ಕನ್ನಡಪ್ರಭ ವಾರ್ತೆ ವಿಜಯಪುರ

ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಮೈಸೂರು ವಿಭಾಗದದಿಂದ ಆಗಮಿಸಿರುವ 500 ಎನ್‌ಸಿಸಿ ಕೆಡೆಟ್‌ಗಳು (ಬಾಲಕರು ಮತ್ತು ಬಾಲಕಿಯರು) ಜುಲೈ 17ರಿಂದ ಒಂದು ತಿಂಗಳ ಕಾಲ ನಗರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಥಲ್‌ ಸೈನಿಕ್‌ ಆಯ್ಕೆ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ದೆಹಲಿಯಲ್ಲಿ ನಡೆಯಲಿರುವ ಆಲ್‌ ಇಂಡಿಯಾ ಥಲ್‌ ಸೇನಾ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ-ಗೋವಾ ಡೈರಕ್ಟರೇಟ್‌ನಿಂದ ಪ್ರತಿನಿಧಿಸುವ ಕೆಡಿಟ್‌ಗಳ ಆಯ್ಕೆ ಶಿಬಿರ ಇದಾಗಿದೆ.

ಲೆಫ್ಟಿನಂಟ್‌ ಕರ್ನಲ್‌ ಜಗದೀಶ ನಂದಿಹಾಳ ಮಾತನಾಡಿ, ಥಲ್‌ ಸೈನಿಕ್‌ ಕ್ಯಾಂಪ್‌ (ಟಿಎಸ್‌ಸಿ) ಎನ್‌ಸಿಸಿಯ ಅತ್ಯಂತ ಪ್ರತಿಷ್ಠಿತ ಮತ್ತು ಕಠಿಣ ಶಿಬಿರವಾಗಿದ್ದು, ಇದರಲ್ಲಿ ಕೆಡೆಟ್‌ಗಳಿಗೆ ಫೈರಿಂಗ್, ಸ್ನ್ಯಾಪ್ ಶೂಟಿಂಗ್, ಗ್ರೂಪಿಂಗ್ ಮತ್ತು ಅಪ್ಲಿಕೇಶನ್ ಶೂಟಿಂಗ್, ಕಠಿಣವಾದ ದೈಹಿಕ ಅಡೆತಡೆಗಳನ್ನು ನಿಗದಿತ ಸಮಯದಲ್ಲಿ ದಾಟುವುದು, ಭೂಪಟವನ್ನು ಬಳಸಿ ನಿರ್ದಿಷ್ಟ ಸ್ಥಳಗಳನ್ನು ಪತ್ತೆಹಚ್ಚುವುದು, ಯುದ್ಧ ತಂತ್ರಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ಕೆಡೆಟ್‌ಗಳಿಗೆ ಕಲಿಸಿಕೊಡಲಾಗುವುದು. ಥಲ್‌ ಸೈನಿಕ್‌ ಕ್ಯಾಂಪ್‌ನ ಕೊನೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳ ದೈಹಿಕ ಸಾಮರ್ಥ್ಯ, ಶಿಸ್ತು ಮತ್ತು ಯುದ್ಧ ಕೌಶನ್ಯ ಪರೀಕ್ಷಿಸಿ, ಅತ್ಯುತ್ತಮ ಕೆಡಿಟ್‌ಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಕರ್ನಾಟಕ ಎನ್‌ಸಿಸಿ ಬೆಟಾಲಿಯನ್-36 ವಿಜಯಪುರ ಸಹಾಯಕ ಎನ್‌ಸಿಸಿ ಅಧಿಕಾರಿ ಲೆಫ್ಟಿನಂಟ್ ಡಾ.ರಾಮಚಂದ್ರ ನಾಯ್ಕ ಮಾತನಾಡಿ, ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ 12 ದಿನಗಳ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ಸೇರಿ ದೇಶದ ಎಲ್ಲಾ 17 ಎನ್‌ಸಿಸಿ ನಿರ್ದೇಶನಾಲಯಗಳಿಂದ ಆಯ್ಕೆಯಾದ ಅತ್ಯುತ್ತಮ ಕೆಡೆಟ್‌ಗಳು ಭಾಗವಹಿಸಿ, ತಮ್ಮ ಮಿಲಿಟರಿ ಕೌಶಲ್ಯಗಳನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.


ಕರ್ನಾಟಕ ಎನ್‌ಸಿಸಿ ಬೆಟಾಲಿಯನ್-36 ವಿಜಯಪುರ ಕಮಾಂಡಿಂಗ್ ಆಫೀಸರ್‌ ಕರ್ನಲ್ ಬಿ.ಕೆ.ಕೆ. ವಂಶಿ ಮಾತನಾಡಿ, ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಥಲ್‌ ಸೇನಾ ಕ್ಯಾಂಪ್‌ಗೆ ಆಯ್ಕೆ ಮಾಡಲು ಯುನಿಟ್ ಮಟ್ಟದ ಆಯ್ಕೆ, ಇಂಟರ್‌-ಗ್ರೂಪ್ ಸ್ಪರ್ಧೆಗಳು, ಮೂರು ಹಂತದ ಪೂರ್ವ-ಥಲ್‌ ಸೇನಾ ಶಿಬಿರಗಳು ನಡೆಯಲಿವೆ. ರಾಷ್ಟ್ರಮಟ್ಟದಲ್ಲಿ ವಿಜೇತವಾಗುವ ನಿರ್ದೇಶನಾಲಯಕ್ಕೆ ಎನ್‌ಸಿಸಿ ಮಹಾನಿರ್ದೇಶಕರು ಪ್ರತಿಷ್ಠಿತ ಕಪ್‌ ಅನ್ನು ಪ್ರದಾನ ಮಾಡಲಿದ್ದಾರೆ. ಕಳೆದ ವರ್ಷ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ಕಪ್‌ ಪಡೆದುಕೊಂಡಿತ್ತು ಎಂದು ತಿಳಿಸಿದರು.