ಗಾಜಿನ ಬಾಟಲ್ನಿಂದ ದಾಳಿ, ಇದರಿಂದ ಗಾಜಿನ ಚೂರು ದೇಹ ಹೊಕ್ಕಿರೋ ಶಂಕೆಕನ್ನಡಪ್ರಭ ವಾರ್ತೆ. ಕಲಬುರಗಿ/ಶಹಾಬಾದ್
ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಶನಿವಾರ ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದೆ. ಕಾಗಿಣಾ ಸೇತುವೆ ಮಾಲಗತ್ತಿ ಮಧ್ಯೆ ಮಣಿಕಂಠ ಅವರ ಕಾರು ತಡೆದು ಮಾರಣಾಂತಿಕ ಹಲ್ಲೆ ನಡೆಸಿ ಗುಂಪು ಪರಾರಿಯಾಗಿದೆ.ಮಣಿಕಂಠ ರಾಠೋಡ್ ಮೇಲೆ ಶನಿವಾರ ತಡರಾತ್ರಿ ಮಾಲಗತ್ತಿ ಸಮೀಪದ ತಮ್ಮ ಫಾರ್ಮ್ ಹೌಸ್ ಮನೆಯಿಂದ ರಾತ್ರಿ 1.30 ಗಂಟೆ ಸುಮಾರಿಗೆ ಕಲಬುರಗಿ ಕಡೆಗೆ ಹೊರಟಿದ್ದಾಗ ಈ ಹಲ್ಲೆ ನಡೆದಿದೆ.
ಮಣಿಕಂಠ ರಾಠೋಡ ಅವರಿದ್ದಂತಹ ಕಾರು ತಡೆದು ದುಷ್ಕರ್ಮಿಗಳು ಮದ್ಯದ ಬಾಟಲಿ, ಕಲ್ಲುಗಳಿಂದ ದಾಳಿ ಮಾಡಿದ್ದಾರೆ. ದಾಳಿಯಿಂದಾಗಿ ಮಣಿಕಂಠ ರಾಠೋಡ ತಲೆಗೆ ಮತ್ತು ಎದೆ, ತೋಳು, ಕಿವಿಬಳಿ ತೀವ್ರ ಪೆಟ್ಟಾಗಿದೆ. ತಲೆಯಿಂದ ರಕ್ತ ಸುರಿದು ಮಣಿಕಂಠ ನೆಲಕ್ಕೆ ಬಿದ್ದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಓಡಿ ಹೋಗಿದ್ದಾರೆ ಎನ್ನಲಾಗಿದೆ.ಶನಿವಾರ ಮಧ್ಯರಾತ್ರಿ ಮಾಲಗತ್ತಿ ಗ್ರಾಮದ ಬಳಿ ಇರುವ ಎಮ್ ಆರ್ ಫಾರಂ ಹೌಸನಿಂದ ಕಲಬುರಗಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ನಡೆದಂತಹ ಈ ಹಲ್ಲೆ ಘಚನೆಯಲ್ಲಿ ಮಣಿಕಂಠ ಹಾಗೂ ಅವರ ಜೊತೆಗೆ ಇದ್ದ ಶ್ರೀ ಕಾಂತ ಸುಲೇಗಾಂವ ಎಂಬುವವರೂ ಗಾಯ ಅನುಭವಿಸಿದ್ದಾರೆ. ಇಬ್ಬರ ತಲೆಗೆ ಗಾಯ ವಾಗಿದೆ. ಇಬ್ಬರ ತಲೆಯಲ್ಲಿ ಗಾಜಿನ ಚೂರು ಸೇರಿವೆ.
ಜೊತೆಗಿದ್ದವರು ತಕ್ಷಣ ಇರಿಬ್ಬರನ್ನು ರಾತ್ರಿಯೇ ಕಲಬುರಗಿಯ ಮೇಡಿಕೇರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಐ.ರಾಘವೇಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಮೀಸಲು ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ವಿರುದ್ಧ ಮಣಿಕಂಠ ರಾಠೋಡ ಸ್ಪರ್ಧಿಸಿದ್ದರು.
