ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಮೊಹರಂ ಹಬ್ಬದ ಅಂಗವಾಗಿ ದೋಟಿಹಾಳ ಗ್ರಾಮದ ಕೊಳ್ಳಿಯವರ ಮಸೀದಿ ಎದುರು ಹೆಜ್ಜೆ ಮೇಳ ಸ್ಪರ್ಧೆ ಆಯೋಜಿಸಲಾಗಿತ್ತು. ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ 14 ಹೆಜ್ಜೆ ತಂಡಗಳು ಭಾಗವಹಿಸಿ ಜನಪದ ಕಲೆಯ ವೈಭವ ಅನಾವರಣಗೊಳಿಸಿದವು. ಇದು ಕೇವಲ ಸ್ಪರ್ಧೆಯಾಗಿರದೆ, ಸಂಸ್ಕೃತಿ ಪರಂಪರೆಯ ಸಂರಕ್ಷಣೆ ವೇದಿಕೆಯಾಗಿ ರೂಪುಗೊಂಡಿತ್ತು.
ಹಲಗಿ ನಾದಕ್ಕೆ ಲಯಬದ್ಧ ಹೆಜ್ಜೆ : ಬುಧವಾರ ರಾತ್ರಿ ಆರಂಭವಾದ ಹೆಜ್ಜೆ ಮೇಳ ಸ್ಪರ್ಧೆ ಗುರುವಾರ ಬೆಳಗಿನ ಜಾವದವರೆಗೂ ನಡೆಯಿತು. ಹಲಗಿ, ಡೊಳ್ಳು, ತಮಟೆ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳ ನಾದಕ್ಕೆ ಕಲಾವಿದರು ಒಂದೇ ಲಯದಲ್ಲಿ ಹೆಜ್ಜೆ ಹಾಕಿದರು. ಬಣ್ಣಬಣ್ಣದ ಸಾಂಪ್ರದಾಯಿಕ ಉಡುಪು ಧರಿಸಿದ್ದ ತಂಡಗಳು ವಿಶಿಷ್ಟ ಹೆಜ್ಜೆ ಪ್ರದರ್ಶಿಸಿ ನೆರೆದಿದ್ದ ಸಾವಿರಾರು ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು.ಈ ಬಾರಿ ಹೆಜ್ಜೆ ಮೇಳ ಸ್ಪರ್ಧೆ ರೂಪದಲ್ಲಿ ಆಯೋಜಿಸಿದ್ದರಿಂದ ಕಲಾವಿದರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂತು. ಪ್ರತಿಯೊಂದು ತಂಡ ತನ್ನದೇ ಆದ ಶೈಲಿ,ಲಯ, ಶಿಸ್ತು ಮತ್ತು ವೇಷಭೂಷಣದೊಂದಿಗೆ ಗಮನ ಸೆಳೆಯಿತು.
ಸ್ಪರ್ಧೆಗೆ ಚಾಲನೆ: ಹೆಜ್ಜೆ ಮೇಳ ಸ್ಪರ್ಧೆಗೆ ಹಲಗೆ ಬಾರಿಸುವ ಮೂಲಕ ಚಾಲನೆ ನೀಡಿದ ದಲಾಲಿ ವರ್ತಕ ಲಾಡಸಾಬ್ ಕೊಳ್ಳಿ ಮಾತನಾಡಿ, ಇಂದಿನ ಆಧುನಿಕತೆ ಪರಿಣಾಮವಾಗಿ ಮೊಬೈಲ್,ಟಿವಿ, ಸಾಮಾಜಿಕ ಜಾಲತಾಣ ಪ್ರಭಾವದಿಂದ ಗ್ರಾಮೀಣ ಜನಪದ ಕಲೆಗಳಲ್ಲಿ ಯುವಕರ ಆಸಕ್ತಿ ಕಡಿಮೆಯಾಗುತ್ತಿದ್ದು, ಹೆಜ್ಜೆ ಮೇಳದಂತಹ ಕಲೆಗಳು ನಶಿಸುವ ಹಂತ ತಲುಪಿದ್ದು, ಈ ಕಲೆ ಜೀವಂತವಾಗಿಡುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಮನಗೌಡ ಬಿಜ್ಜಲ, ರಾಜಶೇಖರ ಹೊಕ್ರಾಣಿ, ಲಾಡಸಾಬ್ ಗಿರಣಿ, ವಾಲ್ಮೀಕಪ್ಪ ಯಕ್ಕರನಾಳ, ಕರಿಯಪ್ಪ ಪೂಜಾರ, ನಬಿಸಾಬ್ ಬಿಜಕತ್ತಿ, ಹನೀಫ್ ಬಿಳೇಕುದರಿ, ಹಿದಾಯತ್ ನೀಲಗಾರ, ಸದ್ದಾಂ ಕೊಣ್ಣೂರು, ನಬಿಸಾಬ್ ಇಲಕಲ್, ಸುರೇಶ ಹುನಗುಂದ, ರಾಜೇಸಾಬ ಯಲಬುರ್ಗಿ ಸೇರಿದಂತೆ ಅನೇಕ ಗಣ್ಯರು ಇದ್ದರು. ಸಾವಿರಾರು ಜನ ಪ್ರೇಕ್ಷಕರು ಇದ್ದರು.