ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯ ಪ್ರತಿಭಾವಂತ ಯುವಕರಲ್ಲಿ ಒಬ್ಬರಾದ ಅರಬಿಂದ್ ಆದಿತ್ಯ ಅವರು ರಾಜ್ಯ ಮಟ್ಟದಲ್ಲಿ ಟೈಕ್ವಾಂಡೋ ಸ್ಪರ್ಧೆಯಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಿ ಹಾಸನದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ನಡೆದ ರಾಜ್ಯ ಮಟ್ಟದ ಟೈಕ್ವಾಂಡೋ ಕರಾಟೆ ಸ್ಪರ್ಧೆಯಲ್ಲಿ, ೧೭ ವರ್ಷ ವಯೋಮಿತಿಯ ೫೭ ಕೆ.ಜಿ. ವಿಭಾಗದಲ್ಲಿ ಅರಬಿಂದ್ ಆದಿತ್ಯ ಎರಡನೇ ಸ್ಥಾನಗಳಿಸಿ ಬೆಳ್ಳಿ ಪದಕ ಪಡೆದು ಪ್ರಮುಖ ಸ್ಥಾನ ಗಳಿಸಿದ್ದಾರೆ. ಅರಬಿಂದ್ ಅವರು ಹಾಸನದ ಪ್ರಸಿದ್ಧ ಅಮೆಚೂರ್ ಬಾಡಿ ಬಿಲ್ಡರ್ ಸಂಸ್ಥೆಯ ಕರಾಟೆ ಪಟು ಆಗಿದ್ದು, ಅವರಿಗೆ ಸಮರ್ಪಿತ ತರಬೇತಿದಾರರಾದ ಮಹದೇವರು ತರಬೇತಿ ನೀಡುತ್ತಿದ್ದಾರೆ. ಅವರ ಶಿಸ್ತಿನ ಅಭ್ಯಾಸ, ಶ್ರದ್ಧೆ ಮತ್ತು ಪರಿಶ್ರಮವೇ ಈ ಯಶಸ್ಸಿಗೆ ಕಾರಣವಾಗಿದೆ ಎಂದು ಗುರುಗಳು ತಿಳಿಸಿದ್ದಾರೆ. ಅರಬಿಂದ್ ಪ್ರಸ್ತುತ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕ್ರೀಡೆ ಹಾಗೂ ಅಧ್ಯಯನದಲ್ಲಿ ಸಮತೋಲನ ಕಾಪಾಡಿಕೊಂಡು ಮುಂದುವರಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.ಅರಬಿಂದ್ ಅವರ ಸಾಧನೆಗೆ ಅಮೆಚೂರ್ ಬಾಡಿ ಬಿಲ್ಡರ್ ಸಂಸ್ಥೆಯ ಅಧ್ಯಕ್ಷ ಶರತ್ಚಂದ್ರ, ಸದಸ್ಯರು ಹಾಗೂ ಪೂಷಕರು ಅಭಿನಂದನೆ ಸಲ್ಲಿಸಿದ್ದಾರೆ. ಅವರ ಯಶಸ್ಸು ಹಾಸನದ ಯುವಕರಿಗೆ ಪ್ರೇರಣೆ ನೀಡುವಂತಿದೆ ಎಂದು ಜಿಮ್ ತರಬೇತಿದಾರ ನಿರಂಜನ್ ರಾಜ್ ಪ್ರಶಂಸೆ ವ್ಯಕ್ತಪಡಿಸಿದರು. ಯುವ ಪಟು ಅರಬಿಂದ್ ಆದಿತ್ಯ ಅವರ ಸಾಧನೆ ಹಾಸನದ ಕ್ರೀಡಾ ಕ್ಷೇತ್ರದಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಮುಂದಿನ ಹಾದಿಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ವಿಶ್ವಾಸವನ್ನು ಎಲ್ಲರೂ ವ್ಯಕ್ತಪಡಿಸಿದ್ದಾರೆ.