ಕನ್ನಡಪ್ರಭ ವಾರ್ತೆ ಉಡುಪಿ
ಈ ಬಾರಿಯ ಲೋಕಸಭಾ ಚುನಾವಣೆ ಬಿಜೆಪಿಗೆ ಸವಾಲೇ ಇಲ್ಲದ ಚುನಾವಣೆಯಾಗಿದೆ. ಆದರೆ ಸವಾಲು ಇಲ್ಲದ ಚುನಾವಣೆಯೇ ಅತ್ಯಂತ ಕಷ್ಟಕರವಾಗಿರುತ್ತದೆ ಎಂದು ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಹೇಳಿದ್ದಾರೆ.ಅವರು ಮಂಗಳವಾರ ಜಿಲ್ಲಾ ಬಿಜೆಪಿ ಕಾರ್ಯಕಾರಣಿಯಲ್ಲಿ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಮತದಾರರ ಎದುರು ತಲೆತಗ್ಗಿಸುವಂತಹ ಅನೇಕ ಘಟನೆಗಳು ನಡೆದಿದ್ದವು. ಆದ್ದರಿಂದ ಪಕ್ಷಕ್ಕೆ ಸೋಲುಂಟಾಯಿತು. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ತಲೆತಗ್ಗಿಸಬೇಕಾದ್ದಿಲ್ಲ, ನರೇಂದ್ರ ಮೋದಿ ಹೆಸರಿನಲ್ಲಿ ತಲೆ ಎತ್ತಿ ಮತ ಕೇಳಿ, ಇದಕ್ಕೆ ಯಾವುದೇ ಮುಜುಗರ ಬೇಕಾಗಿಲ್ಲ. ಮೋದಿ ಸರ್ಕಾರ ಅಂತಹ ಸಾಧನೆ ಮಾಡಿದೆ ಎಂದವರು ಹೇಳಿದರು.
ಪಕ್ಷದ ನಾಯಕರ ಆವೇಷ ಭರಿತ ಭಾಷಣದಿಂದ ಮತಗಳು ಬರುತ್ತವೆ ಎಂಬ ಭ್ರಮೆ ಬೇಡ, ಪಕ್ಷದ ಕಾರ್ಯಕರ್ತರು ಮನೆಮನೆಗೆ ಹೋಗಿ ಮತದಾರರೊಂದಿಗೆ ಸೌಜನ್ಯದಿಂದ ವರ್ತಿಸಿ, ಮೋದಿ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿ ಎಂದವರು ಸಲಹೆ ಮಾಡಿದರು.ಕಾರ್ಯಕಾರಣಿಯನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು, ಶಾಸಕರಾದ ಯಶಪಾಲ್ ಸುವರ್ಣ, ಕಿರಣ್ ಕೊಡ್ಗಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಮಹಿಳಾ ಕಾರ್ಯದರ್ಶಿ ಶಿಲ್ಪಾ ಜಿ.ಸುವರ್ಣ, ಉಡುಪಿ - ಚಿಕ್ಕಮಗಳೂರು ಉಸ್ತುವಾರಿ ಕುತ್ಯಾರು ನವೀನ್ ಶೆಟ್ಟಿ ವೇದಿಕೆಯಲ್ಲಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು. ಸದಾನಂದ ಉಪ್ಪಿನಕುದ್ರು ನಿಧನರಾದ ಪಕ್ಷದ ಹಿರಿಯರಿಗೆ ನುಡಿನಮನ ಸಲ್ಲಿಸಿದರು.ಮೋದಿ ಗೆಲ್ಲಬೇಕು, ಆದ್ರೆ ನಮ್ಮ ಎಂಪಿ ಸೋಲಬೇಕು...ಸಾಕಷ್ಟು ಕಾರ್ಯಕರ್ತರು ಬಿಜೆಪಿಗೆ ಬರುವುದಕ್ಕೆ ಅಡ್ವಾಣಿ, ವಾಜಪೇಯಿ ಕಾರಣ, ಆದರೆ ಸಾಕಷ್ಟು ಕಾರ್ಯಕರ್ತರು ಬಿಜೆಪಿ ಬಿಟ್ಟು ಹೋಗುವುದಕ್ಕೆ ಶಾಸಕರು, ಸಂಸದರು, ಸ್ಥಳೀಯ ನಾಯಕರು ಕಾರಣ. ಈಗಲೂ ಕಾರ್ಯಕರ್ತರು ಮೋದಿ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂಬ ಆಸೆಯಲ್ಲಿದ್ದಾರೆ, ಆದರೆ ತಮ್ಮ ಸಂಸದರನ್ನು ಸೋಲಿಸಿ ಬುದ್ಧಿ ಕಲಿಸಬೇಕು ಎಂದೂ ಬಯಸುತ್ತಿದ್ದಾರೆ. ನಾಲ್ಕು ಗೋಡೆಯ ನಡುವೆ ಕಾರ್ಯಕರ್ತರ ನೋವನ್ನು ನಾಯಕರು ಕೇಳುವ ಸ್ಥಿತಿ ಇಂದು ಬಿಜೆಪಿಯಲ್ಲಿಲ್ಲ. 15ರಿಂದ 25 ರೊಳಗಿನ ಯುವಜನತೆ ಬಿಜೆಪಿಯೊಂದಿಗಿಲ್ಲ ಎಂದು ರಾಜೇಶ್ ಜಿ.ವಿ. ಬೆಟ್ಟು ಮಾಡಿದರು.