ಇಂದು ಅತಿರುದ್ರ ಮಹಾಯಜ್ಞ ಸಮಾರೋಪ: ಶಾಸಕ ಸಿ.ಸಿ. ಪಾಟೀಲ

KannadaprabhaNewsNetwork |  
Published : Nov 18, 2025, 01:00 AM IST
ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಸಿ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಕಾರ್ಯಕ್ರಮದ ನೇತೃತ್ವವವನ್ನು ಸಹದೇವಾನಂದ ಗಿರಿಜಿ ಮಹಾರಾಜರು ಹಾಗೂ ಕಾರ್ಯದರ್ಶಿ ಪಂಚದಶನಂ ಜುನಾ ಆಖಾಢ ಪೀಠಾಧೀಶ್ವರ ಅಮರನಾಥ ಮಹಾದೇವ ಮಠ ವಹಿಸುವರು.

ಗದಗ: ನಗರದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ 9 ಅಗ್ನಿಕುಂಡದ ಅತಿರುದ್ರ ಮಹಾಯಜ್ಞ ಹಾಗೂ 11,111 ಮುತ್ತೈದೆಯರಿಂದ ಕಿರಿಯ ಕುಂಭಮೇಳದ ಸಮಾರೋಪ, ಧರ್ಮಸಭೆ ಹಾಗೂ ಸನ್ಮಾನ ಸಮಾರಂಭ ನ. 18ರಂದು ಸಂಜೆ 4ಕ್ಕೆ ವಿದ್ಯಾದಾನ ಸಮಿತಿ ಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ಹಾಗೂ ಸಮಿತಿ ಗೌರವಾಧ್ಯಕ್ಷ ಸಿ.ಸಿ. ಪಾಟೀಲ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ನೇತೃತ್ವವವನ್ನು ಸಹದೇವಾನಂದ ಗಿರಿಜಿ ಮಹಾರಾಜರು ಹಾಗೂ ಕಾರ್ಯದರ್ಶಿ ಪಂಚದಶನಂ ಜುನಾ ಆಖಾಢ ಪೀಠಾಧೀಶ್ವರ ಅಮರನಾಥ ಮಹಾದೇವ ಮಠ ವಹಿಸುವರು. ಸಾನ್ನಿಧ್ಯವನ್ನು ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು ಹಾಗೂ ಬೂದೀಶ್ವರ ಸ್ವಾಮಿಗಳು ವಹಿಸುವರು.

ಬಳಗಾನೂರಿನ ಶಿವಶಾಂತವೀರ ಶಿವಶರಣರು, ಭೈರನಹಟ್ಟಿಯ ಶಾಂತಲಿಂಗ ಸ್ವಾಮಿಗಳು, ಜುಕ್ತಿ ಹಿರೇಮಠ ಸೂಡಿ- ಗದುಗಿನ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು, ಶಿರೋಳದ ಅಭಿನವ ಯಚ್ಚರ ಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.ಮಾಜಿ ಶಾಸಕ, ಕಾರ್ಯಕ್ರಮದ ಗೌರವಾಧ್ಯಕ್ಷ ಡಿ.ಆರ್. ಪಾಟೀಲ, ಶಾಸಕ ಸಿ.ಸಿ .ಪಾಟೀಲ ಘನ ಉಪಸ್ಥಿತರಿರಲಿದ್ದಾರೆ. ಅಧ್ಯಕ್ಷತೆಯನ್ನು ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ ಕಿರಣ ಪ್ರಕಾಶ ಭೂಮಾ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಹಲವರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ನ. 11ರಿಂದ 18ರ ವರೆಗೆ ನಡೆದ ಧಾರ್ಮಿಕ ವಿಧಿ- ವಿಧಾನ, ಹೋಮ, ಯಜ್ಞ ಕಾರ್ಯಕ್ರಮವನ್ನು ನಮ್ಮ ಜೀವಿತಾವಧಿಯಲ್ಲಿ ಎಂದೂ ನೋಡಲು ಆಗುವುದಿಲ್ಲ. ಬಹುಶಃ ಉತ್ತರ ಕರ್ನಾಟಕದಲ್ಲೇ ಅತ್ಯಂತ ದೊಡ್ಡ ಕಾರ್ಯಕ್ರಮ ಇದಾಗಿದೆ. ದೈವಿಕ ಕಾರ್ಯಕ್ರಮ ನೋಡುವುದು ಅಪರೂಪ. ಮನೆಯಲ್ಲಿ ಒಬ್ಬ ಬ್ರಾಹ್ಮಣರನ್ನು ಕರೆತಂದು ಪೂಜೆ ಮಾಡಬಹುದು. ಆದರೆ, ನೂರಾರು ಸಾಧು- ಸಂತರ ಸಮ್ಮುಖದಲ್ಲಿ ಜಾತ್ಯತೀತ, ಪಕ್ಷಾತೀತವಾಗಿ ಪೂಜಾ ಕಾರ್ಯಕ್ರಮ ನಡೆದಿದೆ. ನನ್ನ ಪಕ್ಷವನ್ನು ಹೊರಗಿಟ್ಟು ಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.

