ವೇತನ ಹೆಚ್ಚಳಕ್ಕಾಗಿ ಆಶಾ ಕಾರ್ಯಕರ್ತರ ಪ್ರತಿಭಟನೆ

KannadaprabhaNewsNetwork | Published : Dec 31, 2024 1:01 AM

ಸಾರಾಂಶ

60 ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್‍ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿರುವಂತೆ 3 ಲಕ್ಷ ರು. ಗೆ ಹೆಚ್ಚಿಸುವುದು. ತೀವ್ರ ಅನಾರೋಗ್ಯ, ಚಿಕಿತ್ಸೆ ಅವಧಿಯಲ್ಲಿ ಕನಿಷ್ಠ 3 ತಿಂಗಳುಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ರೊಟೀನ್ ಚಟುವಟಿಕೆಗಳಿಗೆ ನಿಗದಿತ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.

ವೇತನ ಹೆಚ್ಚಳ, ಗೌರವ ಧನ ನಿಗದಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ ।

ಕನ್ನಡಪ್ರಭ ವಾರ್ತೆ ಮಂಡ್ಯ

ವೇತನ ಹೆಚ್ಚಳ, ಗೌರವ ಧನ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್‍ಯಕರ್ತೆಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಸೇರಿದ ಕಾರ್‍ಯಕರ್ತೆಯರು, ಬೆಂಗಳೂರು- ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಶಾ ಕಾರ್ಯಕರ್ತೆಯರಿಗೆ ಈಗಿರುವ ಗೌರವ ಧನ ಮತ್ತು ಪ್ರೋತ್ಸಾಹ ಧನ ಸೇರಿಸಿ ಒಟ್ಟು 12 ಸಾವಿರ ರು. ಮತ್ತು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ 3 ಸಾವಿರ ರು. ಹೆಚ್ಚಳ ಸೇರಿ ಒಟ್ಟು 15 ಸಾವಿರ ರು. ಮಾಸಿಕ ಗೌರವ ಧನ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ನಗರ ಆಶಾ ಕಾರ್‍ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು, ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ 2 ಸಾವಿರ ರು. ಗೌರವಧನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಸ್ಮಾರ್ಟ್ ಫೋನ್ ಬಳಕೆಗೆ ಸಂಬಂಧಿಸಿದಂತೆ ಇಲಾಖೆಯ ಹೊಸ ಆದೇಶವು ಆಶಾ ಕಾರ್ಯಕರ್ತೆಯರಿಗೆ ಅಲ್ಲದ ಕೆಲಸವನ್ನು ಹೇರುವ ಉದ್ದೇಶ ಹೊಂದಿದೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹ ಧನ ನಿಗದಿ ಮಾಡಿ ಯಾರಿಗೆ ಮೊಬೈಲ್ ಕೆಲಸ ಮಾಡಲು ಆಗುವುದಿಲ್ಲವೋ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.

60 ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್‍ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿರುವಂತೆ 3 ಲಕ್ಷ ರು. ಗೆ ಹೆಚ್ಚಿಸುವುದು. ತೀವ್ರ ಅನಾರೋಗ್ಯ, ಚಿಕಿತ್ಸೆ ಅವಧಿಯಲ್ಲಿ ಕನಿಷ್ಠ 3 ತಿಂಗಳುಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ರೊಟೀನ್ ಚಟುವಟಿಕೆಗಳಿಗೆ ನಿಗದಿತ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.

ಆರ್‌ಸಿಎಚ್ ಪೋರ್‍ಟಲ್‌ನಲ್ಲಿ ಸಂಪೂರ್ಣ ಮಾಹಿತಿ ದಾಖಲಿಸುತ್ತಿಲ್ಲ. ಇದರಿಂದ ದುಡಿದ ಹಣ ಕಾರ್‍ಯಕರ್ತೆಯರಿಗೆ ಧಕ್ಕುತ್ತಿಲ್ಲ. ಆದ್ದರಿಂದ ದುಡಿದಷ್ಟು ಹಣ ಆಶಾ ಕಾರ್‍ಯಕರ್ತೆಯರಿಗೆ ದೊರಕುವಂತೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಪಿಎಸ್ ಫೋಟೋ ಕಿರುಕುಳ ನಿಲ್ಲಿಸಿ, ಇಲಾಖೆ ನೀಡಿರುವ ಬಿಎಸ್‌ಎನ್‌ಎಲ್ ಸಿಮ್‌ಗಳ ಕರೆನ್ಸಿ ಖಾಲಿಯಾಗಿ 3 ತಿಂಗಳಾಯಿತು. ಕೂಡಲೇ ರೀಚಾರ್ಜ್ ಮಾಡಿಸಬೇಕು, ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ರಾಂತಿ ಕೊಠಡಿ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷರಾದ ಪುಷ್ಪಾವತಿ ಎಂ.ಬಿ., ಕಾರ್‍ಯದರ್ಶಿ ಜ್ಯೋತಿ ಕೆ.ವಿ. ಮುಖಂಡರಾದ ಪಲ್ಲವಿ, ಲಕ್ಷ್ಮೀ, ಮಂಜುಳಾ, ಜಾನ್ಸಿ, ರಾಜಮಣಿ, ರಾಣಿ, ಜ್ಯೋತಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Share this article