ಕಾರವಾರ: ಕೇಂದ್ರ ಸರ್ಕಾರದ ಅನುಮೋದನೆ ಹಾಗೂ ಪ್ರೋತ್ಸಾಹಧನವಿಲ್ಲದ 9 ಸೇವೆಗಳನ್ನು ಮತ್ತು ಮೊಬೈಲ್ ಆ್ಯಪ್ ಆಧಾರಿತ ಕೆಲಸಗಳನ್ನು ಇನ್ನುಮುಂದೆ ಮಾಡದಿರಲು ಉತ್ತರ ಕನ್ನಡ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಎಐಯುಟಿಯುಸಿ ಸಂಯೋಜಿತ ''ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ''ದ ಉತ್ತರ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಲಾಯಿತು.
ಪ್ರೋತ್ಸಾಹಧನವಿಲ್ಲದ ಕೆಲಸಗಳನ್ನು ಆಶಾಗಳಿಂದ ಮಾಡಿಸಬಾರದು ಎಂದು ಹೊಸ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಪಾಧ್ಯಕ್ಷೆ ಕವಿತಾ ಗಾವಡ, ಸರ್ಕಾರ ಇತರ ಇಲಾಖೆಯ ಸಿಬ್ಬಂದಿಗೆ ನೀಡಿದಂತೆ ನಮಗೆ ಯಾವುದೇ ಮೊಬೈಲ್ ನೀಡಿಲ್ಲ. ನಾವು ಬಳಸುತ್ತಿರುವ ''ಬೇಸಿಕ್'' ಮೊಬೈಲ್ಗಳಲ್ಲಿ ಇಲಾಖೆಯ ಭಾರೀ ಸಾಮರ್ಥ್ಯದ ಸಮಸ್ತ ಆ್ಯಪ್ಗಳನ್ನು ಒತ್ತಾಯಪೂರ್ವಕವಾಗಿ ಹಾಕಿದ್ದರಿಂದ ನಮ್ಮ ಫೋನ್ಗಳು ಹ್ಯಾಂಗ್ ಆಗಿ ಕೆಟ್ಟುಹೋಗುತ್ತಿವೆ. ಹೀಗಾಗಿ ಮೊಬೈಲ್ ಆಧಾರಿತ ಕೆಲಸಗಳನ್ನೂ ಮಾಡದಿರಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.ವೇತನ ಕೂಡ ಸರಿಯಾಗಿ ಬಾರದೆ ಆಶಾಗಳ ಬಡ ಕುಟುಂಬಗಳು ಸಂಕಷ್ಟದಲ್ಲಿವೆ. ನಮ್ಮ ನ್ಯಾಯಯುತ ಹೋರಾಟವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.