ಕನ್ನಡಪ್ರಭ ವಾರ್ತೆ ಉಡುಪಿ ನಗರದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳವು ಆರೋಪಿ ಮಂಜುನಾಥ್ ಅಲಿಯಾಸ್ ಕಲ್ಕೆರೆ ಮಂಜ (43) ನನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದು, ಆತನಿಂದ 49,17,930 ಲಕ್ಷ ರು. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಎಸ್.ಟಿ. ಸುದ್ದಿಗೋಷ್ಠಿಯಲ್ಲಿ ಮಾಹಿತಿನೀಡಿದ್ದಾರೆ. ಮಂಜ ಬೆಂಗಳೂರಿನ ಉತ್ತರಹಳ್ಳಿಯ ನಿವಾಸಿಯಾಗಿದ್ದು, ಅ.31 ರಂದು ಉದ್ಯಾವರದ ಬಲಾಯಿಪಾದೆ ಜಂಕ್ಷನ್ ಬಳಿ ಈಕೊ ವಾಹನ ಸಹಿತ ಈತನನ್ನು ಬಂಧಿಸಲಾಗಿದೆ ಎಂದರು. ಅ.9 ರಂದು ಉಡುಪಿಯ ಕುಂಜಿಬೆಟ್ಟುವಿನ ಅಮ್ಮುಂಜೆ ವಿಠ್ಠಲದಾಸ್ ನಾಯಕ್ ಅವರ ಮನೆಯಲ್ಲಿ 1,882 ಗ್ರಾಂ ತೂಕದ 66,36,300 ರು. ಮೌಲ್ಯದ ಚಿನ್ನಾಭರಣ ಹಾಗು 7,450 ಗ್ರಾಂ ತೂಕದ 6,70,500 ರೂ ಮೌಲ್ಯದ ಬೆಳ್ಳಿಯ ಆಭರಣ ಸೇರಿದಂತೆ ಒಟ್ಟು 73,06,800 ರು.ಯ ಆಭರಣಗಳು ಕಳವಾದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣ ಭೇದಿಸಲು ನಗರ ಠಾಣಾ ನಿರೀಕ್ಷಕ ಮಂಜಪ್ಪ.ಡಿ.ಆರ್, ನಗರ ಠಾಣೆಯ ಕಾನೂನು ಸುವ್ಯವಸ್ಥೆ ಪಿ.ಎಸ್.ಐ ಪುನೀತ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಅದರಂತೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. 60 ಪ್ರಕರಣಗಳ ಆರೋಪಿ ಈತ: ಬಂಧಿತ ಮಂಜನಿಂದ 31,55,930 ರು. ಮೌಲ್ಯದ 530.909 ಗ್ರಾಂ ಚಿನ್ನಾಭರಣ, 15,12,000 ರು. ಮೌಲ್ಯದ 16.800 ಕೆ.ಜಿ ಬೆಳ್ಳಿಯ ಆಭರಣ ಹಾಗು ಕಳವುಗೈದು ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ 2,50,000 ರು. ಮೌಲ್ಯದ ಈಕೋ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈತನ ವಿರುದ್ಧ ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 60ಕ್ಕೂ ಕಳ್ಳತನದ ಪ್ರಕರಣ ದಾಖಲಾಗಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.