3.91 ಕೋಟಿ ಮೌಲ್ಯದ ಸ್ವತ್ತು ಅರ್ಹ ವಾರಸುದಾರರಿಗೆ ವಾಪಸ್‌: ಎಸ್‌ಪಿ

KannadaprabhaNewsNetwork |  
Published : Jul 22, 2026, 01:45 AM IST
ಕ್ಯಾಪ್ಷನ21ಕೆಡಿವಿಜಿ38, 39ದಾವಣಗೆರೆಯಲ್ಲಿಂದು ನಡೆದ ಪ್ರಾಪರ್ಟಿ ರಿಟರ್ನ್ ಪರೇಡ್ ಕಾರ್ಯಕ್ರಮದಲ್ಲಿ ಎಸ್‌ಪಿ ಎಚ್.ಟಿ.ಶೇಖರ್ ವಾರಸುದಾರರಿಗೆ ಚಿನ್ನ, ಬೆಳ್ಳಿ ಆಭರಣಗಳನ್ನು ಹಸ್ತಾಂತರಿಸಿದರು. ಪೊಲೀಸ್ ಅಧಿಕಾರಿಗಳು, ಇತರರು ಇದ್ದರು. | Kannada Prabha

ಸಾರಾಂಶ

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳೆದ ಏಳು ತಿಂಗಳ ಅವಧಿಯಲ್ಲಿ ಪತ್ತೆಯಾದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಪ್ತಿ ಮಾಡಲಾಗಿದ್ದ ಒಟ್ಟು ₹3.91 ಕೋಟಿ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂತಿರುಗಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಟಿ.ಶೇಖರ್ ತಿಳಿಸಿದ್ದಾರೆ.

- ಪೊಲೀಸ್ ಕವಾಯತು ಮೈದಾನದಲ್ಲಿ ‘ಪ್ರಾಪರ್ಟಿ ರಿಟರ್ನ್ ಪರೇಡ್’ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳೆದ ಏಳು ತಿಂಗಳ ಅವಧಿಯಲ್ಲಿ ಪತ್ತೆಯಾದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಪ್ತಿ ಮಾಡಲಾಗಿದ್ದ ಒಟ್ಟು ₹3.91 ಕೋಟಿ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂತಿರುಗಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಟಿ.ಶೇಖರ್ ತಿಳಿಸಿದರು.

ನಗರದ ಪಿ.ಜೆ. ಬಡಾವಣೆಯಲ್ಲಿರುವ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ‘ಪ್ರಾಪರ್ಟಿ ರಿಟರ್ನ್ ಪರೇಡ್’ ಕಾರ್ಯಕ್ರಮದಲ್ಲಿ ವಾರಸುದಾರರಿಗೆ ಸ್ವತ್ತುಗಳನ್ನು ವಿತರಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25ರ ಡಿ.20ರಿಂದ 2026ರ ಜುಲೈ 20 ರವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆಯಾದ ಮಾಲುಗಳನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು ಎಂದರು.

ಜಪ್ತಿ ಮಾಡಲಾಗಿದ್ದ 87 ಪ್ರಕರಣಗಳಿಗೆ ಸಂಬಂಧಿಸಿದಂತೆ ₹22.94 ಲಕ್ಷ ಮೌಲ್ಯದ 31 ವಿವಿಧ ವಾಹನಗಳು, ₹90.67 ಲಕ್ಷ ನಗದು, ₹2.16 ಕೋಟಿ ಮೌಲ್ಯದ 1,668.314 ಗ್ರಾಂ ಚಿನ್ನದ ಆಭರಣಗಳು ಹಾಗೂ 18,569.854 ಗ್ರಾಂ ಬೆಳ್ಳಿ ಆಭರಣಗಳನ್ನು ಹಿಂತಿರುಗಿಸಲಾಯಿತು.

ಅಲ್ಲದೇ ಸಿಇಐಆರ್ ಪೋರ್ಟಲ್ ನೆರವಿನಿಂದ ಪತ್ತೆ ಹಚ್ಚಲಾದ ₹56.55 ಲಕ್ಷ ಮೌಲ್ಯದ 377 ಮೊಬೈಲ್ ಫೋನ್‌ಗಳು, ₹4.87 ಲಕ್ಷ ಮೌಲ್ಯದ ಕೃಷಿ ಉಪಕರಣಗಳು, ಅಡಕೆ, ಬೋರ್‌ವೆಲ್ ವೈರ್, ಮೋಟಾರ್ ಸೇರಿದಂತೆ ಇತರೆ ವಸ್ತುಗಳನ್ನೂ ವಾರಸುದಾರರಿಗೆ ವಿತರಿಸಲಾಯಿತು ಎಂದು ಮಾಹಿತಿ ನೀಡಿದರು.

ಮಹಿಳೆಯ ಮರು ಮರಣೋತ್ತರ ಪರೀಕ್ಷೆ:

ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಆದೂರು ಗ್ರಾಮದಲ್ಲಿ ಮೃತ ಮಹಿಳೆಯ ಶವವನ್ನು ಮಕ್ಕಳು ಹೊರತೆಗೆದು ಮರು ಮರಣೋತ್ತರ ಪರೀಕ್ಷೆಗೆ ಆಗ್ರಹಿಸಿದ ಘಟನೆ ಸಂಬಂಧ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರತಿಕ್ರಿಯಿಸಿ 55 ವರ್ಷದ ಮೃತ ಈರಮ್ಮ ಅವರ ಮಕ್ಕಳು ಏಕಾಏಕಿ ಹೂತಿದ್ದ ಶವವನ್ನು ಹೊರತೆಗೆದು ಸಾಗಿಸುವ ಸಂದರ್ಭ ಮಲೇಬೆನ್ನೂರು ಪೊಲೀಸರು ಕಾರ್ಯ ಪ್ರವೃತ್ತರಾಗಿ ಶವವನ್ನು ವಶಕ್ಕೆ ಪಡೆದು, ಚಿಗಟೇರಿ ಆಸ್ಪತ್ರೆಗೆ ಸಾಗಿಸಿದ್ದರು. ಶವದ ಮರು ಮರಣೋತ್ತರ ಪರೀಕ್ಷೆ ಕೂಡ ನಡೆದಿದೆ. ಸರಿಯಾಗಿ ತನಿಖೆ ನಡೆದಿಲ್ಲ ಎಂದು ಮಕ್ಕಳ ಈ ರೀತಿ ಕೃತ್ಯ ಎಸೆಗಿದ್ದು, ನಿಸ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಅಂತಾರಾಜ್ಯ ಕಳ್ಳರ ಬಂಧನ:

ಜೈನ ದೇವಾಲಯ ಕಳವು ಪ್ರಕರಣ ಸಂಬಂಧ ಗುಜರಾತ್‌ನ ಸೂರತ್‌ಗೆ ತೆರಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅದೇ ರೀತಿ ಮನೆಗಳ ಕಳವು ಪ್ರಕರಣ ಸಂಬಂಧಿಸಿದಂತೆ ಮಧ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ, ನಗರದ ಹಲವು ಮನೆಗಳ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ದಾವಣಗೆರೆಗೆ ಕರೆ ತರಲಾಗಿದೆ ಎಂದು ತಿಳಿಸಿದರು.

ಜಿಮ್ ಟ್ರೈನರ್ ಬಂಧನ:

ನಗರದ ಜಿಮ್ ಒಂದರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿ ಜಿಮ್ ಟ್ರೈನರ್‌ನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಉಪವಿಭಾಗದ ಡಿವೈಎಸ್ಪಿ ಶರಣಬಸವೇಶ್ವರ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ, ಸೈಬರ್ ಪೊಲೀಸ್ ಠಾಣೆಯ ಡಿವೈಎಸ್ಪಿ, ಡಿಎಆರ್ ಡಿವೈಎಸ್ಪಿ, ಪೊಲೀಸ್ ನಿರೀಕ್ಷಕರು, ಪಿಎಸ್‌ಐಗಳು, ಅಪರಾಧ ವಿಭಾಗದ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

- - -

(ಟಾಪ್‌ ಕೋಟ್) ಈ ಬೃಹತ್ ಪ್ರಮಾಣದ ಸ್ವತ್ತುಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಜಿಲ್ಲೆಯ ಎಲ್ಲಾ ಡಿವೈಎಸ್‌ಪಿಗಳು, ಸಿಐಗಳು, ಎಸ್‌ಐಗಳು, ಕ್ರೈಂ ಸಿಬ್ಬಂದಿ ಹಾಗೂ ತನಿಖಾ ತಂಡಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಭಿನಂದನೆ.- ಎಚ್.ಟಿ.ಶೇಖರ್, ಪೊಲೀಸ್ ಅಧೀಕ್ಷಕ. - - -

