ಪುತ್ತೂರು: ಜಿಲ್ಲಾ ಕೇಂದ್ರದಲ್ಲಿ ಮಾತ್ರವೇ ಶ್ರಮಿಕ ವಸತಿ ಶಾಲೆಯನ್ನು ಮಂಜೂರುಗೊಳಿಸಲು ಅವಕಾಶವಿದ್ದು, ಆದರೆ ಪುತ್ತೂರಿನಲ್ಲಿ ಎಲ್ಲರ ಸಹಕಾರದೊಂದಿಗೆ ಶೀಘ್ರದಲ್ಲಿ ಜಾಗ ಮಂಜೂರುಗೊಳಿಸಿರುವುದರಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲಾ ಕೇಂದ್ರ ಬಿಟ್ಟು ತಾಲೂಕು ಕೇಂದ್ರಕ್ಕೆ ಶ್ರಮಿಕ ವಸತಿ ಶಾಲೆ ಮಂಜೂರಾಗಿದೆ. ರಾಜ್ಯದಲ್ಲಿ ತಾಲೂಕು ಕೇಂದ್ರಕ್ಕೆ ಮಂಜೂರಾಗಿರುವುದು ಪುತ್ತೂರಿಗೆ ಮಾತ್ರ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಬಡ ಕಾರ್ಮಿಕರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತು ಅವರೂ ಸಮಾಜದಲ್ಲಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಕಾರ್ಮಿಕರ ಶ್ರಮಿಕ ವಸತಿ ಶಾಲೆ ಮಂಜೂರುಗೊಳಿಸಲಾಗಿದೆ. ಈ ಶಾಲೆಯಲ್ಲಿ ಕಾರ್ಮಿಕರ ಗುರುತಿನ ಚೀಟಿ ಹೊಂದಿರುವ ಕಾರ್ಮಿಕರ ಮಕ್ಕಳಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶವಿದೆ. ಹೀಗಾಗಿ ಕಾರ್ಮಿಕರಾಗಿರುವವರು ಕಾರ್ಮಿಕರ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು. ಬಹುತೇಕವಾಗಿ 6- 12 ತರಗತಿ ತನಕದ ಶಾಲೆಗಳು ಗರಿಷ್ಠ 10 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮಾತ್ರ ಇರುತ್ತದೆ. ಆದರೆ ಶ್ರಮಿಕ ಶಾಲೆ 71 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿದೆ ಎಂದರು. ಬಜತ್ತೂರಿನ ವಸತಿ ನಿಲಯಕ್ಕೂ ಈಗಾಗಲೇ ಟೆಂಡರ್ ಪ್ರಕ್ರಿಯೆ ಆಗಿದೆ. ಜೊತೆಗೆ ರು.10 ಕೋಟಿಯ ಮುಂಡೂರಿನ ತಾಲೂಕು ಕ್ರೀಡಾಂಗಣ, ರು..85.50 ಕೋಟಿಯ ಆರ್ಟಿಓ ಟ್ರಾಕ್ಗಳಿಗೂ ಮುಂದಿನ ಎರಡು ತಿಂಗಳಲ್ಲಿ ಶಿಲಾನ್ಯಾಸ ನೆರವೇರಿಸಿ ಮುಂದಿನ ಎರಡು ವರ್ಷದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು.
ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಶಾಸಕರು ಈಗ ಕಾರ್ಮಿಕರ ಮಕ್ಕಳಿಗಾಗಿರುವ ಶ್ರಮಿಕ ಶಾಲೆ ಮಂಜೂರುಗೊಳಿಸುವ ಮೂಲಕ ಕಾರ್ಮಿಕರ ಮಕ್ಕಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಮಾತನಾಡಿ, ಶಾಸಕರ ಇಚ್ಚಾಶಕ್ತಿಯ ಫಲವಾಗಿ ಪುತ್ತೂರಿಗೆ ಶ್ರಮಿಕ ಶಾಲೆ ಮಂಜೂರುಗೊಂಡಿದೆ ಎಂದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ, ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ, ಪುತ್ತೂರಿನ ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ, ಕರ್ನಾಟಕ ರಾಜ್ಯ ಕಾರ್ಮಿಕ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿದ್ದಪ್ಪ, ಗುತ್ತಿಗೆದಾರ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
18 ತಿಂಗಳಲ್ಲಿ ಲೋಕಾರ್ಪಣೆ: ರು. 37.65 ಕೋಟಿ ಶ್ರಮಿಕ ಶಾಲೆಗೆ ಶಿಲಾನ್ಯಾಸಗೊಂಡಿದೆ. ಈ ಶಾಲಾ ಕಟ್ಟಡವು ಮುಂದಿನ 18 ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಚುನಾವಣೆಗೆ ಮೊದಲು ಮಕ್ಕಳು ದಾಖಲಾತಿ ನಡೆಯಲಿದೆ. ಶ್ರಮಿಕ ಶಾಲೆಯಲ್ಲಿ ಎಲ್ಲಾ ವಿಷಯವಾರು ಶಿಕ್ಷಕರಿರುತ್ತಾರೆ. ಎಲ್ಲಾ ಶಿಕ್ಷಕರು ವಸತಿಯಲ್ಲಿರಲಿದ್ದಾರೆ. ಬಾಲಕ-ಬಾಲಕಿಯ ವಸತಿ ನಿಲಯ, ಶಿಕ್ಷಕರ ವಸತಿ ನಿಲಯ ಸೇರಿದಂತೆ ಒಟ್ಟು ಎಳೂವರೆ ಎಕರೆಯಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣಗೊಳ್ಳಲಿದೆ.