ಮಣಿಕಂಠ ರಾಠೋಡ್ ಮೇಲೆ ಹಲ್ಲೆಗೆ ನಡೆಸಿದವರು ಯಾರು ಮತ್ತು ಹಲ್ಲೆಗೆ ಕಾರಣವೇನು ಎಂಬುವುದು ತಿಳಿದುಬಂದಿಲ್ಲ. ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.ಬಾಕ್ಸ್...ಪ್ರತಿಭಟನೆ ಹತ್ತಿಕ್ಕಲು ಎಂಆರ್ ಹಲ್ಲೆ ಶಂಕೆ?
ಬಿಜೆಪಿ ಚಿತ್ತಾಪುರ ಮತ ಕ್ಷೇತ್ರದ ಮುಖಂಡ ಮಣಿಕಂಠ ರಾಠೊಡ, ಪಕ್ಷದ ಇನ್ನೋರ್ವ ಮುಖಂಡ ಶ್ರೀಕಾಂತ ಸುಲೆಗಾಂವ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದರ ಹಿಂದೆ ಸೋಮವಾರ ಚಿತ್ತಾಪೂರ ತಾಲೂಕ ಬಿಜೆಪಿಯಿಂದ ವಾಡಿ ಪಟ್ಟಣದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಭಟನೆ ಹತ್ತಿಕ್ಕುವ ಷಡ್ಯಂತ್ರ ಇರಬಹುದು ಎಂದು ವಾಡಿ ಬಿಜೆಪಿ ಅಧ್ಯಕ್ಷ ಈರಣ್ಣಾ ಯಾರಿ ಶಂಕೆ ವ್ಯಕ್ತಪಡಿಸಿದ್ದಾರೆ.ಸೋಮವಾರ ಎಸಿಸಿ ಪರಿಸರ ನಿಮಯ ಉಲ್ಲಂಘನೆ ಬಗ್ಗೆ ಹಾಗೂ ವಾಡಿ ಪಟ್ಟಣದ 5 ಕೋಟಿ ರು. ವೆಚ್ಚದಲ್ಲಿ ಅರ್ಧಕ್ಕೆ ಕಾಮಗಾರಿ ಕೈಗೊಂಡಿರುವ ಶ್ರೀನಿವಾಸ ಗುಡಿ ವೃತ್ತದಿಂದ ಬಳವಡಗಿ ಕ್ರಾಸ್ ಮುಖ್ಯ ರಸ್ತೆಯ ಅವ್ಯವಹಾರದ ಬಗ್ಗೆ ತನಿಖೆಗಾಗಿ ಬೃಹತ್ ಪ್ರತಿಭಟನೆಗೆ ಬಿಜೆಪಿ ಕರೆ ನೀಡಿತ್ತು.
ಈ ಪ್ರತಿಭಟನೆಯಲ್ಲಿ ಮಣಿಕಂಠ ರಾಠೋಡ ಭಾಗವಹಿಸಿದ್ದಲ್ಲಿ ಪ್ರತಿಭಟನೆ ಕಾವು ಹೆಚ್ಚುವ ಸಾಧ್ಯತೆ ಇರುವುದರಿಂದ ಅದನ್ನು ತಗ್ಗಿಸುವ ದುರುದ್ದೇಶದಿಂದ ಹಾಗೂ ಶನಿವಾರ ವಾಡಿ ಎಸಿಸಿಯ ಅಪಾಯಕಾರಿ ತ್ಯಾಜ್ಯ ಸಾಗಿಸುವ ಲಾರಿಗಳ ವಿರುದ್ಧ ವಾಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವದರ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿರಬಹುದು ಎಂದು ಯಾರಿ ಶಂಕೆ ವ್ತಕ್ತಪಡಿಸಿದ್ದಾರೆ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ವಾಡಿ ಬಿಜೆಪಿ ಅಧ್ಯಕ್ಷ ಈರಣ್ಣಾ ಯಾರಿ ಆಗ್ರಹಿಸಿದ್ದಾರೆ.