ಪಟ್ಟಣದ ಅಯ್ಯನಕೆರೆಯನ್ನು ಪುನರುಜ್ಜೀವನ ಕೈಗೊಳ್ಳಲು ಅವಶ್ಯಕ ಕಾಮಗಾರಿ ಆರಂಭಿಸಲು ವಿಸ್ತ್ರತ ಯೋಜನಾ ವರದಿ ತಯಾರಿಸಲು ಕೌನ್ಸಿಲ್ ಸಭೆ ಮಂಜೂರಾತಿ ನಿರೀಕ್ಷಣೆ ಮೇರೆಗೆ ನೀಡಿರುವ ಅನುಮೋದನೆ ಗುರುವಾರ ನಡೆದ ಪುರಸಭೆ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿತು.
ಪುರಸಭೆ ಸಾಮಾನ್ಯ ಸಭೆ । ಬೀದಿ ನಾಯಿಗಳಿಗೆ ಕಡಿವಾಣ ಹಾಕಿ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಪಟ್ಟಣದ ಅಯ್ಯನಕೆರೆಯನ್ನು ಪುನರುಜ್ಜೀವನ ಕೈಗೊಳ್ಳಲು ಅವಶ್ಯಕ ಕಾಮಗಾರಿ ಆರಂಭಿಸಲು ವಿಸ್ತ್ರತ ಯೋಜನಾ ವರದಿ ತಯಾರಿಸಲು ಕೌನ್ಸಿಲ್ ಸಭೆ ಮಂಜೂರಾತಿ ನಿರೀಕ್ಷಣೆ ಮೇರೆಗೆ ನೀಡಿರುವ ಅನುಮೋದನೆ ಗುರುವಾರ ನಡೆದ ಪುರಸಭೆ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿತು.
ಈ ವಿಚಾರ ಪ್ರಸ್ತಾಪವಾದಾಗ ಸಭೆ ಒಕ್ಕೊರಲಿನಿಂದ ಅನುಮೋದನೆ ನೀಡಿತು.
ಸಿಬ್ಬಂದಿ ಕ್ವಾಟರರ್ಸ್ ಜಾಗ ಮೀಸಲು:
ಪಟ್ಟಣದ ಕೊಟ್ಟೂರು ರಸ್ತೆಯ ನಂಜನಗೌಡ ಬಡಾವಣೆಯಲ್ಲಿ ಕನಿಷ್ಟ 1ಎಕರೆ ಜಾಗ ಪುರಸಭೆಯದು ಇದೆ, ನಾವು ಈವರೆಗೂ ವಿವಿಧ ಸಂಘ ಸಂಸ್ಥೆಗಳಿಗೆ ಜಾಗ ನೀಡಿದ್ದೇವೆ, ಅಲ್ಲಿರುವ ಜಾಗ ನಮ್ಮ ಪುರಸಭೆಯ ನೌಕರರಿಗೆ ಕ್ವಾಟರ್ಸ್ ನಿರ್ಮಿಸಲು ಮೀಸಲಿಟ್ಟು ಅನುದಾನ ಒದಗಿಸಬೇಕು ಎಂದು ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಹೇಳಿದಾಗ ಸಭೆ ಒಪ್ಪಿಗೆ ನೀಡಿತು.
ಬೀದಿ ನಾಯಿಗಳಿಗೆ ಕಡಿವಾಣ ಹಾಕಿ
ಬೀದಿ ನಾಯಿಗಳ ಕಾಟ ಪಟ್ಟಣದಲ್ಲಿ ಜಾಸ್ತಿಯಾಗಿದೆ, ಬೇಗ ಕಡಿವಾಣ ಹಾಕಬೇಕು ಹಾಗೂ ಕೋರಿಹುಳುಗಳ ಕಾಟ ಸಹ ಹೆಚ್ಚಾಗಿದೆ ಎಂದು ಸದಸ್ಯ ಜಾಕೀರ ಹುಸೇನ್ ಪ್ರಸ್ಥಾಪಿಸಿದಾಗ ಮಾಜಿ ಅಧ್ಯಕ್ಷ ಮಂಜುನಾಥ ಇಜಂತಕರ್ ನಾಯಿಗಳ ಕಾಟ ತಪ್ಪಿಸಿ ಹಾಗೂ ಕೋರಿಹುಳಗಳಿಗೆ ಔಷದಿ ಸಿಂಪಡಿಸಿ ನಾಶ ಮಾಡಿ ಎಂದು ಸಲಹೆ ನೀಡಿದರು.
