ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿಗಳ ಕಾರ್ಯಾಚರಣೆ
ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಯ ಅಳೇಹಳ್ಳಿ ಗ್ರಾಮದ 8 ನೇ ಮೈಲಿಕಲ್ ಸಮೀಪದ ಕೂಸ್ಗಲ್ ಮೀಸಲು ಅರಣ್ಯದ ಸಾಗುವಾನಿ ನೆಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿದು ಸಾಗಿಸಲು ಪ್ರಯತ್ನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಗುರುವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಗಳನ್ನು ಮೇಲ್ಪಾಲಿನ ಮಿಥುನ್, ಕೃಷ್ಣ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಸ್ಗಲ್ ಮೀಸಲು ಅರಣ್ಯ ವ್ಯಾಪ್ತಿಯ ಸಾಗುವಾನಿ ನೆಡು ತೋಪಿಗೆ ಬಂದು ನೋಡಿದಾಗ ಅಕ್ರವಾಗಿ ಸಾಗುವಾನಿ ಮರ ಕಡಿದು ಸಾಗಾಣೆ ಮಾಡಲು ಸಿದ್ಧತೆ ಮಾಡಿರುವುದು ಕಂಡು ಬಂದಿದೆ. ತಕ್ಷಣ ಸ್ಥಳದಲ್ಲಿದ್ದ ಸಾಗುವಾನಿ ಮರದ ತುಂಡುಗಳು, ಸಾಗಾಣಿಕೆ ಮಾಡಲು ತಂದಿದ್ದ ಮಹೇಂದ್ರ ವಾಹನವನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶ ಪಡಿಸಿಕೊಂಡು ಸ್ಥಳದಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ತನಿಖೆ ಮಾಡಿದಾಗ ಸಾಗುವಾನಿ ಮರ ಕಡಿತಲೆ ಪ್ರಕರಣದಲ್ಲಿ ಇತರ 6 ಜನ ಆರೋಪಿಗಳು ಇದ್ದಾರೆ ಎಂಬುದು ತಿಳಿದುಬಂದಿದೆ. ಇತರ 6 ಜನ ಆರೋಪಿಗಳಾದ ಕೌಸಿಕ್, ಅಕ್ಷಯ, ಅಶ್ವತ್, ರಿಷಿಕಾಂತ, ನವೀನ್, ಆಷಿಕ್ ಎಂಬ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಬಂಧನಕ್ಕಾಗಿ ಅರಣ್ಯ ಇಲಾಖೆಯವರು ಬಲೆ ಬೀಸಿದ್ದಾರೆ.