ಅರ್ಜುನಪುರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಅಸ್ತಿತ್ವಕ್ಕೆ: ಎನ್.ಆರ್.ಪ್ರಸನ್ನ

KannadaprabhaNewsNetwork | Published : Nov 7, 2024 11:46 PM

ಕ್ರೀಡಾ ಚಟುವಟಿಕೆ ಮಾತ್ರವಲ್ಲದೆ ಶೈಕ್ಷಣಿಕ, ಆರೋಗ್ಯ, ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಕಾರ್ಯಗಳಿಗೆ ಒತ್ತು ನೀಡುವುದು, ಮದ್ದೂರು ತಾಲೂಕಿನ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಕ್ರೀಡೆ ಕುರಿತು ಉಚಿತವಾಗಿ ತರಬೇತಿ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ನಶಿಸುತ್ತಿರುವ ಗ್ರಾಮೀಣ ಕ್ರೀಡೆ, ಜಾನಪದ ಶೈಲಿ ಕಾರ್ಯಕ್ರಮವನ್ನು ಪುನಶ್ಚೇತನಗೊಳಿಸಲು ಅರ್ಜುನ ಪುರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ತರಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್.ಆರ್.ಪ್ರಸನ್ನ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘದ ಚಟುವಟಿಕೆ ಮತ್ತು ಧ್ಯೇಯೋದ್ದೇಶಗಳ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿ, ನ. 9ರಂದು ಜನಪ್ರತಿನಿಧಿಗಳಿಂದ ಪಟ್ಟಣದ ಕ್ರೀಡಾಂಗಣದಲ್ಲಿ ಹಿರಿಯ ಕ್ರೀಡಾಪಟುಗಳನ್ನು ಗುರುತಿಸಲು ಹಾಗೂ ಯುವ ಕ್ರೀಡಾಪಟುಗಳಿಗೆ ಉತ್ತೇಜಿಸಲು 200 ಸದಸ್ಯರ ಒಳಗೊಂಡ ಸಂಘವನ್ನು ಅಸ್ತಿತ್ವಕ್ಕೆ ತಂದು ಉದ್ಘಾಟಿಸಲಾಗುತ್ತಿದೆ ಎಂದರು.

ಕ್ರೀಡಾ ಚಟುವಟಿಕೆ ಮಾತ್ರವಲ್ಲದೆ ಶೈಕ್ಷಣಿಕ, ಆರೋಗ್ಯ, ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಕಾರ್ಯಗಳಿಗೆ ಒತ್ತು ನೀಡುವುದು, ತಾಲೂಕಿನ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಕ್ರೀಡೆ ಕುರಿತು ಉಚಿತವಾಗಿ ತರಬೇತಿ ನೀಡಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಶೈಕ್ಷಣಿಕ ವಿಚಾರವಾಗಿ ನೀಟ್, ಕೆಎಎಸ್, ಐಪಿಎಸ್, ಐಎಎಸ್ ಕುರಿತು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಶುಲ್ಕ ರಹಿತವಾಗಿ ತರಬೇತಿ ನೀಡಲಾಗುವುದು ಎಂದರು.

ಕ್ರೀಡಾ ವಿಚಾರವಾಗಿ ತಾಲೂಕಿನಿಂದ ಆಯ್ಕೆಗೊಂಡ ಕ್ರೀಡಾಪಟುಗಳಿಗೆ ಜಿಲ್ಲಾ ಮತ್ತು ರಾಜ್ಯಮಟ್ಟದ ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸಲು ಅನುಕೂಲ ವಾಗುವಂತೆ ಅಗತ್ಯ ತರಬೇತಿ, ಮುಂದಿನ ಹಂತಕ್ಕೆ ಹೋಗಲು ಸಂಘ ಪ್ರೋತ್ಸಾಹ ನೀಡಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಆರ್.ವಿ.ಅವಿನಂದನ್, ಕಾರ್ಯದರ್ಶಿ ವಿ.ಎನ್.ಶಿವಶಂಕರ್, ಖಜಾಂಚಿ ಎಸ್.ಶ್ರೀನಿವಾಸ್, ಎಂ.ಎನ್.ದೀಪಕ್, ನಿರ್ದೇಶಕ ಎಂ.ವಿಶ್ವನಾಥ್ ಇದ್ದರು.

ಇಂದು ಹಲವೆಡೆ ವಿದ್ಯುತ್ ವ್ಯತ್ಯಯ

ಮಳವಳ್ಳಿ: ತಾಲೂಕಿನ ವಡಕೆಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ 3ನೇ ತ್ರೈಮಾಸಿಕ ನಿರ್ವಹಣಾ ಕಾರ್ಯವಿರುವುದರಿಂದ ನ.8 ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 6 ಗಂಟೆವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ವಿತರಣಾ ಕೇಂದ್ರ ವ್ಯಾಪ್ತಿಯ ಅವ್ವೇರಹಳ್ಳಿ, ಸುಜ್ಜಲೂರು, ಎನ್.ಜಿ.ದೊಡ್ಡಿ, ವಡಕೆಪುರ, ಚನ್ನಪಿಳ್ಳೆಕೊಪ್ಪಲು, ಹಣಕೊಳ, ಉಪ್ಪಲಗೇರಿಕೊಪ್ಪಲು, ಗಣಗನೂರು, ರಾವಣಿ, ರಾಗಿಬೊಮ್ಮನಹಳ್ಳಿ, ಹಂಗ್ರಾಪುರ, ಕ್ಯಾತನಹಳ್ಳಿ, ಕುಂದೂರು, ಯಮದೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ ಎಂದು ಸೆಸ್ಕ್ ಗ್ರಾಮಾಂತರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಸಿ.ನಿತ್ತೇಶ್ ತಿಳಿಸಿದ್ದಾರೆ.