ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಶ್ರದ್ಧಾಭಕ್ತಿಯಿಂದ ಆಷಾಢ ಮಾಸದಲ್ಲಿ ಆರಂಭಿಸಿರುವ ಜಾತ್ರಾ ಮಹೋತ್ಸವದ ಧಾರ್ಮಿಕ ಕೈಂಕರ್ಯಗಳು ಜುಲೈ 29ರಿಂದ ಆರಂಭವಾಗಿ ಆಗಸ್ಟ್ 9ರವರೆಗೆ ನಡೆಯಲಿದೆ.
ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ವರ್ಷಕ್ಕೆರಡು ಸಲ ಮಾತ್ರ ಸ್ವಾಮಿಗೆ ಕಲ್ಯಾಣೋತ್ಸವ ಹಾಗೂ ಮಹಾಭಿಷೇಕ ನಡೆಯುವ ಸಂಪ್ರದಾಯವಿದ್ದು, ವೈರಮುಡಿ ಬ್ರಹ್ಮೋತ್ಸವ ಬಿಟ್ಟರೆ ಮೈಸೂರು ಮಹಾರಾಜ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದಂದು ಮಹಾಭಿಷೇಕ ಮತ್ತು ಕಲ್ಯಾಣೋತ್ಸವ ನಡೆಯುತ್ತದೆ.ಈ ವರ್ಷ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮನಕ್ಷತ್ರದ ಅಂಗವಾಗಿ ಆಷಾಢ ಮಾಸದ ಉತ್ತರಾಷಾಡ ದ್ವಿತೀಯೆಯಂದು ಜುಲೈ 31 ರಂದು ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ಹಾಗೂ ಸಂಜೆ ಕಲ್ಯಾಣೋತ್ಸವ ನಡೆಯಲಿದೆ. ಬೆಳಗ್ಗೆ ಗರುಡದ್ವಜಾರೋಹಣ ನಡೆಯಲಿದೆ.
ಕೃಷ್ಣರಾಜಮುಡಿ ಕಿರೀಟ ಆ.30 ರಿಂದ ಆಗಸ್ಟ್ 8ರವರೆಗೆ ವಿವಿಧಉತ್ಸವಗಳಲ್ಲಿ ಚೆಲುವನಾರಾಯಣನನ್ನು ಅಲಂಕರಿಸಲಿದೆ. ಆ. 8ರಂದು ಕಲ್ಯಾಣಿಯಲ್ಲಿ ನಡೆಯುವ ತೀರ್ಥಸ್ನಾನದೊಂದಿಗೆ ಬ್ರಹ್ಮೋತ್ಸವ ಸಂಪನ್ನವಾಗಲಿದೆ.
ಮಹಾರಾಜರ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವದ ವೇಳೆ ಉತ್ಸವ ಬೀದಿಗಳಿಗೆ ದೀಪಾಲಂಕಾರ ವ್ಯವಸ್ಥೆ ಮಾಡುವುದಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ ಮತ್ತು ಸದಸ್ಯ ವಕೀಲ ಕಾಡೇನಹಳ್ಳಿ ಸತೀಶ್ ಮಾಹಿತಿ ನೀಡಿದ್ದಾರೆ. ಜುಲೈ 29 ರಿಂದ ಆಗಸ್ಟ್ 9ರವರೆಗೆ ದೇವಾಲಯದ ರಾಜಗೋಪುರಕ್ಕೆ ದೀಪಾಲಂಕಾರ, ರಾಜಬೀದಿಗೆ ದೀಪಗಳ ತೋರಣ ಅಳವಡಿಸಲಾಗುತ್ತದೆ.
ಭಕ್ತರಿಗೂ ಸೇವೆಗೆ ಅವಕಾಶ:
ಕಲ್ಯಾಣೋತ್ಸವ ಮತ್ತು ಮಹಾಭಿಷೇಕದಂದು ಚೆಲುವನಾರಾಯಣಸ್ವಾಮಿ ಸನ್ನಿಧಿ ಆವರಣ ಕಲ್ಯಾಣೋತ್ಸವ ನಡೆಯುವ ಅಮ್ಮನವರ ಸನ್ನಿಧಿ ಪ್ರಾಂಗಣಕ್ಕೆ ಪುಷ್ಪಾಲಂಕಾರ ಸೇವೆ ಮಾಡಬಹುದು. ಬ್ರಹ್ಮೋತ್ಸವದಲ್ಲಿ ನಡೆಯುವ ವಾಹನೋತ್ಸವಗಳ ಸೇವೆ ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡಿ ಹಲವು ಸೇವೆಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ.