ಕನ್ನಡಪ್ರಭ ವಾರ್ತೆ ಮದ್ದೂರು
ನಗರದ ತಾಲೂಕು ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘದ ಏಕೀಕರಣ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ದಿ.ಪ್ರೊ.ಎಂ.ಡಿ.ನಂಜುಂಡಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ನಂತರ ಕಚೇರಿ ಕೆಲಕಾಲ ಧರಣಿ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿ ತರುವಾಯ ತಹಸೀಲ್ದಾರ್ ಶಿವಕುಮಾರ ಬಿರಾದಾರ ಅವರ ಮೂಲಕ ಬೇಡಿಕೆ ಕುರಿತಂತೆ ರಾಜ್ಯ ಸರ್ಕಾರಕ್ಕೆ ರೈತ ಮುಖಂಡರು ಮನವಿ ಸಲ್ಲಿಸಿದರು.ಮಳೆ ಕೊರತೆ ಕಾರಣ ರಾಜ್ಯದಲ್ಲಿ ತೀವ್ರಬರಗಾಲ ಉಂಟಾಗಿದೆ. ರೈತರಿಗೆ ಬರ ಪರಿಹಾರದ ರೂಪದಲ್ಲಿ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರು. ಪರಿಹಾರ ನೀಡಬೇಕು. ಬ್ಯಾಂಕ್ಗಳು ಮತ್ತು ಸಹಕಾರ ಸಂಘಗಳ ಎಲ್ಲಾ ಕೃಷಿ ಸಾಲಗಳನ್ನು ಒಂದು ವರ್ಷದ ಅವಧಿಗೆ ಮನ್ನಾ ಮಾಡುವುದು ಎಂದು ರೈತರು ಹಾಕ್ಕೊತ್ತಾಯ ಮಂಡಿಸಿದರು.
ಪ್ರಸಕ್ತ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ 15 ದಿನಗಳಲ್ಲಿ ಹಣ ಪಾವತಿ ಮಾಡುವುದು. ರಾಜ್ಯ ಸರ್ಕಾರ ಆದೇಶದ ಪ್ರಕಾರ ಹಿಂದಿನ 150 ರು.ಬಾಕಿ ಹಣದ ಜೊತೆಗೆ 50 ರು. ಪ್ರೋತ್ಸಾಹದ ಹಣವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಪ್ರಭುಲಿಂಗ, ಇಂಡವಾಳು ಚಂದ್ರಶೇಖರ್, ಅಣ್ಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ಸೋ.ಶಿ. ಪ್ರಕಾಶ್, ರಾಮಲಿಂಗಯ್ಯ, ವೆಂಕಟೇಶ, ರಾಮಣ್ಣ, ಉಮೇಶ್ ,ಮಂಜು ಮತ್ತಿತರರು ಭಾಗವಹಿಸಿದ್ದರು.