ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸುದೀರ್ಘ 45 ವರ್ಷಗಳ ರಾಜಕೀಯ ಅನುಭವ ಹಾಗೂ ಹಿರಿತನದ ಆಧಾರದ ಮೇಲೆ ಸೂಕ್ತವಾದ ಸ್ಥಾನ ಮಾಡಿ ಗೌರವಿಸಬೇಕೆಂದು ಕೇಳಿಕೋಳ್ಳುತ್ತೇನೆ ಎಂದು ಶಾಸಕ, ಕರ್ನಾಟಕ ಮಾರ್ಜಕ ಮತ್ತು ಸಾಬೂನು ನಿಗಮ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರದಲ್ಲಿ ನಮ್ಮ ಮತಕ್ಷೇತ್ರದ ಜನರಿಗೆ ಕಾಂಗ್ರೆಸ್ನ ವರಿಷ್ಠರು ಹಾಗೂ ಮುಖ್ಯಮಂತ್ರಿ ಸಿದ್ರಾಮಯ್ಯನವರು ಮಾತು ಕೊಟ್ಟಿದ್ದರು. ಪ್ರಾರಂಭದಲ್ಲೂ ಅವಕಾಶ ಕೊಡಲಿಲ್ಲ. ಸದ್ಯ ಈ 2ನೇ ಅವಧಿಯ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡಬೇಕೆಂದು ನಮ್ಮ ಮತಕ್ಷೇತ್ರದ ಜನರ ಒತ್ತಾಯದ ಕೂಗು ಕೇಳಿಬರುತ್ತಿದೆ. ಇಲ್ಲದಿದ್ದರೇ ಪಕ್ಷದ ಮೇಲೆ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ವಿಶ್ವಾಸ ಕಳೆದುಕೊಳ್ಳುತ್ತಾರೆ. ಆಗ ಪಕ್ಷವೂ ಮುಜುಗರಕ್ಕೆ ಒಳಪಡಬೇಕಾಗುತ್ತದೆ ಎಂದು ತಿಳಿಸಿದರು.ನನ್ನ ಮತಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಪೂರಕ ಕಾಮಗಾರಿಗಳು ಬಾಕಿ ಉಳಿದಿದ್ದು ನಮ್ಮ ಸರ್ಕಾರ ಬಂದರೇ ಈಡೇರಿಸುವುದಾಗಿ ಜನರಲ್ಲಿ ಭರವಸೆ ನೀಡಿದ್ದೇವೆ. ಸದ್ಯ ಅದು ಸಾಧ್ಯವಾಗುತ್ತಿಲ್ಲ. ಒಂದು ಮತಕ್ಷೇತ್ರ ಅಭಿವೃದ್ಧಿಯಾಗಬೇಕಿದ್ದರೇ ಮಂತ್ರಿಯಾಗಿದ್ದರೇ ಮಾತ್ರ ಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಜಾತಿ ಸಮೀಕ್ಷೆ ಆಧಾರದ ಮೇಲೆ ಲಿಂಗಾಯತ ರೆಡ್ಡಿ ಹಾಗೂ ಲಿಂಗಾಯತ ಕೋಟಾದಡಿಯಲ್ಲಿ ನನ್ನನ್ನು ಮಂತ್ರಿ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಮಂತ್ರಿ ಆಸೆಯನ್ನು ತೆರೆದಿಟ್ಟರು.ಕೋಟ್...ಕೈಯಾಗ ಕಂಕಣ ಕಟ್ಟಿಕೊಂಡ ಮೇಲೆ ಏತಕ್ಕಾಗಿ ಕಟ್ಟಿಕೊಂಡಿದ್ದಾರೆ ಅಂತಾ ಎಲ್ಲರಿಗೆ ಗೊತ್ತಾಗುತ್ತದೆ. ಈಗಾಗಲೇ ನಾವು ಕೈಯಾಗ ಕಂಕಣ ಕಟ್ಟಿಕೊಂಡಿದ್ದೇವೆ. ಅಂದರೆ ಅದು ಸಾಧಿಸಬೇಕು ಅಂತಾ ಹವ್ಯಾಸ ಯಾವ ರಾಜಕಾರಣಿಯಲ್ಲೂ ಇದ್ದೇ ಇರುತ್ತದೆ. ಯಾರಿಗಾಗದರೂ ಉನ್ನತಮಟ್ಟದ ಭವಿಷ್ಯ ಹೊಂದಬೇಕೆನ್ನುವುದು ಎಲ್ಲರ ಮನಸ್ಸಿನಲ್ಲಿರುತ್ತದೆ. ನಾನು ಲಿಂಗಾಯತರಲ್ಲಿರುವಂತ ಒಳಪಂಗಡದ ಕೋಟಾದಲ್ಲಿ ಕೇಳುತ್ತೇನೆ. ವಿಜಯಪುರ ಜಿಲ್ಲೆಯಲ್ಲಿಯೇ ಅತ್ಯಂತ ಹಿರಿಯ ಶಾಸಕನಾಗಿದ್ದು, ಈ ಬಾರಿ ನನಗೊಂದು ಅವಕಾಶ ಕೊಡಬೇಕೆಂದು ಇವತ್ತೂ ಕೇಳುತ್ತೇನೆ, ನಾಳೆಯೂ ಕೇಳುತ್ತೇನೆ.-ಸಿ.ಎಸ್.ನಾಡಗೌಡ (ಅಪ್ಪಾಜಿ), ಶಾಸಕ, ಕರ್ನಾಟಕ ಮಾರ್ಜಕ ಮತ್ತು ಸಾಬೂನು ನಿಗಮ ಅಧ್ಯಕ್ಷರು..