(ಬಾಕ್ಸ್‌)* ರೌಡಿಶೀಟರ್‌ಗಳಿಗೆ ಪರೇಡ್

ದಾವಣಗೆರೆ: ಮುಂಬರುವ ಹಬ್ಬಗಳು ಹಾಗೂ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರೌಡಿಶೀಟರ್‌ಗಳ ವಿಶೇಷ ಪೆರೇಡ್ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಟಿ. ಶೇಖರ್ ತಿಳಿಸಿದರು.

ನಗರದ ಕವಾಯತ್ ಮೈದಾನದಲ್ಲಿ ಸೋಮವಾರ ರಾತ್ರಿ ನಡೆದ ಪೆರೇಡ್‌ನಲ್ಲಿ ವಿವಿಧ ಠಾಣೆಗಳ ವ್ಯಾಪ್ತಿಯ ರೌಡಿಶೀಟರ್‌ಗಳನ್ನು ಹಾಜರುಪಡಿಸಿ ಅವರ ಚಟುವಟಿಕೆಗಳು ಹಾಗೂ ಪ್ರಸ್ತುತ ನಡೆ-ನುಡಿಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಜಿಲ್ಲೆಯಾದ್ಯಂತ ಒಟ್ಟು 468 ರೌಡಿಶೀಟರ್‌ಗಳಿದ್ದು, ದಾವಣಗೆರೆ ನಗರ ವ್ಯಾಪ್ತಿಯಲ್ಲೇ 145 ರೌಡಿಶೀಟರ್‌ಗಳಿದ್ದಾರೆ. ಇವರ ಮನೆಗಳಿಗೆ ತೆರಳಿ ಕರೆತಂದು ಪೆರೇಡ್‌ನಲ್ಲಿ ಭಾಗವಹಿಸುವಂತೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರೌಡಿಶೀಟರ್‌ಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಪೊಲೀಸರು, ಯಾವುದೇ ಕಾರಣಕ್ಕೂ ಸಾರ್ವಜನಿಕ ಶಾಂತಿಭಂಗ ಮಾಡುವುದು, ಜನರನ್ನು ಬೆದರಿಸುವುದು, ರಿಯಲ್ ಎಸ್ಟೇಟ್ ದಂಧೆ, ಹಣಕ್ಕಾಗಿ ಧಮಕಿ ಹಾಕುವುದು ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಜಿಲ್ಲೆಯಿಂದ ಗಡಿಪಾರು ಮಾಡುವುದು, ಗುಂಡಾ ಕಾಯ್ದೆಯಡಿ ಕ್ರಮ ಜರುಗಿಸುವುದು ಸೇರಿದಂತೆ ವಿವಿಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಮುಂಬರುವ ಹಬ್ಬಗಳು ಶಾಂತಿಯುತವಾಗಿ ನಡೆಯುವಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಪೆರೇಡ್ ನಡೆಸಲಾಗಿದೆ ಎಂದು ತಿಳಿಸಿದರು.

- - -

-21ಕೆಡಿವಿಜಿ38, 39:

ದಾವಣಗೆರೆಯಲ್ಲಿ ಮಂಗಳವಾರ ನಡೆದ ಪ್ರಾಪರ್ಟಿ ರಿಟರ್ನ್ ಪರೇಡ್ ಕಾರ್ಯಕ್ರಮದಲ್ಲಿ ಎಸ್‌ಪಿ ಎಚ್.ಟಿ.ಶೇಖರ್ ವಾರಸುದಾರರಿಗೆ ಚಿನ್ನ, ಬೆಳ್ಳಿ ಆಭರಣಗಳನ್ನು ಹಸ್ತಾಂತರಿಸಿದರು. ಪೊಲೀಸ್ ಅಧಿಕಾರಿಗಳು, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ಭೈರತಿ ಸುರೇಶ್ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಣೆ
ಜನ ಕೇಂದ್ರಿತ ಚಿಂತನೆಗಳಿಂದ ಸಂಘಟನೆ ಯಶಸ್ಸು ಸಾಧ್ಯ