ಪಟ್ಟಣದ ಸುಣಗಾರಗೇರಿಯಲ್ಲಿರುವ ಎಸ್ ಎಚ್ ಡಿ ಶಾಲೆ ಬಳಿ ಶೌಚಾಲಯ ನಿರ್ಮಿಸಬೇಕು ಎಂದು ಸದಸ್ಯ ಶೋಭಾ ಕೇಳಿದಾಗ ಇನ್ನೊಬ್ಬ ಸದಸ್ಯ ಲಾಟಿದಾದಾಪೀರ ಸಹಮತ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆ ಬಳಿ ನಿರ್ಮಿಸುತ್ತಿರುವ ದಿನವಹಿ ಮಾರುಕಟ್ಟೆ ಕಾಮಗಾರಿ ಹಾಗೂ ಡಿವೈಡರ್ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಬೇಗ ಪೂರ್ಣಗೊಳಿಸಲು ಸಂಬಂಧ ಪಟ್ಟ ಗುತ್ತಿಗೆದಾರರಿಗೆ ಸೂಚಿಸಿ ಎಂದು ಮಾಜಿ ಅಧ್ಯಕ್ಷ ಮಂಜುನಾಥ ಇಜಂತಕರ್ ಗಮನ ಸೆಳೆದರು.
ಪುರಸಭೆ ನಗರಸಭೆಯಾಗುತ್ತಲಿದೆ, ಆದ್ದರಿಂದ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಬೇಕು ಎಂದು ಎಂ.ವಿ. ಅಂಜಿನಪ್ಪ ಸಲಹೆ ನೀಡಿದರು. ಐ.ಬಿ. ವೃತ್ತದಿಂದ ನ್ಯಾಷನಲ್ ಶಾಲೆವರೆಗೂ ರಸ್ತೆ ಬಹಳಷ್ಟು ಹದಗೆಟ್ಟು ಹೋಗಿದೆ, ಸರಿಪಡಿಸಿ ಎಂದು ನಾಮನಿರ್ದೇಶಿತ ಸದಸ್ಯೆ ಸುಮಾ ಜಗದೀಶ ಹೇಳಿದರು.
ತೆಲುಗರ ಓಣಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು ಎಂದು ಸದಸ್ಯ ಜಾವೇದ್ ಕೋರಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಬರುವ 7ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿ ಮತ್ತು ವಾರ್ಷಿಕ ನಿರ್ವಹಣೆ ಮಾಡುವ ಬಗ್ಗೆ ಸಭೆ ಅನುಮೋದನೆ ನೀಡಿತು.
ಪಟ್ಟಣದ ಐ.ಬಿ. ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್ ಸುತ್ತಮುತ್ತ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು ಸಹ ಸಭೆ ಅನುಮೋದನೆ ನೀಡಿತು.
ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಉದ್ದಾರ ಗಣೇಶ, ವಸಂತಪ್ಪ, ಹೇಮಣ್ಣ ಮೋರಗೇರಿ, ತಾರ ಹನುಮಂತಪ್ಪ, ಶೋಭಾ, ಗೊಂಗಡಿ ನಾಗರಾಜ, ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಪುರಸಭಾ ಅಧ್ಯಕ್ಷೆ ಎಂ. ಫಾತೀಮಾಬಿ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷ ಎಚ್. ಕೊಟ್ರೇಶ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ, ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಇಂಜಿನಿಯರ್ ಸಿದ್ದೇಶ, ಆರೋಗ ನಿರೀಕ್ಷಕ ಮಂಜುನಾಥ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.