ಈ ವೇಳೆ ದೇವೇಂದ್ರ ಗಿರಿ ಶ್ರೀಗಳು, ಸಮಿತಿ ಅಧ್ಯಕ್ಷ ಕಿರಣ್ ಭೂಮಾ, ಎಚ್.ಎಸ್. ಶಿವನಗೌಡ್ರ, ರವಿ ಗುಂಜೀಕರ, ರಾಜು ಕುರಡಗಿ, ಬಸವರಾಜ ಬಿಂಗಿ, ರಮೇಶ ಸಜ್ಜಗಾರ, ವಿಜಯಲಕ್ಷ್ಮೀ ಮಾನ್ವಿ ಸೇರಿದಂತೆ ಹಲವರು ಇದ್ದರು.

ಕಾರ್ಯಕ್ರಮಕ್ಕೆ ಭೇಟಿ ನೀಡಿದ ಶ್ರೀಗಳು...ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯರು, ಸೂಡಿಮಠದ ಶ್ರೀಗಳು, ಕಾಗಿನೆಲೆ ಶಾಖಾಪೀಠದ ಅಮೋಘ ಸಿದ್ದಾನಂದಪುರಿ ಶ್ರೀಗಳು ಭೇಟಿ ನೀಡಿದ್ದರು. ಅದೇ ರೀತಿ ಮಹಾಂತ ನಾರಾಯಣ ಗಿರಿಜಿ ಮಹಾಮಂತ್ರಿ ಪ್ರಯಾಗರಾಜ ಕುಂಭಮೇಳ ಮತ್ತು ಅಂತಾರಾಷ್ಟ್ರೀಯ ಪ್ರವಕ್ತ ಪಂಚದಶನಾಮ ಜುನಾ ಅಖಾಡ, ಮಹಾಂತ ಕಂಚನ ಗಿರಿಜಿ ಮಹಾರಾಜ ಮಹಾಯಂಡಲೇಶ್ವರ ಪಂಚದಶನಾಮ ಜುನಾ ಅಖಾಡ, ಮಹಾಂತ ಧೀರೇಂದ್ರ ಗಿರಿಜಿ ಮಹಾಗುರು ದೆಹಲಿ ಸಂತ ಮಹಾಮಂಡಲ, ಮಂಗೇಶಜೀ ಬೆಂಡೆ ಅಖಿಲ ಭಾರತೀಯ ಸಂಯೋಜಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಘುನಂದನಜಿ ಅಖಿಲ ಭಾರತೀಯ ಸಹ ಸಂಯೋಜಕ ಪ್ರಜ್ಞಾಪ್ರವಾಹ ಭೇಟಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