ಕುಟಗನಳ್ಳಿಯಲ್ಲಿ ಸಹಸ್ರಾರು ಜನರಿಗೆ ಅಸ್ತಮಾ ಔಷಧ ವಿತರಣೆ

KannadaprabhaNewsNetwork |  
Published : Jun 09, 2025, 12:03 AM IST
ಕುಟುಗನಳ್ಳಿ ಗ್ರಾಮದಲ್ಲಿ ಅಸ್ತಮಾ ಔಷಧಿ ಪಡೆಯಲು ಸೇರಿರುವ ಜನಸ್ತೋಮ | Kannada Prabha

ಸಾರಾಂಶ

ಔಷಧಿ ವಿತರಣೆ ಮಾಡಿದ ಬಳಿಕ ಅಶೋಕ ಕುಲಕರ್ಣಿ ಅವರು ಕೆಲವೊಂದು ಸಂದೇಶ ನೀಡುತ್ತಾರೆ

ಕೊಪ್ಪಳ: ತಾಲೂಕಿನ ಕುಟಗನಳ್ಳಿ ಗ್ರಾಮದಲ್ಲಿ ಭಾನುವಾರ ಮೃಗಶಿರಾ ಮಳೆ ಸೇರುವ ಸಮಯದಲ್ಲಿ ಸಹಸ್ರಾರು ಅಸ್ತಮಾ ರೋಗಿಗಳು ಔಷಧ ಸ್ವೀಕಾರ ಮಾಡಿದರು.

ಕುಲಕರ್ಣಿ ಕುಟುಂಬ ಹಲವು ವರ್ಷಗಳಿಂದ ಇಲ್ಲಿ ಔಷಧ ವಿತರಣೆ ಮಾಡುತ್ತಾ ಬರುತ್ತಿದೆ. ಇಲ್ಲಿ ಮೃಗಶಿರಾ ಮಳೆ ಸೇರುವ ವೇಳೆಯಲ್ಲಿ ಸರಿಯಾಗಿ ಔಷಧ ಸ್ವೀಕಾರ ಮಾಡಿದರೆ ಅಸ್ತಮಾ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಹಲವು ವರ್ಷಗಳಿಂದ ಜನರಲ್ಲಿದೆ. ಹೀಗಾಗಿ, ಭಾನುವಾರ ಮಧ್ಯಾಹ್ನ ಸರಿಯಾಗಿ 1 ಗಂಟೆಗೆ ಔಷಧ ಸೇವನೆ ಮಾಡಬೇಕಾಗಿದ್ದರಿಂದ ಬೆಳಗ್ಗೆಯಿಂದಲೇ ಔಷಧಿ ವಿತರಣೆ ಮಾಡಲಾಯಿತು.

ಔಷಧಿ ವಿತರಣೆ ಮಾಡಿದ ಬಳಿಕ ಅಶೋಕ ಕುಲಕರ್ಣಿ ಅವರು ಕೆಲವೊಂದು ಸಂದೇಶ ನೀಡುತ್ತಾರೆ. ಅಲ್ಲದೆ ಆಹಾರ ಸೇವನೆಯ ಕುರಿತು ಸಲಹೆ ನೀಡುತ್ತಾರೆ. ಇದಾದ ಮೇಲೆ ಗಂಟೆ ಬಾರಿಸುತ್ತಿದ್ದಂತೆ ಔಷಧ ಸ್ವೀಕಾರ ಮಾಡಲಾಗುತ್ತದೆ.

ನಾನಾ ರಾಜ್ಯದಿಂದ ಆಗಮನ:

ಇಲ್ಲಿ ಅಸ್ತಮಾ ರೋಗಕ್ಕೆ ಔಷಧ ಪಡೆಯಲು ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯದಿಂದ ಅಸ್ತಮಾ ರೋಗಿಗಳು ಆಗಮಿಸುತ್ತಾರೆ. ಸ್ಥಳೀಯರು ಎಲ್ಲ ರೋಗಿಗಳಿಗೂ ಸರಿಯಾಗಿ ಔಷಧ ಪಡೆಯುವುದಕ್ಕೆ ಸಕಲ ರೀತಿಯ ವ್ಯವಸ್ಥೆ ಮಾಡಿರುತ್ತಾರೆ. ಅಷ್ಟೇ ಅಲ್ಲ ಉಚಿತ ಪ್ರಸಾದ ವ್ಯವಸ್ಥೆಯೂ ಇರುತ್ತದೆ.

ಉಚಿತ ಸೇವೆ:

ಕುಲಕರ್ಣಿ ಕುಟುಂಬದವರೇ ಅಸ್ತಮಾ ರೋಗಕ್ಕೆ ಔಷಧ ಸಿದ್ಧ ಮಾಡಿರುತ್ತಾರೆ. ಬಂದವರು ಎಷ್ಟೇ ಸಾವಿರ ಸಂಖ್ಯೆಯಲ್ಲಿ ಆಗಲಿ ಸಂಪೂರ್ಣವಾಗಿ ಉಚಿತವಾಗಿಯೇ ನೀಡುತ್ತಾರೆ.

ಮೂರು ವರ್ಷಗಳಲ್ಲಿ ವಾಸಿ:

ಇಲ್ಲಿ ಸತತ ಮೂರು ವರ್ಷ ಔಷಧ ಪಡೆದರೆ ಅಸ್ತಮಾ ರೋಗ ಸಂಪೂರ್ಣ ನಿವಾರಣೆಯಾಗುತ್ತದೆ. ಅವರಿಗೆ ಮತ್ತೆಂದೂ ಅಸ್ತಮಾ ಬರುವುದಿಲ್ಲ ಎನ್ನುವುದು ನಂಬಿಕೆ.

ಕಲಬುರಗಿಯಿಂದ ಬಂದಿದ್ದ ಅಂಬಮ್ಮ ಎನ್ನುವ ಹಿರಿಯ ಅಜ್ಜಿ ಹೇಳುವ ಪ್ರಕಾರ, ಅವರ ಮನೆಯಲ್ಲಿ ಎಲ್ಲರಿಗೂ ಅಸ್ತಮಾ ಸಮಸ್ಯೆ ಇದೆ. ಇಲ್ಲಿ ಔಷಧ ತೆಗೆದುಕೊಂಡೇ ನಾವು ಗುಣಮುಖವಾಗಿದ್ದೇವೆ. ನಮ್ಮ ತಾಯಿಯೂ ಔಷಧ ಪಡೆದಿದ್ದರು, ನಾನು ಪಡೆದಿದ್ದೇನೆ, ಈಗ ನಮ್ಮ ಮಕ್ಕಳಿಗೂ ಕೊಡಿಸಲು ಬಂದಿದ್ದೇನೆ ಎನ್ನುತ್ತಾರೆ.

ಈ ಹಿಂದೆ ಲಕ್ಷಕ್ಕೂ ಅಧಿಕ ಅಸ್ತಮಾ ರೋಗಿಗಳು ಇಲ್ಲಿ ಬಂದು ಔಷಧ ಸ್ವೀಕಾರ ಮಾಡುತ್ತಿದ್ದರು. ಆದರೆ, ಈಗ ವಿವಿಧೆಡೆ ಔಷಧ ನೀಡುತ್ತಿರುವುದರಿಂದ ಅಲ್ಲಲ್ಲಿ ಔಷಧ ಪಡೆಯುತ್ತಾರೆ. ಹೀಗಾಗಿ, ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಈ ವರ್ಷ 30 -40 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು ಎನ್ನಲಾಗಿದೆ.

ನಮ್ಮ ಮನೆಯ ಹಿರಿಯರು ನಡೆಸಿಕೊಂಡು ಬಂದಿದ್ದಾರೆ. ಅದನ್ನು ನಾವು ಸಹ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಅಶೋಕ ಕುಲಕರ್ಣಿ ಹೇಳಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಔಷಧ ಪಡೆಯಲು ಕುಟನಗಳ್ಳಿ ಗ್ರಾಮಕ್ಕೆ ಆಗಮಿಸಿದರೂ ಯಾವುದೇ ಸಮಸ್ಯೆಯಾಗದಂತೆ ಸಂಚಾರ ದಟ್ಟಣೆ ನಿಯಂತ್ರಣ ಮಾಡಲಾಗಿದೆ ಎಂದು ಕೊಪ್ಪಳಡಿವೈಎಸ್ಪಿ ಮುತ್ತಣ್ಣ ಸರ್ವಗೋಳ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