ಕೆ. ವಿಶ್ವನಾಥ್ ನಿರ್ವಹಿಸಿದರು.