ಅಶೋಕಪುರದ ಶ್ರೀ ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಯನ್ನು ಮಂಟಪದಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
50 ನೇ ವರ್ಷದ ಸಂಭ್ರಮದಲ್ಲಿರುವ ಗಣೇಶೋತ್ಸವ ಸಮಿತಿ ‘ಗಣಪತಿಯಿಂದ ಶತಮಹಿಷಿಯ ಸಂಹಾರ’ ಎಂಬ ಪೌರಾಣಿಕ ಹಿನ್ನೆಲೆಯ ಮಂಟಪವನ್ನು ಈ ಬಾರಿ ರಚಿಸಿತ್ತು. ಗಣೇಶ ಸೇರಿದಂತೆ ದೇವಾನುದೇವತೆ, ಅಸುರರ ಕಲಾಕೃತಿಗಳು ಮಂಟಪದ ಅಂದವನ್ನು ಹೆಚ್ಚಿಸಿದವು. ರಂಗುರಂಗಿನ ಕಾಗದದ ಸ್ಫೋಟಕಗಳು, ಚಿಮ್ಮುವ ಬೆಂಕಿ, ಪಟಾಕಿಗಳು ಮೈನವಿರೇಳಿಸುವಂತೆ ಮಾಡಿದವು.
ಗಜಾನನ-ಶತಮಹಿಷಿಯ ನಡುವಿನ ಯುದ್ಧವನ್ನು ಮನಮೋಹಕವಾಗಿ ಪ್ರಸ್ತುತಪಡಿಸಲಾಯಿತು.
ಅಶೋಕಪುರದಿಂದ ಹೊರಟ ಮಂಟಪ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಇಂದಿರಾ ಗಾಂಧಿ ವೃತ್ತದಲ್ಲಿ ನೀಡಿದ ಪ್ರದರ್ಶನವನ್ನು ಜನರು ಕಣ್ತುಂಬಿಕೊಂಡರು.
ಅದ್ದೂರಿಯಾಗಿ ನಡೆದ ಗಣೇಶ ವಿಸರ್ಜನೆ ಶೋಭಾಯಾತ್ರೆಗೆ ನಗರ ಸೇರಿದಂತೆ ವಿವಿಧೆಡೆಗಳಿಂದ ಜನರು ಆಗಮಿಸಿ ಕಟ್ಟಡ, ರಸ್ತೆ ಬದಿಗಳಲ್ಲಿ ನಿಂತು ಮಂಟಪ ವೀಕ್ಷಿಸಿದರು. ಜೊತೆಗೆ ಡಿಜೆ ಹಾಗೂ ವಾಲಗಕ್ಕೆ ಕುಣಿದು ಕುಪ್ಪಳಿಸಿದರು. ಓಂಕಾರೇಶ್ವರ ದೇವಾಲಯ ಸಮೀಪದ ಗೌರಿಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.
ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮುಂಜಾಗ್ರತ ಕ್ರಮವಾಗಿ ನಗರ ಸೇರಿದಂತೆ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.