ಶಾಂತಲ ಕೂಚಿಪೂಡಿ ನೃತ್ಯ ಮತ್ತು ಸಂಗೀತ ಶಾಲೆಯಿಂದ ಕಲ್ಪತರು ಸಾಂಸ್ಕೃತಿಕ ರಂಗ ಸಂಭ್ರಮ
ಕಲ್ಪತರು ನಾಡು ತಿಪಟೂರು ಸಾಂಸ್ಕೃತಿಕ ಕಲೆಗಳ ಬೀಡಾಗಿದ್ದು, ಪೌರಾಣಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಹೆಸರು ಪಡೆದಿದ್ದು, ಅಭಿಮಾನಿಗಳು ಕಲೆಗೆ ಇನ್ನೂ ಹೆಚ್ಚಿನ ಸಹಕಾರವನ್ನು ನಿರಂತರವಾಗಿ ನೀಡಬೇಕೆಂದು ಬೆಂಗಳೂರು ಎಸ್ಎಸ್ಜೆ ಸಂಸ್ಕೃತಿ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ಶಿವಾನಂದಸ್ವಾಮಿ ತಿಳಿಸಿದರು.
ನಗರದ ಕೆ.ಆರ್. ಬಡವಾಣೆಯಲ್ಲಿರುವ ಶಾಂತಲ ಕೂಚಿಪೂಡಿ ನೃತ್ಯ ಮತ್ತು ಸಂಗೀತ ಶಾಲೆ ವತಿಯಿಂದ ನಡೆದ ಕಲ್ಪತರು ಸಾಂಸ್ಕೃತಿಕ ರಂಗ ಸಂಭ್ರಮ ಕಾರ್ಯಕ್ರಮವನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಇಪ್ಪತ್ತು ವರ್ಷಗಳಿಂದ ಶಾಂತಲ ಕೂಚಿಪೂಡಿ ನೃತ್ಯ ಮತ್ತು ಸಂಗೀತ ಶಾಲೆ ರಾಜ್ಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯತೆ ಪಡೆದಿದೆ. ಇಲ್ಲಿನ ಪುಟಾಣಿಗಳ ನೃತ್ಯ ನೋಡಲು ಎರಡು ಕಣ್ಣುಗಳು ಸಾಲದು. ಕಲೆಗಳು ಮತ್ತು ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರವೂ ಅಗತ್ಯವಿದೆ ಎಂದರು.ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾರ್ಥವಳ್ಳಿ ಶಿವಕುಮಾರ್ ಮಾತನಾಡಿ, ಶಾಂತಲ ಕೂಚಿಪೂಡಿ ನೃತ್ಯ ಮತ್ತು ಸಂಗೀತ ಶಾಲೆ ಕಲಾವಿದರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ದೇಶ, ವಿದೇಶಗಳಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಜೊತೆಗೆ ಕಲಾವಿದರನ್ನು ಬೆಳಕಿಗೆ ತರಲು ಕಾರಣೀಕರ್ತರಾಗಿದ್ದಾರೆ. ಕಲೆಗೆ ತಾಯಿ ಬೇರು ಪರಶಿವ ನಟರಾಜನ ಆಶೀರ್ವಾದದಿಂದ ಈ ಸಂಗೀತ ಶಾಲೆ ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
-----------
ರಂಗ ಸಂಭ್ರಮ ಕಾರ್ಯಕ್ರಮವನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿದ ಬೆಂಗಳೂರು ಎಸ್ಎಸ್ಜೆ ಸಂಸ್ಕೃತಿ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ಶಿವಾನಂದಸ್ವಾಮಿ.